No menu items!
2.7 C
Munich
Friday, May 1, 2026

ಮಾನವ ಕಳ್ಳಸಾಗಣೆ ತಡೆದ ದಿಟ್ಟ ಮಹಿಳೆ ಸುನಿತಾ ಸ್ಫೂರ್ತಿದಾಯಕ ಸ್ಟೋರಿ

Must read

ಸುನಿತಾ ಕೃಷ್ಣನ್ ಧೈರ್ಯವಂತ ಮಹಿಳೆ. ಮಾನವ ಕಳ್ಳಸಾಗಣೆಯಂತಹ ದೊಡ್ಡ ಅಪರಾಧವನ್ನು ತಡೆಗಟ್ಟುವಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡ್ತಿದ್ದಾರೆ ಸುನಿತಾ.

ಸುನಿತಾ ಕೃಷ್ಣನ್, ತಮ್ಮ 16ನೇ ವಯಸ್ಸಿನಲ್ಲಿಯೇ ವೇಶ್ಯಾಗೃಹಕ್ಕೆ ಹೋಗಿ ಬಂದವರು. ಅದಕ್ಕೊಂದು ಬಲವಾದ ಕಾರಣವೂ ಉಂಟು. ಸುನಿತಾ 15ನೇ ವಯಸ್ಸಿನಲ್ಲಿರುವಾಗ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. ಒಂದು ಹಳ್ಳಿಯಲ್ಲಿ ದಲಿತರ ಉದ್ಧಾರಕ್ಕೆ ಮುಂದಾಗಿದ್ದರು ಸುನಿತಾ. ಅವರಿಗೆ ಶಿಕ್ಷಣ ನೀಡಲು ಪ್ರಾರಂಭಿಸಿದ್ದರು.
ಸುನೀತಾ ಅವರ ದಲಿತರ ಬಗೆಗಿನ ಒಳ್ಳೆಯ ಕೆಲಸ ನೋಡಿ ಮೇಲ್ಜಾತಿಯವರ ಕಣ್ಣು ಕೆಂಪು ಮಾಡಿತ್ತು. ದಲಿತರ ಉದ್ಧಾರ ಕಾರ್ಯವನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದರು. ಇದಕ್ಕೆ ಸುನಿತಾ ಹೆದರಿರಲಿಲ್ಲ. ಒಂದು ರಾತ್ರಿ ಸುನಿತಾ ಮೇಲೆ ದಾಳಿ ನಡೆಸಿದ್ದಲ್ಲದೆ 8 ಮಂದಿ ಸಾಮೂಹಿಕ ಬಲತ್ಕಾರ ನಡೆಸಿದ್ರು.
ಆದರೆ, ಈ ಘಟನೆಯಿಂದ ಸುನಿತಾ ದೃತಿಗೆಟ್ಟಿಲ್ಲ. ಈ ಘಟನೆ ನಡೆಯುವ ಮೊದಲು ಸುನಿತಾ ಅತ್ಯುತ್ತಮರಾಗಿದ್ದರಂತೆ. ಘಟನೆ ನಂತ್ರ ಕೆಟ್ಟವರಾಗಿಬಿಟ್ಟರಂತೆ. ಇನ್ನು ಆ ಘಟನೆಯ ನಂತ್ರ ಸುನಿತಾ ಬದುಕು ಸಂಪೂರ್ಣ ಬದಲಾಯಿತಂತೆ. ತಂದೆ ತಾಯಿಯ ಮೆಚ್ಚಿನ ಮಗಳಾಗಿದ್ದರು ಸುನಿತಾ. ಈ ಘಟನೆ ನಂತ್ರ ಮೊದಲು ಸುನಿತಾ ಮಾಡ್ತಿದ್ದ ಕೆಲಸವನ್ನು ತಂದೆ ತಾಯಿ ತಮ್ಮ ಸಂಬಂಧಿಕರಿಂದ ಮಾಡಿಸಲು ಶುರುಮಾಡಿದ್ರು.

ಸುನೀತಾರನ್ನು ಅವರನ್ನು ಸಂಬಂಧಿಕರು ತಪ್ಪಾಗಿ ತಿಳಿದುಕೊಂಡ್ರು. ಸಾಕಷ್ಟು ನಿಂದನೆ, ನೋವುಣ್ಣ ಬೇಕಾಯ್ತು. ಆದ್ರೆ ಎಂದೂ ಸುನಿತಾ ಜೀವನದಲ್ಲಿ ನಿರಾಶೆಗೊಳ್ಳಲಿಲ್ಲ. ಧೈರ್ಯಗೆಡಲಿಲ್ಲ. ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಘಟನೆ ನಡೆದ ಕೆಲವೇ ದಿನಗಳಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಹುಡುಗಿಯರು ಹಾಗೂ ಮಹಿಳೆಯರನ್ನು ಭೇಟಿಯಾಗಲು ಸುನಿತಾ ನಿರ್ಧರಿಸಿದ್ರು.
ಸುನೀತಾ ಅವರು, ನಿತ್ಯವೂ ಸಂಜೆ ವೇಶ್ಯಾಗೃಹಗಳಿಗೆ ಹೋಗ್ತಾ ಇದ್ದರು. ಅಲ್ಲಿನ ಮಹಿಳೆಯರ ಸಮಸ್ಯೆಯನ್ನು ಅರಿತರು. ಅವರನ್ನು ಈ ನರಕದಿಂದ ಹೊರತರುವ ನಿರ್ಧಾರ ಮಾಡಿದ್ರು. ಅವರನ್ನು ವೇಶ್ಯಾಗೃಹದಿಂದ ಹೊರತಂದು ಅವರಿಗೆ ಪುನರ್ವಸತಿ ನೀಡುವುದು ಸುನಿತಾ ಬದುಕಿನ ಮುಖ್ಯ ಗುರಿಯಾಯ್ತು. ಅದು ಇಂದಿಗೂ ಮುಂದುವರೆಯುತ್ತಿದೆ.

ಸುನೀತಾ ಕೃಷ್ಣನ್ ಅವರು ಮೂಲತಃ ಬೆಂಗಳೂರಿನವರು, ಈಗ ಹೈದ್ರಾಬಾದ್ ನಲ್ಲಿ ನೆಲೆ ಕಂಡಿದ್ದಾರೆ. ಕೆಳ ಮಧ್ಯಮ ವರ್ಗದಲ್ಲಿ ಜನಿಸಿದವರು ಸುನಿತಾ. ತಂದೆ ಸರ್ವೆ ಆಫ್ ಇಂಡಿಯಾದಲ್ಲಿ ಕೆಲಸ ಮಾಡ್ತಾ ಇದ್ದರು. ಅವರದ್ದೊಂದೆ ದುಡಿಮೆಯಲ್ಲಿ ಜೀವನ ಸಾಗಬೇಕಿತ್ತು. ಬೆಂಗಳೂರಿನಲ್ಲಿ ಜನಿಸಿದ ಸುನಿತಾ ಕೃಷ್ಣನ್, ರಾಜು ಹಾಗೂ ನಳಿನಿ ಕೃಷ್ಣನ್ ಎರಡನೇ ಮಗಳು.ಸುನಿತಾರಿಗೆ ಒಬ್ಬ ಸಹೋದರ ಹಾಗೂ ಇಬ್ಬರು ಸಹೋದರಿಯರಿದ್ದಾರೆ.
ತಮ್ಮ ದಾರಿಯಲ್ಲಿ ಸಾಕಷ್ಟು ನೋವುಗಳನ್ನು ಸುನಿತಾ ಕಂಡಿದ್ದಾರೆ. ಅಪರಾಧ ತಡೆಯುವ ವೇಳೆ ಅನೇಕರು ಸುನಿತಾ ಅವರಿಗೆ ಶತ್ರುಗಳಾಗಿದ್ದಾರೆ. 17 ಬಾರಿ ಸುನಿತಾ ಅವರ ಮೇಲೆ ದಾಳಿಗಳಾಗಿವೆ.ಆದ್ರೆ ಇದ್ಯಾವುದೂ ಅವರ ಮೇಲೆ ಪರಿಣಾಮ ಬೀರಿಲ್ಲ. ಇಂದಿಗೂ ಸುನಿತಾ ಅವರು ಧೈರ್ಯದಿಂದ ಮುನ್ನುಗ್ಗುತ್ತಿದ್ದಾರೆ.
1996ರಲ್ಲಿ ಬೆಂಗಳೂರಿನಲ್ಲಿ ನಡೆದಂತಹ ವಿಶ್ವ ಸುಂದರಿ ಸ್ಪರ್ಧೆ ವಿರುದ್ಧ ಹೋರಾಟ ನಡೆಸಿ ಜೈಲುವಾಸ ಕೂಡ ಅನುಭವಿಸಿದ್ದಾರೆ. ಅನಂತರದಲ್ಲಿ ಹೋರಾಟಗಾರ ಬರ್ದರ್ ವರ್ಗೀಸ್ ಜೊತೆ ಸೇರಿ ‘ಪ್ರಜ್ವಲಾ’ ಸಂಸ್ಥೆ ಕಟ್ಟಿದರು. ಆ ಸಂಸ್ಥೆ ಮೂಲಕ ‘ ಮೆಹಬೂಬ್ ಕಿ ಮೆಹಂದಿ’ ಹೊರಬಿದ್ದ ಮಹಿಳೆಯರ ಸೇವೆಗೆ ನಿಂತಿ ಎಲ್ಲರಿಂದಲೂ ಸೈ ಎನಿಸಿಕೊಳ್ಳುತ್ತಿದ್ದಾರೆ. ಇಂದಿಗೂ ಈ ಸಂಸ್ಥೆ ತನ್ನ ಕೆಲಸ ಮುಂದುವರೆಸಿದೆ.
ಕತ್ತಲ ಜೀವನದಲ್ಲಿರುವ ಮಹಿಳೆಯರಿಗೆ ಬೆಳಕು ನೀಡುವ ಕಾರ್ಯ ಮಾಡುತ್ತಿರುವ ಸುನಿತಾ ಅವರಿಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಸಮಾಜದಲ್ಲಿ ಯಾರೂ ಶೋಷಣೆಗೆ ಒಳಗಾಗಬಾರದು. ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗಬೇಕು ಎನ್ನುವುದು ಡಾ. ಸುನೀತಾ ಕೃಷ್ಣನ್ ಅವರ ಆಶಯವೂ ಹೌದು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article