ಹುಬ್ಬಳ್ಳಿಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವು

0
48

ಹುಬ್ಬಳ್ಳಿ: ಗಣೇಶ ಟ್ರಾವೆಲರ್ಸ್‌ ಬಸ್ಸಿಗೆ ಕಾರೊಂದು ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಂಚಟಗೇರಿ ಸಮೀಪದ ಕಾರವಾರ ರಸ್ತೆಯಲ್ಲಿ ಸಂಭವಿಸಿದೆ. ಕಾರಿನಲ್ಲಿದ್ದ ನಾಲ್ವರು ಆಂಧ್ರ ಕರ್ನೂಲು ಜಿಲ್ಲೆಯವರು. ಇವರ ಕಾರಿನಲ್ಲಿ ಮದ್ಯದ ಬಾಟಲಿಗಳು ದೊರಕಿವೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಗಾಯಾಳುವನ್ನು ಪ್ರದೀಪ ಕುಮಾರ್ ಹೈದರಾಬಾದ್ ಗಾಯತ್ರಿನಗರ ಬೋರಬಂಧ ನಿವಾಸಿ ಎಂದು ಗುರುತಿಸಲಾಗಿದೆ. ಈತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೂವರು ಮೃತರಲ್ಲಿ ಒಬ್ಬನ ಗುರುತು ಸಿಕ್ಕಿದ್ದು ಮೃತನನ್ನು ಹೈದರಾಬಾದ್ ಉಪ್ಪಳ ನಿವಾಸಿ ಸೀತಾರಾಮ್ ಲೌಡಿಯಾ ಎಂದು ಗುರುತಿಸಲಾಗಿದೆ‌. ಕೆಲಸದ ನಿಮಿತ್ಯ ಸ್ನೇಹಿತರ ಜೊತೆ ಹುಬ್ಬಳ್ಳಿಗೆ ಹೋಗಿ ಬರುವುದಾಗಿ ತಿಳಿಸಿದ್ದ. ಕಾರಿನಲ್ಲಿ ಇನ್ನುಳಿದವರ ಬಗ್ಗೆ, ಮತ್ತೆ ಯಾರಿದ್ದರು ಎಂಬ ಮಾಹಿತಿ ಇಲ್ಲ ಎಂದು ಮೃತನ ಸಂಬಂಧ ವರ್ಧನ್ ಎಂಬುವವರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.