ಸಾಯೋ ಮುನ್ನ ನಾವು ನಾವಾಗಿ ಬದುಕೋಣ..!

1
102

ಸಾಯೋ ಮುನ್ನ ನಾವು ನಾವಾಗಿ ಬದುಕೋಣ..!

ಜೀವ ನಮ್ಮ ಕೈಯಲ್ಲಿಲ್ಲ…! ಯಾವಾಗ ಏನ್ ಆಗುತ್ತೆ ಅಂತ ಯಾರೂ ಹೇಳಕ್ಕಾಗಲ್ಲ…! ಸಾವು ಅನಿಶ್ಚಿತವಾಗಿ ಬರೋ ನಿಶ್ಚಿತ…! ಆದ್ರೆ ಜೀವನ ಹಂಗಲ್ಲ. ನಮ್ ಕೈಯಲ್ಲೇ ಇದೆ. ನಮ್ ಜೀವನ ರೂಪಿಸಿ ಕೊಳ್ಳಬೇಕಾದವರು ನಾವೇ…!


ಇರೋ ಒಂದು ಲೈಫನ್ನ ನಮ್ ಇಷ್ಟದಂತೆ ರೂಪಿಸಿಕೊಂಡು ಖುಷಿ ಖುಷಿಯಿಂದ ಬದುಕಬೇಕು. ಎಷ್ಟೋ ಸಲ ದೊಡ್ಡ ದೊಡ್ಡದನ್ನು ಯೋಚಿಸ್ತಾ ಸಣ್ಣ ಸಣ್ಣದನ್ನು ಮರೆತು ಬಿಡ್ತೀವಿ. ಹಾಗಾಗಿ ಚಿಕ್ಕ ಚಿಕ್ಕ ವಿಷಯಗಳಲ್ಲೂ ಖುಷಿ ಕಾಣುವಂತೆ ನಾವು ಬದುಕ ಬೇಕು.


ದೇವರನ್ನಾಗಲಿ ಅಥವಾ ಯಾರನ್ನೇ ಆಗಲಿ ಪ್ರಾರ್ಥಿಸುವ ಮುನ್ನ ಅವರ ಬಗ್ಗೆ ಮೊದಲು ನಂಬಿಕೆ ಇರಬೇಕು. ವ್ಯಕ್ತಿಯಾಗಲಿ ಅಥವಾ ಪೂಜಿಸುವ ದೇವರಿಂದಲೇ ಆಗಲಿ ಏನನ್ನಾದರು ಕೇಳುವ ಮೊದಲು ನಮಗೆ ನಂಬಿಕೆ ಇದ್ದರೆ ಚಂದ. ನಾವೇ ಅವರನ್ನು ನಂಬದೆ, ಅವರಿಂದ ಏನಾದರು ಪ್ರಾರ್ಥಿಸಿದರೆ ಅಥವಾ ಬೇಡಿದರೆ ಹೇಗೆ…? ಒಳಗೊಂದು ಹೊರಗೊಂದು ಇರಬಾರದು.


ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯುತು ಅಂತಾರೆ. ಮಾತಾಡುವ ಮುನ್ನ ಯೋಚಿಸಬೇಕು. ಅದಕ್ಕೂ ಮುಖ್ಯವಾಗಿ ಬೇರೆಯವರ ಮಾತನ್ನು ಆಲಿಸುವ ಗುಣವನ್ನು ಬೆಳೆಸಿಕೊಳ್ಳಬೇಕು.


ಸಾಲ ಮಾಡಿ ಆದ್ರು ತುಪ್ಪ ತಿನ್ನು ಅಂತಾರೆ ಅಂತ ದುಡಿಯದೆ ಸಾಲ ಮಾಡಿ ಮಜಾ ಮಾಡಿದ್ರೆ, ಸುಖಾ ಸುಮ್ಮನೆ ಖರ್ಚು ಮಾಡಿದ್ರೆ ಭವಿಷ್ಯದಲ್ಲಿ ಕಂಡಾಪಟ್ಟೆ ತೊಂದ್ರೆ ಎದುರಿಸಬೇಕಾಗುತ್ತೆ. ಆದ್ದರಿಂದ ಖರ್ಚು ಮಾಡುವುದಕ್ಕಿಂತ ಮುನ್ನ ಸಂಪಾದಿಸುವುದನ್ನು ಕಲಿಯಬೇಕು.


ನಾವು ಲೈಫಲ್ಲಿ ಯಾವಾಗ ಸೋಲ್ತೀವಿ ಗೊತ್ತಾ…? ಪ್ರಯತ್ನವನ್ನೇ ಮಾಡದೆ ಆಗದು ಎಂದು ಕೈಕಟ್ಟಿ ಕುಳಿತುಕೊಂಡಾಗ…! ಇದು ಆಗದೆಂದು ಹಿಂದೆ ಸರಿಯುವ ಮುನ್ನ ಕನಿಷ್ಠ ಒಂದ್ಸಲ ಆದ್ರು ಪ್ರಯತ್ನ ಪಡಿ. ಪ್ರಯತ್ನಿಸಿದೇ ಸೋಲೊಪ್ಪಿಕೊಳ್ಳೋದು ನಾಚಿಕೆಗೇಡು.
ಎಲ್ಲಕ್ಕಿಂತ ಮುಖ್ಯವಾಗಿ ಸಾಯುವ ಮುನ್ನ ನೀವು ನೀವಾಗಿ ಬದುಕಿ.

ಅಪ್ಪ ಬಸ್ ಕಂಡಕ್ಟರ್ ಮಗಳು ಕ್ರೀಡಾ ತಾರೆ..!

ನಿಮಗೂ ಗೊತ್ತಿರುವಂತೆ ಭಾರತೀಯ ಕ್ರೀಡಾ ಲೋಕದಲ್ಲಿ ದೊಡ್ಡ ಹೆಸರು ಮಾಡಿರುವ ಸಾಕ್ಷಿ ಮಲ್ಲಿಕ್. ತಮ್ಮ ಅದ್ಭುತ ಆಟದ ಮೂಲಕ ಕುಸ್ತಿಯಲ್ಲಿ ಭಾರತದ ವಿಜಯ ಪತಾಕೆ ಹಾರಿಸುವ ಮೂಲಕ ಭಾರತದ ಕ್ರೀಡಾ ಇತಿಹಾಸದಲ್ಲಿ ತನ್ನ ಹೆಸರನ್ನ ಅಜರಾಮರಗೊಳಿಸಿದ್ದಾರೆ.
ಸಾಕ್ಷಿ ಮಲ್ಲಿಕ್, ಹರಿಯಾಣದ ರೋಹ್ಟಕ್ ಜಿಲ್ಲೆಯ ಮೋಖ್ರಾ ಗ್ರಾಮದವರು. ಮಲ್ಲಿಕ್ ರ ತಂದೆ ಸುಖ್ಬಿರ್, ದೆಹಲಿ ಸಾರಿಗೆ ಸಂಸ್ಥೆಯಲ್ಲಿ ಬಸ್ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಯಿ ಸುದೇಶ್ ಮಲ್ಲಿಕ್, ಆರೋಗ್ಯ ಇಲಾಖೆಯಲ್ಲಿ ಉದ್ಯೋಗಿ. ಮಲ್ಲಿಕ್ರ ತಾತ ಬದ್ಲು ರಾಮ್ ಕುಸ್ತಿಪಟು. ತಾತರಿಂದ ಪ್ರೇರೇಪಿತರಾದ ಸಾಕ್ಷಿ ಮಲ್ಲಿಕ್ ತಮ್ಮ 12ನೇ ವಯಸ್ಸಿನಲ್ಲಿಯೇ ಅಖಾಡಕ್ಕಿಳಿದು, ಈಶ್ವರ್ ದಾಹಿಯಾರವರ ಮಾರ್ಗದರ್ಶನದಲ್ಲಿ ಮುಂದುವರಿಯುತ್ತಾರೆ.


ಅಂರಾಷ್ಟ್ರೀಯ ಮಟ್ಟದಲ್ಲಿ ಸಾಕ್ಷಿಗೆ ಮೊದಲ ಯಶಸ್ಸು ಸಿಕ್ಕಿದ್ದು 2010ರ ಜ್ಯೂನಿಯರ್ ವಲ್ಡ್ ಚಾಂಪಿಯನ್ಷಿಪ್ನಲ್ಲಿ 58 ಕೆಜಿ ಪ್ರೀಸ್ಟೈಲ್ ಟೂರ್ನಿಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತೀಯರ ಪಾಲಿನ ಭರವಸೆಯ ಆಟಗಾರ್ತಿ ಆಗ್ತಾರೆ. ನಂತರ 2014ರಲ್ಲಿ ಡೇವ್ ಪುಲ್ಟ್ ಅಂತರಾಷ್ಟ್ರೀಯ ಪಂದ್ಯಾವಳಿಯ 60ಕೆಜಿ ವಿಭಾಗದಲ್ಲಿ ಭಾಗವಹಿಸಿ, ಚಿನ್ನದ ಪದಕ ಗೆಲ್ತಾರೆ.
ತಮ್ಮ ವೃತ್ತಿ ಬದುಕಿನ ಅತ್ಯಂತ ಮಹತ್ವದ ತಿರುವು ನೀಡಿದ ಸ್ಕಾಟ್ಲ್ಯಾಂಡಿನ ಗ್ಲ್ಯಾಸ್ಕೋದಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ನಲ್ಲಿ ಭಾಗವಹಿಸಿ, ಬೆಳ್ಳಿಯ ಪದಕಕ್ಕೆ ಮುತ್ತಿಕ್ಕಿದ್ರು. ದೋಹಾದಲ್ಲಿ 2015ರಂದು ನಡೆದ ಏಷಿಯನ್ ಕುಸ್ತಿ ಚಾಂಪಿಯನ್ಷಿಪ್ ನಲ್ಲಿ ಕಂಚಿನ ಪದಕ ಗೆದ್ರು. 2016ರ ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ ಸಾಕ್ಷಿ, ಕರ್ಗಿಸ್ತಾನದ ಐಸಿಲೋ ಟೈನಿಬೆಕಾವಾರನ್ನ 5-2ರ ಅಂತರದಿಂದ ಸೋಲಿಸಿ, ಕಂಚಿನ ಪದಕ ಗೆದ್ದರು. ಈ ಮೂಲಕ ಒಲಂಪಿಕ್ಸ್ನ ಕುಸ್ತಿ ಸ್ಫರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಗೌರವಕ್ಕೆ ಪಾತ್ರರಾದ್ರು.

ಕುಸ್ತಿಯಲ್ಲಿ ಸಾಧನೆ ಮಾಡಿದ ಸಾಕ್ಷಿ ಮಲ್ಲಿಕ್ ಗೆ ಕ್ರೀಡಾ ಇಲಾಖೆಯಿಂದ 2016ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಅವಾರ್ಡ್ ಹಾಗೂ ಭಾರತ ಸರ್ಕಾರ 2017ರಲ್ಲಿ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದೆ. 2016ರ ಅಕ್ಟೋಬರ್ ನಲ್ಲಿ ತಮ್ಮ ಬಾಲ್ಯದ ಗೆಳೆಯ ಅಂತರಾಷ್ಟ್ರೀಯ ಕುಸ್ತಿಪಟು ಸತ್ಯವ್ರತ್ ಕಡಿಯಾನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು, ಚಂದದ ಜೀವನ ನಡೆಸ್ತಿದ್ದಾರೆ.
ಏನೇ ಹೇಳಿ, ಸಾಕ್ಷಿ ಮಲ್ಲಿಕ್ ತಮ್ಮ ಅದ್ಭುತ ಆಟದ ಮೂಲಕ ಕುಸ್ತಿಯಲ್ಲಿ ಭಾರತದ ವಿಜಯ ಪತಾಕೆ ಹಾರಿಸುವ ಮೂಲಕ ಭಾರತದ ಕ್ರೀಡಾ ಇತಿಹಾಸದಲ್ಲಿ ತನ್ನ ಹೆಸರನ್ನ ಅಜರಾಮರಗೊಳಿಸಿದ್ದಾರೆ ಅಷ್ಟೇ ಅಲ್ಲ ತಮ್ಮ ಸಾಧನೆಯ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಕ್ರೀಡಾ ಪ್ರೇಮಿಗಳಿಗೆ ಸ್ಫೂರ್ತಿದಾಯಕರಾಗಿದ್ದಾರೆ.

 

 

ಅಂದು  ಕಿತ್ತಳೆ ಹಣ್ಣು ಮಾರುತ್ತಿದ್ರು, ಇಂದು 400 ಕೋಟಿ ರೂ ಮೌಲ್ಯದ ಕಂಪನಿ ಓನರ್..!

ಜೀವನದಲ್ಲಿ ಸಾಧಿಸುವ ಹಠ ಒಂದಿದ್ದರೆ ಸಾಕು ಯಾವ ಮಟ್ಟದ ಯಶಸ್ಸನ್ನು ಸಹ ಏರಬಹುದು. ಚಿಕ್ಕ ವಯಸ್ಸಿನಿಂದ ಕಷ್ಟಪಟ್ಟು ದುಡಿದು ತದನಂತರ ಕೋಟಿ ಕೋಟಿ ಹಣ ಸಂಪಾದಿಸುವ ದೊಡ್ಡ ಮಟ್ಟಕ್ಕೆ ಬೆಳೆದ ಹಲವಾರು ವ್ಯಕ್ತಿಗಳನ್ನು ನಾವು ನೀವೆಲ್ಲಾ ನೋಡಿದ್ದೇವೆ. ಇದೀಗ ಅಂಥದ್ದೇ ವ್ಯಕ್ತಿಗಳ ಸಾಲಿಗೆ ನಾಗ್ಪುರದ ಪ್ಯಾರಾ ಖಾನ್ ಎಂಬ ಉದ್ಯಮಿಯ ಸಹ ಸೇರಿಕೊಂಡಿದ್ದಾರೆ. ಹೌದು ಪ್ಯಾರಾ ಖಾನ್ ಎಂಬ ಉದ್ಯಮಿ ರೋಡ್ ಟ್ರಾನ್ಸ್ಪೋರ್ಟ್ ಸಂಸ್ಥೆಯ ಮಾಲೀಕ. ಈ ಕಂಪನಿಯ ಮೊತ್ತ 400 ಕೋಟಿ ರೂಪಾಯಿಗಳು..

ಪ್ಯಾರಾ ಖಾನ್ ಅವರ ಕಂಪನಿಯಲ್ಲಿ ನೂರಕ್ಕೂ ಹೆಚ್ಚು ಟ್ರಕ್ಗಳು ಮತ್ತು ಇತರ ವಾಹನಗಳು ಇವೆ. ಇಷ್ಟು ದೊಡ್ಡ ಮಟ್ಟದ ಟ್ರಕ್ ಗಳನ್ನು ಹೊಂದಿರುವ ಪ್ಯಾರಾ ಖಾನ್ ಅವರು ಈ ಹಿಂದೆ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರು ಇದ್ದರೆ ನೀವೆಲ್ಲಾ ನಂಬಲೇ ಬೇಕು. ಹೌದು ಬಡತನದ ಕುಟುಂಬದಲ್ಲಿ ಹುಟ್ಟಿದ ಪ್ಯಾರಾ ಖಾನ್ ಅವರ ವೃಶ್ಚಿಕ ವಯಸ್ಸಿನಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಕಿತ್ತಳೆ ಮಾರುತ್ತಿದ್ದರು. 18 ವರ್ಷ ತುಂಬಿದ ನಂತರ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಂಡ ಪ್ಯಾರಾ ಖಾನ್ ಅವರು ಕೊರಿಯರ್ ಕಂಪನಿಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡಿದ್ದಾರೆ. ಆದರೆ ಇಲ್ಲಿ ನಡೆದ ಅಪಘಾತದಿಂದ ಆ ಕೆಲಸವನ್ನು ಬಿಟ್ಟು ತಾವೇ ಒಂದು ಪುಟ್ಟ ಆಟೋವನ್ನು ಖರೀದಿಸಿ ಬಾಡಿಗೆಗೆ ಓಡಿಸುತ್ತಾರೆ.

ಹೀಗೆ ಮುಂದೆ ಜೀವನ ಸಾಗಿಸಿದ ನಂತರ ವೈಶ್ಯ ಬ್ಯಾಂಕ್ ನಲ್ಲಿ ಟ್ರಕ್ ಖರೀದಿಸಲು ಹನ್ನೊಂದು ಲಕ್ಷ ಸಾಲ ಬೇಕೆಂದು ಇವರು ಅರ್ಜಿಯನ್ನು ಸಲ್ಲಿಸುತ್ತಾರೆ. ಆದರೆ ಆ ಬ್ಯಾಂಕಿನ ಮ್ಯಾನೇಜರ್ ಇವರಿಗೆ ಸಾಲ ನೀಡಲು ಹಿಂದೆ ಮುಂದೆ ನೋಡುತ್ತಾರೆ ತದ ನಂತರ ಹೇಗೋ ಮಾಡಿ ಪ್ಯಾರಾ ಖಾನ್ ಅವರು ಸಾಲವನ್ನು ಗಿಟ್ಟಿಸಿಕೊಳ್ಳುತ್ತಾರೆ ಮತ್ತು ಅದನ್ನ ಕೇವಲ ಎರಡೇ ವರ್ಷಗಳಲ್ಲಿ ತೀರಿಸಿ ಬಿಡುತ್ತಾರೆ. ಹೀಗೆ ಛಲ ಬಿಡದ ಪ್ಯಾರಾ ಖಾನ್ ಅವರು ಆ ಒಂದು ಟ್ರಕ್ ಮೂಲಕ ಇಂದು ನೂರಕ್ಕೂ ಹೆಚ್ಚು ಟ್ರಕ್ ಗಳನ್ನು ಖರೀದಿಸಿದ್ದಾರೆ ಮತ್ತು ನಾನೂರು ಕೋಟಿ ಕಂಪೆನಿಯ ಮಾಲೀಕರಾಗಿದ್ದಾರೆ. ಕಿತ್ತಳೆ ಮಾರುತ್ತಿದ್ದ ಹುಡುಗ ಆಟೋ ಚಲಾಯಿಸುತ್ತಿದ್ದ ಅದೇ ಹುಡುಗ ಇಂದು ನಾಲ್ಕು ನೂರು ಕೋಟಿ ಕಂಪನಿಯ ಮಾಲೀಕ ಎಂದರೆ ನಿಜಕ್ಕೂ ನಂಬಲೇ ಬೇಕು…

ತಾಳಿ ಸರ ಮಾರಿ ಶೌಚಾಲಯ ಕಟ್ಟಿಸಿದ ಮಹಿಳೆ..!

ಮಾಂಗಲ್ಯ ಎಂಬುವುದು ವನಿತೆಯರ ಪಾಲಿನ ದೊಡ್ಡ ಆಭರಣ. ಮಹಿಳೆ ಏನೇ ಆದ್ರೂ ಮಾಂಗಲ್ಯ ಮಾರುವ ಸಹವಾಸಕ್ಕೆ ಹೋಗುವುದಿಲ್ಲ. ಆದರೆ, ತೀರಾ ಅನಿವಾರ್ಯ ಕೌಟುಂಬಿಕ ಸಮಸ್ಯೆಗಳು ಎದುರಾದಲ್ಲಿ ಮಾತ್ರ ಇಂತಹ ದಿಟ್ಟ ಹೆಜ್ಜೆ ಕೈಗೊಳ್ಳುತ್ತಾಳೆ. ಆದರೆ. ಈ ನಾರಿ ತನ್ನ ಮಾಂಗಲ್ಯ ಮಾರಿದ್ದು ಸ್ವಾರ್ಥಕಲ್ಲ.
ಪರರ ಅನುಕೂಲಕ್ಕಾಗಿ ಮಾಂಗಲ್ಯ ಮಾರಿದವರು ಅಕ್ಕಮ್ಮ. ಇವರು ಮೂಲತಃ ಕಲಬುರಗಿಯ ಜಿಲ್ಲೆಯ ಹರನಾಳ ಗ್ರಾಮದವರು. ಜೇವರ್ಗಿ ತಾಲ್ಲೂಕಿನ ಮಹಿಳೆಯರಿಗೆ ಶೌಚಾಯಲಯದ ಮಹತ್ವದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಮಹಿಳೆಯರು ಬಯಲಿಗೆ ಹೊಗುವುದರಿಂದ ಆಗುವ ಸಮಸ್ಯೆಗಳನ್ನು ಅರಿತು, ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಇವರು ಮಾಡುತ್ತಿದ್ದಾರೆ. ಅಕ್ಕಮ್ಮನವರ ಸಾಹಸಕ್ಕೆ ಕುಟುಂಬಸ್ಥರು ಸಾಥ್ ನೀಡಲಿಲ್ಲ. ಇದರಿಂದ ಎದೆಗುಂದದ ಅಕ್ಕಮ್ಮ ಅವರು ತಮ್ಮ ಮನೆಯಲ್ಲಿನ ಬಂಗಾರವನ್ನು ಮಾರಿ 10 ಕುಟುಂಬಗಳಿಗೆ ಶೌಚಾಲಯವನ್ನು ನಿರ್ಮಿಸಿದ್ದಾರೆ.


ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ಹಣ ಬಿಡುಗಡೆಗೊಳಸಿದ ಬಳಿಕ, ಗ್ರಾಮದ ಉಳಿದ ಮನೆಗಳಲ್ಲಿ ಈ ಕಾರ್ಯವನ್ನು ಮುಂದುವರಿಸಿದ್ದಾರೆ. ಸುಮಾರು ನೂರಕ್ಕೂ ಹೆಚ್ಚು ಶೌಚಾಲಯ ನಿರ್ಮಿಸಿರುವ ಅಕ್ಕಮ್ಮರ ಸಾಧನೆಗೆ ಗ್ರಾಮಸ್ಥರು ಬೆನ್ನು ತಟ್ಟಿದ್ದಾರೆ. ಈಗ ಕುಟುಂಬದರು ಅವರ ಘನಕಾರ್ಯವನ್ನು ಪ್ರಶಂಸಿಸುತ್ತಿದ್ದಾರೆ.
ಅಕ್ಕಮ್ಮನವರ ಈ ಅಮೋಘ ಕಾರ್ಯವನ್ನು ಮನಗಂಡು ರಾಜ್ಯ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿವೆ. ಅಷ್ಟೇ ಅಲ್ಲ; ಅಕ್ಕಮ್ಮ ಮಾಡಿರುವ ಈ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರು ಮುಕ್ತ ಕಂಠದಿಂದ ತಮ್ಮ ಮನ್ ಕೀ ಬಾತ್ ನಲ್ಲಿ ಕೊಂಡಾಡಿದ್ದಾರೆ.
ಸ್ವಚ್ಛ ಭಾರತ ನಿರ್ಮಾಣ ಮಾಡುವಲ್ಲಿ ಅಕ್ಕಮ್ಮ ಮಾಡಿರುವ ಕಾರ್ಯ ಪ್ರತಿಯೊಬ್ಬರಿಗೂ ಸ್ಫೂರ್ತಿ. ಇವರ ನಡೆ ಎಲ್ಲರಿಗೂ ಮಾದರಿ ಕೂಡ ಅಲ್ಲವೇ?

ಈತ ನಿದ್ರೆಯನ್ನೇ ಮಾಡದ ಪುಣ್ಯಾತ್ಮ..!

ಮಾನವನಿಗೆ ಒಂದು ವೇಳೆ ಊಟ ಇಲ್ಲದಿದ್ದರೂ ನಡೆಯುತ್ತದೆ. ಆದರೆ ನಿದ್ದೆ ಇಲ್ಲದೇ ಜೀವನ ನಡೆಸುವುದು ಭಾರೀ ಕಷ್ಟ. ದಿನಕ್ಕೆ ಕನಿಷ್ಟ ಆರು ಗಂಟೆ ನಿದ್ದೆ ಮಾಡಲೇಬೇಕು ಎನ್ನುತ್ತಾರೆ. ಅದಕ್ಕಿಂತಲೂ ಕಡಿಮೆ ನಿದ್ದೆ ಮಾಡಿದರೆ ಕೂತಲ್ಲೂ ತೂಕಡಿಸುವ ತಾಪತ್ರಯ ಬರಬಹುದು. ಆದರೆ ಇಲ್ಲೋರ್ವ ವ್ಯಕ್ತಿ ಇದ್ದಾನೆ. ಈತನಿಗೆ ನಿದ್ದೆ ಮಾಡುವುದೇ ಮರೆತುಹೋದಂತಿದೆ. ಏಕೆಂದರೆ ಈತ ಬರೋಬ್ಬರಿ 40 ವರ್ಷದಿಂದ ನಿದ್ದೆಯನ್ನೇ ಮಾಡಿಲ್ಲವಂತೆ..!
ವಿಯೇಟ್ನಾಂ ದೇಶದ ಟ್ರಂಗ್ ಹಾ ಎಂಬ ಹಳ್ಳಿಯ ಥಾಯ್ ಯಿಂಗಾಕ್ ಎಂಬ ವ್ಯಕ್ತಿ ಕಳೆದ 46 ವರ್ಷಗಳಿಂದ ನಿದ್ದೆಯನ್ನೇ ಮಾಡದೇ ವಿಜ್ಞಾನಕ್ಕೆ ಸವಾಲಾಗಿದ್ದಾರೆ. ಇಷ್ಟು ದಿನಗಳ ಅವಧಿಯಲ್ಲಿ ಥಾಯ್ ಯಿಂಗಾಕ್ ಒಂದೇ ಒಂದು ಬಾರಿ ಮಲಗಿಲ್ಲ ಎಂದರೆ ಅಚ್ಚರಿಯ ಸಂಗತಿ. ವೈದ್ಯರೂ ಕೂಡ ಹಲವು ಬಾರಿ ಇವರನ್ನು ಪರೀಕ್ಷೆಗೆ ಒಳಪಡಿಸಿದ್ದರೂ ನಿದ್ರೆ ಮಾಡದ ಈತನ ಒಳ ಮರ್ಮ ಏನೆಂಬುದನ್ನು ತಿಳಿಯಲು ಸಾಧ್ಯವಾಗಿಲ್ಲ. ಸದಾ ಕಾಲ ಚಟುವಟಿಕೆಯಿಂದ ಕೂಡಿರುವ ಇವರ ಬಗ್ಗೆ ವೈದ್ಯರು ಕೂಡ ಅಚ್ಚರಿ ವ್ಯಕ್ತಪಡಿಸುತ್ತಾರೆ.


1973 ರಲ್ಲಿ ಥಾಯ್ ಯಿಂಗಾಕ್ ಗೆ ಒಮ್ಮೆ ಜ್ವರ ಬಂದಿತ್ತು. ಅಂದಿನಿಂದ ಅವರು ನಿದ್ರೆಯನ್ನೇ ಮಾಡಿಲ್ಲ. ದೇಹ ದಣಿದಾಗ ನಿದ್ದೆ ಮಾಡಬೇಕು. ಇದರಿಂದ ದೇಹಕ್ಕೆ ವಿಶ್ರಾಂತಿ ದೊರೆತು ಲವಲವಿಕೆಯಿಂದ ಇರಲು ಸಾಧ್ಯ ಎನ್ನುತ್ತಾರೆ ವೈದ್ಯರು. ಆದರೆ ವೈದ್ಯ ಲೋಕಕ್ಕೇ ಸವಾಲಾಗುವಂತೆ ಈತ ನಿದ್ದೆಯನ್ನೇ ಮಾಡದೇ ಚಟುವಟಿಕೆಯಿಂದ ಕೆಲಸ ಮಾಡುತ್ತಾನೆ ಎಂದು ಹೇಳಲಾಗಿದೆ.
ಈತ ಕೋ ಟ್ರಂಗ್ ಎಂಬ ಬೆಟ್ಟದ ಪಕ್ಕದಲ್ಲಿರುವ ವಾಸಿಸುತ್ತಿದ್ದಾನೆ. ಈತ ಕೃಷಿ, ಕೋಳಿ, ಹಂದಿ ಸಾಕಣೆಯನ್ನು ಮಾಡುತ್ತಾನೆ. ಇನ್ನು ರಾತ್ರಿ ವೇಳೆಯಲ್ಲಿ ಕಳ್ಳಕಾಕರನ್ನು ಕಾಯುತ್ತಾ ಚಟುವಟಿಕೆಯಿಂದಿರುತ್ತಾನೆ. ವಿಶೇಷವೆಂದರೆ ಸುಮಾರು 46 ವರ್ಷದಿಂದ ನಿದ್ದೆಯನ್ನೇ ಮಾಡದಿದ್ದರೂ ಕೂಡಾ ಥಾಯ್ ಯಿಂಗಾಕ್ ಸದೃಢ ಹಾಗೂ ಆರೋಗ್ಯದಿಂದಿದ್ದಾನೆ..!

ಈ ಛಲಗಾತಿ ಸಾಧನೆ ಎಲ್ಲರಿಗೂ ಸ್ಫೂರ್ತಿ

ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದ ಛಲಗಾತಿ..! ಅಲ್ಟ್ರಾಮನ್ ಡಿಸ್ಟೆನ್ಸ್ ಸ್ಪರ್ಧೆ ಗೆದ್ದ ಏಷ್ಯಾದ ಏಕೈಕ ಆಟಗಾರ್ತಿ..! ಎಲ್ಲಾ ಕ್ಷೇತ್ರದಲ್ಲೂ ತನ್ನ ಛಾಪು ತೋರಿಸಿದ ಸಾಹಸಿ. ಜೀವನ ನಮಗೆ ಸವಾಲೊಡ್ಡದಿದ್ದರೆ ಅದು ಜೀವನವೇ ಅಲ್ಲ. ಕೆಲ ಸವಾಲುಗಳನ್ನು ಎದುರಿಸಿ ನಿಲ್ಲಲ್ಲು ಸಾಧ್ಯವಾಗೋದೆ ಇಲ್ಲ. ಆದರೆ, ಜೀವನದಲ್ಲಿ ಆಸಕ್ತಿ ಉಳಿಸಿಕೊಂಡು ಹೋಗಲು ಇಂತಹ ಸವಾಲುಗಳನ್ನು ಎದುರಿಸಲೇ ಬೇಕಾಗುತ್ತೆ. ಅಂತಹ ಸವಾಲುಗಳನ್ನು ಪ್ರತಿ ಹೆಜ್ಜೆಗೂ ಸಮರ್ಥವಾಗಿ ಎದುರಿಸಿ ಕ್ರೀಡೆಯಲ್ಲಿ ಅಧ್ಭುತ ಸಾಧನೆ ಮಾಡಿದ ಸಾಧಕಿ ಈಕೆ. ಐರನ್ ಮ್ಯಾನ್ ಟ್ರಯಾಥ್ಲಾನ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಏಷ್ಯಾದ ಮೊದಲ ಭಾರತೀಯ ಮಹಿಳೆ. ಹಾಗಾದ್ರೆ ಯಾರು ಈಕೆ..? ಇವರ ಸಾಧನೆ ಏನು ಅನ್ನೋದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಅಥ್ಲೀಟ್, ಉದ್ಯಮಿ, ಡಾಕ್ಟರ್, ಪ್ರೊಫೆಸರ್ ಮಗಳು, ಸೋದರಿ ಹೀಗೆ ಇನ್ನಿತರ ಹೆಸರುಗಳಿಂದ ಕರೆದರೂ ಇವ್ರಿಗೆ ಎಲ್ಲವೂ ಹೊಂದುತ್ತೆ.  ಒಂದೇ ಕ್ಷೇತ್ರಕ್ಕೆ ಸೀಮಿತವಾಗದೇ ಎಲ್ಲಾ ಕ್ಷೇತ್ರಗಳಿಗೂ ಕಾಲಿಟ್ಟು ತಮ್ಮ ಸಾಮರ್ಥ್ಯ ತೋರಿಸಿದ ಧೀರೆ. ಐರನ್ ಮ್ಯಾನ್ ಟ್ರಯಾಥ್ಲಾನ್ನಲ್ಲಿ ಯಶಸ್ಸು ಸಾಧಿಸಿದ ಮೊದಲ ಭಾರತೀಯ ಮಹಿಳೆ. ಆಲ್ ರೌಂಡರ್ ಮಹಿಳಾ ಸಾಧಕಿಯಾದ ಈ ಸವ್ಯಸಾಚಿಯೇ ಅನು ವೈದ್ಯನಾಥನ್. ಆಡುಮುಟ್ಟದ ಸೊಪ್ಪಿಲ್ಲ, ಅನು ಕಾಲಿಡದ ಕ್ಷೇತ್ರವಿಲ್ಲ..!ಅನುವೈದ್ಯನಾಥನ್​ಗೆ ಅದ್ಭುತ ಕ್ರೀಡಾಸಕ್ತಿ ಇದೆ. ಕ್ರೀಡಾ ಬದ್ಧತೆಯಂತೂ ಅಮೋಘ. ಅದರಲ್ಲೂ ಅಥ್ಲೆಟಿಕ್ ನ ಒಂದು ಭಾಗವಾದ ಐರನ್ಮ್ಯಾನ್ ವಿಶ್ವ ಚಾಂಪಿಯನ್ಗೆ  ಅರ್ಹತೆ ಪಡೆದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆ ಇವರದ್ದು. ಅಲ್ಟ್ರಾಮನ್ ಡಿಸ್ಟೆನ್ಸ್ ಸ್ಪರ್ಧೆ ಪೂರೈಸಿದ ಏಷ್ಯಾದ ಏಕೈಕ ಸ್ಪರ್ಧಿ ಆಗಿದ್ದರು.ಅನುವೈದ್ಯನಾಥನ್ ಶಾಲೆಗೆ ಹೋಗುವಾಗಲೇ ಸೈಕಲ್ ಓಡಿಸುವುದರಲ್ಲಿ ಪರಿಣತಿ ಹೊಂದಿದ್ದರು. ಬೇಸಿಗೆ ರಜೆಯಲ್ಲಿ ಈಜು ತರಬೇತಿ ಪಡೆಯುತ್ತಿದ್ದರು. ತಮ್ಮ ಮೂಲ ಊರಾದ ತಮಿಳುನಾಡಿಗೆ ಹೋದಾಗ ಸೈಕ್ಲಿಂಗ್ ಮತ್ತು ಸ್ವಿಮ್ಮಿಂಗ್ನಲ್ಲಿ ಹೆಚ್ಚು ತರಬೇತಿ ಪಡೆಯುತ್ತಿದ್ರು. ಕಾಲೇಜಿನಲ್ಲಿ ಯಾವುದೇ ಸ್ಪರ್ಧೆಯಾದ್ರೂ ಅದರಲ್ಲಿ ವಿಜಯಶಾಲಿಯಾಗುತ್ತಿದ್ದದ್ದೇ ಅನು ವೈದ್ಯನಾಥನ್.ಅನು ಹೆಚ್ಚಾಗಿ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ರು. ಜಿಲ್ಲಾ ಮತ್ತು ರಾಷ್ಟ್ರೀಯ ಮಟ್ಟದ ಸ್ಪರ್ದೆಯಲ್ಲಿ ವಿಜಯಶಾಲಿಯಾಗುತ್ತಿದ್ದ ಅನು ಜೀವನದಲ್ಲಿ ಐರನ್ಮ್ಯಾನ್ ಮತ್ತು ಅಲ್ಟ್ರಾಮ್ಯಾನ್ ಸ್ಪರ್ದೆಯಲ್ಲಿ ಈ ಮಟ್ಟಕ್ಕೆ ಸಾಧನೆ ಮಾಡುತ್ತೇನೆಂದು ಎಂದಿಗೂ ಕನಸ್ಸು ಕಂಡಿರಲ್ಲಿಲ್ಲ. ಮೂರು ದಿನಗಳ ಟ್ರಯಾಥ್ಲಾನ್ 10 ಕಿಮೀ ಈಜುಗಾರಿಕೆ,  420 ಕಿಮೀ ಸೈಕ್ಲಿಂಗ್ ಹಾಗು 84.4 ಕಿಮೀ ಮ್ಯಾರಥಾನ್ ಸ್ಪರ್ಧೆಗಳನ್ನು ಒಳಗೊಂಡಿರುತ್ತೆ.

ಇದನ್ನು ಸಮರ್ಥವಾಗಿ ಸ್ವೀಕರಿಸಿದ ಅನು ವೈದ್ಯನಾಥನ್ 2009 ರಲ್ಲಿ ಕೆನಡದಲ್ಲಿ ನಡೆದ ಈ ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರೈಸಿ ವಿಜಯ ಪತಾಕೆ ಹಾರಿಸಿದ್ರು.ಹೌದು ಅನು ವೈದ್ಯನಾಥನ್ ಐರನ್ಮ್ಯಾನ್ ಟ್ರಯಾಥ್ಲಾನ್ ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ರು. ಈ ಯಶಸ್ಸು ಸಾಧಿಸಿದ ಮೊಟ್ಟ ಮೊದಲ ಭಾರತೀಯ ಮಹಿಳೆ ಎನ್ನುವ ಖ್ಯಾತಿ ಪಡೆದುಕೊಂಡ್ರು. ಅಂತರಾಷ್ಟ್ರೀಯ ಸ್ಪರ್ಧಿಗಳಿಗೆ ಸೆಡ್ಡು ಹೊಡೆದು ಐರನ್ಮ್ಯಾನ್ ಸ್ಪರ್ಧೆಯಲ್ಲಿ ವಿಜೇತರಾದ ಏಷ್ಯಾದ ಏಕೈಕ ಮಹಿಳೆಯಾದ್ರು.ಕೇವಲ ಕ್ರೀಡಾ ಪಟು ಮಾತ್ರವಲ್ಲ ಬೆಂಗಳೂರಿನಲ್ಲಿ ಪಾಟ್ಎನ್ಮಾಕ್ರ್ಸ್ ಎನ್ನುವ ಉದ್ಯಮವನ್ನು ಸಹ ಸ್ಥಾಪಿಸಿದ್ದಾರೆ. ಇದರಲ್ಲಿ ನೂರಾರು ಮಂದಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. 2001 ರಲ್ಲಿ ಆರಂಭವಾದ ಪಾಟ್ಎನ್ಮಾಕ್ರ್ಸ್ ಸಂಸ್ಥೆಯನ್ನು ಲಾಭದಾಯಕವಾಗಿಯೇ ನಡೆಸುತ್ತಿದ್ದಾರೆ. ಬೆಂಗಳೂರು, ಚೆನ್ನೈ ಮತ್ತು ಆಸ್ಟಿನ್ನಲ್ಲಿ ಉಪ ಕಚೇರಿಗಳನ್ನು ತೆರೆದಿದ್ದಾರೆ.ಈ ಕಂಪನಿಯಲ್ಲಿ ಬಹುತೇಕರು ಭಾರತೀಯರೇ ದುಡಿಯುತ್ತಿದ್ದಾರೆ. ಭಾರತೀರಿಗೆ ಮೊದಲ ಅವಕಾಶ ಕೊಟ್ಟು ತಮ್ಮ ದೇಶಪ್ರೇಮ ಮೆರೆಯುತ್ತಿದ್ದಾರೆ. ಅನು ಉದ್ಯಮಿಯಾಗಿ ತಾವು ಮಾಡುತ್ತಿರುವ ಕೆಲಸವನ್ನು ನಿರಂತರವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡುತ್ತಾರೆ. ವ್ಯಕ್ತಿಯಾಗಿಯೂ  ಎಲ್ಲರಿಗೂ ಇಷ್ಟವಾಗುತ್ತಾರೆ. ಆದ್ರೆ ಅನುವೈದ್ಯನಾಥನ್ ಕಂಪನಿ ಅಥವಾ ತಮ್ಮ ವೈಯಕ್ತಿಕ ಯಶಸ್ಸಿನ ಪ್ರಚಾರದ ಹಿಂದೆ ಯಾವತ್ತಿಗೂ ಬೀಳಲಿಲ್ಲ. ಬದಲಾಗಿ ಬ್ಯುಸಿ ಕೆಲಸದ ಮಧ್ಯೆಯೂ ದಿನಕ್ಕೆ 25 ನಿಮಿಷಗಳ ಕಾಲ ವ್ಯಾಯಾಮ ಮಾಡುವ ಅನು ಎರಡು ಮಕ್ಕಳ ತಾಯಿ ಕೂಡ ಹೌದು.ಒಟ್ಟಾರೆಯಾಗಿ ಅಥ್ಲೀಟ್ ಆಗಿ, ಉದ್ಯಮಿಯಾಗಿ, ಕೆಲಸಗಾರಳಾಗಿ ಇನ್ನಿತರ ಕ್ಷೇತ್ರಗಳಲ್ಲೂ ಅನುವೈದ್ಯನಾಥನ್ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಅನುವೈದ್ಯನಾಥನ್ ಕರ್ನಾಟಕದ ಮಾದರಿ ಹೆಣ್ಣುಮಗಳು ಅನ್ನೋದೆ ನಮ್ಮ ಹೆಮ್ಮೆ.

 

 

 

 

 

1 COMMENT

LEAVE A REPLY

Please enter your comment!
Please enter your name here