No menu items!
18 C
Munich
Thursday, June 18, 2026

ಮತ್ತೊಂದು ಪ್ರೇಮಕಥೆ ಹೊತ್ತು ತಂದ ದಿಯಾ ದೀಕ್ಷಿತ್ !

Must read

ದೀಕ್ಷಿತ್ ಶೆಟ್ಟಿ ಅವರು ‘ದಿಯಾ’ ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು. ಇದೊಂದು ಸ್ಯಾಡ್ ಎಂಡಿಂಗ್ ಲವ್ಸ್ಟೋರಿ. ಈಗ ಅವರು ‘ಕೆಟಿಎಂ’ ಸಿನಿಮಾ ಮೂಲಕ ತೆರೆಮೇಲೆ ಬರೋಕೆ ರೆಡಿ ಆಗಿದ್ದಾರೆ. ಈ ಸಿನಿಮಾದಲ್ಲೂ ಪ್ರೀತಿ, ಪ್ರೇಮ ಹಾಗೂ ಲವ್ ಫೇಲ್ಯೂರ್ ಇದೆ. ಒಂದು ಕಥೆಯಲ್ಲಿ ಎರಡು ಲವ್ಸ್ಟೋರಿಗಳನ್ನು ಬೆರೆಸಲಾಗಿದೆ. ಫೆಬ್ರವರಿ 16ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಬಗ್ಗೆ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ನಾಯಕ ದೀಕ್ಷಿತ್ ಶೆಟ್ಟಿ ಮಾತನಾಡಿ, 3 ಹಾಡುಗಳು ರಿಲೀಸ್ ಆಗಿದ್ದು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಟ್ರೇಲರ್ ಗೆ ಒಂದು ನೆಗೆಟಿವ್ ಕಮೆಂಟ್ಸ್ ಕೂಡ ಬಂದಿಲ್ಲ. ಎಲ್ಲರೂ ಬಹಳ ಇಷ್ಟಪಟ್ಟಿದ್ದಾರೆ. ದಿಯಾ, ದಸರಾ ಹೀಗೆ ಪ್ರತಿ ಸಿನಿಮಾದಲ್ಲಿ ರಂಜಿಸಿಕೊಂಡು ಬರುತ್ತಿದ್ದೇನೆ. ಈ ಸಿನಿಮಾಗೆ ಜೀವ ಕೊಟ್ಟು ಮಾಡಿದ್ದೇನೆ ಸರ್. ಬರೀ ಬೆವರಿನ ಜೊತೆಗೆ ರಕ್ತನೂ ಸುರಿಸಿದ್ದೇನೆ. ತುಂಬಾ ಪ್ರಾಮಾಣಿಕವಾದ ಪ್ರಯತ್ನ. ಟ್ರೇಲರ್ ಮೂಲಕ ಭರವಸೆ ಮೂಡಿಸಿದ್ದೇವೆ ಎಂಬ ನಂಬಿಕೆ ಇದೆ. ಆ ಕಾರಣಕ್ಕಾದ್ರೂ ಸಿನಿಮಾ ಬಂದು ನೋಡಿದರೆ ದಯವಿಟ್ಟು ನಿಮಗೆ ನಿರಾಸೆಯಾಗುವುದಿಲ್ಲ ನನ್ನ ನಿಮಗೆ ಥಿಯೇಟರ್ ನಲ್ಲಿ ನೋಡುವ ಯೋಗ್ಯತೆ ಇದೆ ಎನಿಸಿದರೆ ದಯವಿಟ್ಟು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಎಂದರು.

ನಟಿ ಸಂಜನಾ ದಾಸ್ ಮಾತನಾಡಿ, ನನ್ನ ಮೊದಲ ಕಮರ್ಷಿಯಲ್ ಸಿನಿಮಾ ಕೆಟಿಎಂ. ದೀಕ್ಷಿತ್ ಶೆಟ್ಟಿ ಅವರ ಜೊತೆ ಮಾಡಬೇಕು ಎಂದಾಗ ನಾನು ಅವರಿಗೆ ಮ್ಯಾಚ್ ಆಗುತ್ತೇನೆ. ರೋಮ್ಯಾಂಟಿಕ್ ಸೀನ್ಸ್ ಮಾಡಬೇಕಿತ್ತು. ಹೇಗೆ ಮಾಡಬಹುದು ಎಂಬ ಭಯ ಇತ್ತು. ನಿರ್ದೇಶಕರಾದ ಅರುಣ್ ಸರ್ ರಿಹರ್ಸಲ್ ಮಾಡಿಸಿ ಆದ್ಮೇಲೆ ನಾನು ಕಫರ್ಟ್ ಆದೆ. ನನ್ನದು ವಿಭಿನ್ನವಾದ ಪಾತ್ರ. ಟ್ರೇಲರ್ ನೋಡಿದರೆ ಅಷ್ಟು ಗೊತ್ತಾಗುವುದಿಲ್ಲ. ಸಿನಿಮಾ ನೋಡಿದ್ರೆ ಗೊತ್ತಾಗುತ್ತದೆ ನನ್ನ ಪಾತ್ರ ಏನೂ ಅನ್ನೋದು. ಈ ಪಾತ್ರಕ್ಕೆ ತುಂಬಾ ಶೇಡ್ಸ್ ಇದೆ ಎಂದು ತಿಳಿಸಿದರು.

ನಾಯಕಿ ಕಾಜಲ್ ಕುಂದರ್ ಮಾತನಾಡಿ, ನನ್ನದು ಸಿಂಪಲ್ ಕಾಲೇಜ್ ಹುಡುಗಿ ಪಾತ್ರ. ಅವಳಿಗೆ ಜೀವನದಲ್ಲಿ ಏನ್ ಆಗಬೇಕು ಎಂಬ ಗುರಿ ಇರುತ್ತದೆ. ಆ ಗುರಿ ಮುಟ್ಟಲು ಆಕೆ ಶ್ರಮಿಸ್ತಿರುತ್ತಾಳೆ. ದೀಕ್ಷಿತ್ ಅವರ ಲೈಫ್ ನಲ್ಲಿ ನನ್ನ ಪಾತ್ರ ಬಂದಾಗ ಏನ್ ಬದಲಾಗುತ್ತದೆ. ಇದೆಲ್ಲವನ್ನೂ ಸಿನಿಮಾದಲ್ಲಿ ನೋಡಬಹುದು,. ಕೆಟಿಎಂ ಒಂದು ಬ್ಯೂಟಿಫುಲ್ ಲವ್ ಸ್ಟೋರಿ. ಪ್ರೀತಿ ಅನ್ನೋದು ಬರೀ ಹುಡುಗ ಹುಡುಗಿ ನಡುವೆ ನಡೆಯುವುದಲ್ಲ. ತಂದೆ ತಾಯಿ ನಡುವೆಯೂ ಆಗುತ್ತದೆ. ಈ ರೀತಿಯ ಸಾಕಷ್ಟು ವಿಷಯಗಳು ಚಿತ್ರದಲ್ಲಿವೆ. ಫೆ.16ಕ್ಕೆ ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಎಂದರು,.

ನಿರ್ದೇಶಕ ಅರುಣ್ ಕುಮಾರ್ ಮಾತನಾಡಿ, ಇದು ನನ್ನ ಎರಡನೇ ಸಿನಿಮಾ. ಒಂದೊಳ್ಳೆ ಕಥೆಗೆ ಒಂದೊಳ್ಳೆ ನಾಯಕ ಬೇಕು. ನಾವು ಏನೂ ಕನಸು ಕಂಡಿದ್ದೇವೋ ಅದಕ್ಕಿಂತ ಚೆನ್ನಾಗಿ ಸಿನಿಮಾ ಮೂಡಿ ಬಂದಿದೆ. ಕಾರಣ ಅದಕ್ಕೆ ದೀಕ್ಷಿತ್. ಪಾತ್ರಗಳನ್ನು ಬರೆಯುವುದು ಸುಲಭ. ಆದರೆ ತೆರೆಮೇಲೆ ತರಬೇಕು ಎಂದರೆ ಅದಕ್ಕೆ ಡಿಡಿಕೇಷನ್ ಬೇಕು. ತಾರಾಬಳಗ ಹಾಗೂ ತಾಂತ್ರಿಕ ಬಳಗ ಎಲ್ಲರೂ ಅದ್ಭುತ ಕೆಲಸ ಮಾಡಿದ್ದಾರೆ. ಎಲ್ಲಾ ಬೆಂಬಲದಿಂದ ಕೆಟಿಎಂ ಸಿನಿಮಾವಾಗಿದೆ. ಒಂದೊಳ್ಳೆ ಚಿತ್ರ ಮಾಡಿದ್ದೇವೆ. ಇದು ನೋಡುವ ಸಿನಿಮಾವಲ್ಲ. ಕಾಡುವ ಸಿನಿಮಾ ಎಂದರು.

ಕೆಟಿಎಂ ಸಿನಿಮಾದ ಹಾಡುಗಳು ಗುಂಗು ಹಿಡಿಸಿವೆ. ಟ್ರೇಲರ್ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ನಾಯಕನಾಗಿ ದೀಕ್ಷಿತ್ ಶೆಟ್ಟಿಗೆ ಸಂಜನಾ ದಾಸ್ ಹಾಗೂ ಕಾಜಲ್ ಕುಂದರ್ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಉಷಾ ಭಂಡಾರಿ, ರಘು ರಮಣಕೊಪ್ಪ, ಪ್ರಕಾಶ್ ತುಮ್ಮಿನಾಡು, ಬಾಬು ಹಿರಣ್ಣಯ್ಯ, ಶಾನಿಲ್ ಗುರು, ದೇವ್ ದೇವಯ್ಯ, ಅಭಿಷೇಕ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ತಾರಾಬಳಗದಲ್ಲಿದ್ದಾರೆ.

ಅರುಣ್ ‘ಕೆಟಿಎಂ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಇವರ ಎರಡನೇ ಪ್ರಯತ್ನ. ಈ ಮೊದಲು ‘ಅಥರ್ವ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಚಿತ್ರವನ್ನು ‘ಮಹಾಸಿಂಹ ಮೂವೀಸ್’ ಬ್ಯಾನರ್ ಅಡಿಯಲ್ಲಿ ವಿನಯ್ ನಿರ್ಮಾಣ ಮಾಡಿದ್ದಾರೆ. ರಕ್ಷಯ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ನವೀನ್ ಛಾಯಾಗ್ರಹಣ, ಚೇತನ್ ಅವರ ಸಂಗೀತ ಸಂಯೋಜನೆ, ಅರ್ಜುನ್ ಕಿಟ್ಟು ಸಂಕಲನ ಇದೆ. ಅಭಿನಂದನ್ ದೇಶಪ್ರಿಯ ಅವರು ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

- Advertisement -spot_img

More articles

- Advertisement -spot_img

Latest article