No menu items!
20.3 C
Munich
Monday, June 15, 2026

ಮೆಟ್ರೋ ದರ ಏರಿಕೆ ಬಗ್ಗೆ ಪ್ರಧಾನಿ ಮುಂದೆ ಮಾತನಾಡಲಿ: ತೇಜಸ್ವಿ ಸೂರ್ಯಗೆ ಡಿ.ಕೆ. ಸುರೇಶ್ ತಿರುಗೇಟು

Must read

ಮೆಟ್ರೋ ದರ ಏರಿಕೆ ಬಗ್ಗೆ ಪ್ರಧಾನಿ ಮುಂದೆ ಮಾತನಾಡಲಿ: ತೇಜಸ್ವಿ ಸೂರ್ಯಗೆ ಡಿ.ಕೆ. ಸುರೇಶ್ ತಿರುಗೇಟು

ಬೆಂಗಳೂರು: “ಕಳೆದ 12 ವರ್ಷಗಳಿಂದ ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿರುವ ಕೊಡುಗೆಯೇ ಖಾಲಿ ಟ್ರಂಕ್. ಅದನ್ನೇ ಸಂಸದ ತೇಜಸ್ವಿ ಸೂರ್ಯ ಹಿಡಿದುಕೊಂಡು ನಿಂತಿದ್ದಾರೆ” ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಮೆಟ್ರೋ ದರ ಏರಿಕೆ ವಿರೋಧಿಸಿ ತೇಜಸ್ವಿ ಸೂರ್ಯ ಅವರು ಮೆಟ್ರೋ ನಿಲ್ದಾಣದ ಬಳಿ ಖಾಲಿ ಟ್ರಂಕ್ ಹಿಡಿದು ಪ್ರತಿಭಟನೆ ನಡೆಸುತ್ತಿರುವ ಕುರಿತು ಮಾತನಾಡಿದರು. “ಮೆಟ್ರೋ ದರ ಏರಿಕೆ ಬಗ್ಗೆ ಮಾತನಾಡಬೇಕಿದ್ದರೆ ಅವರು ಪ್ರಧಾನಮಂತ್ರಿಗಳ ಮುಂದೆ ಮಾತನಾಡಬೇಕು. ಮೆಟ್ರೋ ನಮ್ಮ ಯೋಜನೆ ಎಂದು ಪ್ರಚಾರ ಪಡೆಯುತ್ತಿರುವವರು ಯಾರು? ತೇಜಸ್ವಿ ಸೂರ್ಯ ಅವರು ಮೆಟ್ರೋ ಕೇಂದ್ರ ಸರ್ಕಾರದ ಕೊಡುಗೆ ಎಂದು ಹೇಳಿಕೊಳ್ಳುತ್ತಿದ್ದಾರೆ” ಎಂದು ಪ್ರಶ್ನಿಸಿದರು.

ಮೆಟ್ರೋ ದರ ನಿಗದಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಮಿತಿಯ ತೀರ್ಮಾನದ ಆಧಾರದ ಮೇಲೆ ನಡೆಯುತ್ತದೆ ಎಂದು ತಿಳಿಸಿದ ಸುರೇಶ್, “ದರ ಏರಿಕೆ ಆಗಬಾರದು ಎಂಬುದೇ ನಮ್ಮ ಇಚ್ಛೆಯೂ ಹೌದು. ಆದರೆ ತೇಜಸ್ವಿ ಸೂರ್ಯ ಅವರ ಬಿಜೆಪಿ ಸರ್ಕಾರವೇ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಅವರು ತೀರ್ಮಾನ ಮಾಡಿ ಜನರಿಗೆ ಅನುಕೂಲ ಮಾಡಿಕೊಡಲಿ” ಎಂದರು.

ಇದೇ ವೇಳೆ, “ಖಾಲಿ ಟ್ರಂಕ್ ಹಿಡಿದಿರುವುದು ಕರ್ನಾಟಕದಿಂದ 4.5 ರಿಂದ 5 ಲಕ್ಷ ಕೋಟಿ ರೂಪಾಯಿ ತೆರಿಗೆ ಹಣವನ್ನು ಕೇಂದ್ರ ಸರ್ಕಾರ ಲೂಟಿ ಮಾಡಿಕೊಂಡು ಹೋಗುತ್ತಿರುವುದನ್ನು ತೋರಿಸಲು. ಕಳೆದ 12 ವರ್ಷಗಳಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಿರುವ ಕೊಡುಗೆ ಪಟ್ಟಿ ಏನು ಎಂಬುದನ್ನು ಹೇಳಲಿ. ಬೆಂಗಳೂರಿಗೆ ಅವರ ಕೊಡುಗೆ ಖಾಲಿ ಡಬ್ಬ ಮಾತ್ರ ಎಂಬುದನ್ನು ತೇಜಸ್ವಿ ಸೂರ್ಯ ಅವರೇ ತೋರಿಸುತ್ತಿದ್ದಾರೆ” ಎಂದು ಕಿಡಿಕಾರಿದರು.

ಮೆಟ್ರೋ ದರ ಏರಿಕೆಗೆ ಕಾರಣ ಯಾರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವೂ ಇದೆ. ದರ ಇಳಿಕೆ ಕುರಿತು ಕೇಂದ್ರದ ಸಮಿತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರದ ತಾಂತ್ರಿಕ ಸಲಹಾ ಸಮಿತಿಯ ನಿರ್ದೇಶನದ ಮೇರೆಗೆ ದರ ಏರಿಕೆ ತೀರ್ಮಾನ ಕೈಗೊಳ್ಳಲಾಗಿದೆ. ತೇಜಸ್ವಿ ಸೂರ್ಯ ಅವರು ತಮ್ಮ ಬದ್ಧತೆಯನ್ನು ಕೇಂದ್ರ ಸರ್ಕಾರದ ಮುಂದೆ ತೋರಿಸಲಿ” ಎಂದು ಹೇಳಿದರು.

- Advertisement -spot_img

More articles

- Advertisement -spot_img

Latest article