ಮಗು ಮಾಡಿಕೊಳ್ಳೋ ವಿಚಾರಕ್ಕೆ ಗಲಾಟೆ: ಹೆಂಡತಿ ಕೊಲೆಯಲ್ಲಿ ಅಂತ್ಯ

0
49

ಬೆಂಗಳೂರು: ಗಂಡ ಹೆಂಡತಿ ನಡುವೆ ಮಗು ಮಾಡಿಕೊಳ್ಳೋ ವಿಚಾರಕ್ಕೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹೆಚ್ ಎಎಲ್ ಠಾಣಾ ವ್ಯಾಪ್ತಿಯ ಅನ್ನಸಂದ್ರದಲ್ಲಿ ನಡೆದಿದೆ. ಎನ್.ಗಿರಿಜಾ (31) ಹತ್ಯೆಯಾದ ಪತ್ನಿ, ನವೀನ್ ಕುಮಾರ ಬಂಧಿತ ಆರೋಪಿ ಪತಿ. 8 ತಿಂಗಳುಗಳ ಹಿಂದಷ್ಟೆ ರಾಮನಗರ ಮೂಲದ ನವೀನ್ ಕುಮಾರ್ ಹಾಗೂ ಭಟ್ಕಳ ಮೂಲದ ಗಿರಿಜಾಗೆ ವಿವಾಹವಾಗಿತ್ತು. ಮೃತ ಗಿರಿಜಾ ಬ್ಯೂಟಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದರೆ, ನವೀನ್ ಕುಮಾರ್ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದರು.


ಎರಡು ತಿಂಗಳ ಹಿಂದಷ್ಟೇ ಗರ್ಭಪಾತವಾಗಿದ್ದ ಗಿರಿಜಾ, ಮತ್ತೆ ಮಗುವನ್ನ ಹೊಂದಲು ಬಯಸಿದ್ದರು. ಇದಕ್ಕಾಗಿ ಪೀಡಿಸುವುದು ನವೀನ್ ಕುಮಾರ್ಗೆ ಇಷ್ಟವಿರಲಿಲ್ಲ. ಇದೇ ವಿಚಾರವಾಗಿ ಶುಕ್ರವಾರ ರಾತ್ರಿಯೂ ಇಬ್ಬರ ನಡುವೆ ಗಲಾಟೆ ಆರಂಭವಾದಾಗ ಕೋಪದಲ್ಲಿ ಪತ್ನಿಯ ಕತ್ತು ಹಿಸುಕಿ ಕೊಲೆಗೈದಿರುವುದಾಗಿ ಪೊಲೀಸರೆದುರು ನವೀನ್ ಕುಮಾರ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಮನೆಯಲ್ಲಿ ದಂಪತಿ ಗಲಾಟೆ ಮಾಡಿಕೊಳ್ಳುತ್ತಿರುವುದನ್ನ ಅರಿತ ಮನೆ ಮಾಲೀಕ ಗಮನಿಸಲು ಬಂದಾಗ, ನವೀನ್ ಕುಮಾರ್ ಗಾಬರಿಯಿಂದ ಪರಾರಿಯಾಗುತ್ತಿರುವುದು ಹಾಗೂ ಗಿರಿಜಾರ ಶವ ಮನೆಯಲ್ಲಿರುವುದನ್ನ ಗಮನಿಸಿದ್ದರು. ತಕ್ಷಣ ಮನೆ ಮಾಲೀಕ ನೀಡಿದ ಮಾಹಿತಿಯನ್ವಯ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸಮೀಪದಲ್ಲೇ ಬಸವನಗರದ ಸ್ನೇಹಿತನ ಮನೆಯಲ್ಲಿದ್ದ ಆರೋಪಿ ನವೀನ್ ಕುಮಾರನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.