ಈಡನ್ ಗಾರ್ಡನ್ಸ್ ಮೈದಾನದಲ್ಲಿ ಬುಧವಾರ ರಾತ್ರಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಬೌಲರ್ಗಳಿಗೆ ಸ್ವರ್ಗದಂತಿದ್ದ ಪಿಚ್ನಲ್ಲಿ ಕನ್ನಡಿಗ ಮನೀಶ್ ಪಾಂಡೆ ಅವರ ಆಲ್ರೌಂಡ್ ಪ್ರದರ್ಶನ ಮತ್ತು ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಅಜಿಂಕ್ಯ ರಹಾನೆ ಬಳಗ ಪ್ಲೇಆಫ್ ರೇಸ್ನಲ್ಲಿ ಜೀವಂತವಾಗಿ ಉಳಿದುಕೊಂಡಿದೆ. ಇತ್ತ ಸತತ 9ನೇ ಸೋಲುಂಡ ಹಾರ್ದಿಕ್ ಪಾಂಡ್ಯ ಪಡೆ ಪಾಯಿಂಟ್ಸ್ ಟೇಬಲ್ನಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಕೆಕೆಆರ್ ಬೌಲರ್ಗಳು ಆರಂಭದಲ್ಲೇ ಆಘಾತ ನೀಡಿದರು. ಓಪನರ್ ರಯಾನ್ ರಿಕಲ್ಟನ್ ಕೇವಲ 6 ರನ್ಗೆ ಔಟಾದರೆ, ನಮನ್ ಧೀರ್ ಖಾತೆ ತೆರೆಯಲು ಕೂಡ ಸಾಧ್ಯವಾಗದೆ ಪೆವಿಲಿಯನ್ ಸೇರಿದರು. ಈ ವೇಳೆ ಅಪಾಯಕಾರಿಯಾಗುವ ಲಕ್ಷಣ ತೋರಿದ್ದ ಹಿಟ್ಮ್ಯಾನ್ ರೋಹಿತ್ ಶರ್ಮಾ (15 ರನ್) ಮತ್ತು ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ (15 ರನ್) ಅವರನ್ನು ಸೌರಭ್ ದುಬೆ ಬ್ಯಾಕ್ ಟು ಬ್ಯಾಕ್ ಪೆವಿಲಿಯನ್ಗೆ ಅಟ್ಟುವ ಮೂಲಕ ಮುಂಬೈ ಬೆನ್ನೆಲುಬು ಮುರಿದರು.
ನಾಯಕ ಹಾರ್ದಿಕ್ ಪಾಂಡ್ಯ (26 ರನ್) ಮತ್ತು ತಿಲಕ್ ವರ್ಮಾ (20 ರನ್) ಕ್ರೀಸ್ನಲ್ಲಿ ನಿಂತರೂ ವೇಗವಾಗಿ ರನ್ ಗಳಿಸಲು ಕೆಕೆಆರ್ ಬೌಲರ್ಗಳು ಬಿಡಲಿಲ್ಲ. ಅಂತಿಮ ಹಂತದಲ್ಲಿ ಕಾರ್ಬಿನ್ ಬಾಷ್ ಕೇವಲ 18 ಎಸೆತಗಳಲ್ಲಿ 32 ರನ್ಗಳ ಬಿರುಸಿನ ಆಟ ಆಡದೇ ಹೋಗಿದ್ದರೆ ಮುಂಬೈ ಕನಿಷ್ಠ ಮೊತ್ತಕ್ಕೂ ಪರದಾಡಬೇಕಾಗುತ್ತಿತ್ತು. ಅಂತಿಮವಾಗಿ ಮುಂಬೈ ತಂಡ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಲಷ್ಟೇ ಶಕ್ತವಾಯಿತು. ಕೆಕೆಆರ್ ಪರ ಸೌರಭ್ ದುಬೆ, ಕ್ಯಾಮರೂನ್ ಗ್ರೀನ್ ಮತ್ತು ಕಾರ್ತಿಕ್ ತ್ಯಾಗಿ ತಲಾ 2 ವಿಕೆಟ್ ಕಿತ್ತು ಮಿಂಚಿದರು.
ಕೇವಲ 148 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಕೋಲ್ಕತ್ತಾ ತಂಡಕ್ಕೂ ಆರಂಭದಲ್ಲೇ ನಡುಕ ಶುರುವಾಗಿತ್ತು. ಬಿಗ್ ಹಿಟ್ಟರ್ ಫಿನ್ ಅಲೆನ್ (8 ರನ್) ಮತ್ತು ನಾಯಕ ಅಜಿಂಕ್ಯ ರಹಾನೆ (21 ರನ್) ಬೇಗನೇ ಔಟಾದರು. ಇದರ ಬೆನ್ನಲ್ಲೇ ಕ್ಯಾಮರೂನ್ ಗ್ರೀನ್ (4 ರನ್) ಕೂಡ ಬಂದ ದಾರಿಯಲ್ಲೇ ವಾಪಸ್ ನಡೆದಾಗ ಕೆಕೆಆರ್ 54 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಮುಂಬೈ ಬೌಲರ್ಗಳು ಮ್ಯಾಚ್ ಮೇಲೆ ಹಿಡಿತ ಸಾಧಿಸುತ್ತಿದ್ದ ಹೊತ್ತಿನಲ್ಲಿ ಕ್ರೀಸ್ಗೆ ಬಂದಿದ್ದೇ ಕನ್ನಡಿಗ ಮನೀಶ್ ಪಾಂಡೆ.
ಈ ಸೀಸನ್ನಲ್ಲಿ ಮೊದಲ ಬಾರಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕ ಹೆಮ್ಮೆಯ ಕನ್ನಡಿಗ ಮನೀಶ್ ಪಾಂಡೆ, ವೆಸ್ಟ್ ಇಂಡೀಸ್ ದೈತ್ಯ ರೋವ್ಮನ್ ಪೊವೆಲ್ ಜೊತೆ ಸೇರಿ ಮುಂಬೈ ಬೌಲರ್ಗಳ ವಿರುದ್ಧ ಸಿಡಿದೆದ್ದರು. ಈ ಇಬ್ಬರು ಜೋಡಿ 4ನೇ ವಿಕೆಟ್ಗೆ ಅಮೂಲ್ಯವಾದ 64 ರನ್ಗಳ ಜೊತೆಯಾಟವಾಡುವ ಮೂಲಕ ಮುಂಬೈ ಕೈಯಿಂದ ಪಂದ್ಯವನ್ನು ಕಸಿದುಕೊಂಡರು. ಮನೀಶ್ ಪಾಂಡೆ 33 ಎಸೆತಗಳಲ್ಲಿ 8 ಬೌಂಡರಿಗಳ ನೆರವಿನಿಂದ 45 ರನ್ಗಳ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದರೆ, ಪೊವೆಲ್ 40 ರನ್ ಚಚ್ಚಿ ಔಟಾದರು.
ಕೊನೆಯಲ್ಲಿ ಸಿಕ್ಸರ್ ಕಿಂಗ್ ರಿಂಕು ಸಿಂಗ್ ತಂಡಕ್ಕೆ ಜಯದ ಸವಿ ಉಣಿಸಿದರು. ಇನ್ನೂ 7 ಎಸೆತಗಳು ಬಾಕಿ ಇರುವಂತೆಯೇ ಕೆಕೆಆರ್ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಬ್ಯಾಟಿಂಗ್ನಲ್ಲಿ ಅಬ್ಬರಿಸಿದ್ದಲ್ಲದೆ ಫೀಲ್ಡಿಂಗ್ನಲ್ಲೂ ಅದ್ಭುತ ಕ್ಯಾಚ್ ಹಿಡಿದು ಮುಂಬೈ ಮೇಲೆ ಒತ್ತಡ ಹೇರಿದ್ದ ಕನ್ನಡಿಗ ಮನೀಶ್ ಪಾಂಡೆಗೆ ಅರ್ಹವಾಗಿಯೇ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿ ಒಲಿಯಿತು.
ಈ ಗೆಲುವಿನೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆಡಿರುವ 13 ಪಂದ್ಯಗಳಲ್ಲಿ 6 ಜಯದೊಂದಿಗೆ 13 ಅಂಕಗಳನ್ನು ಕಲೆಹಾಕಿ ಪಾಯಿಂಟ್ಸ್ ಟೇಬಲ್ನಲ್ಲಿ 6ನೇ ಸ್ಥಾನಕ್ಕೆ ಜಿಗಿದಿದೆ. ಈ ಮೂಲಕ ರಹಾನೆ ಪಡೆಯ ಪ್ಲೇಆಫ್ ಕನಸು ಇನ್ನೂ ಜೀವಂತವಾಗಿದೆ. ಮತ್ತೊಂದೆಡೆ, 5 ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಈ ಭೀಕರ ಸೋಲಿನೊಂದಿಗೆ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ.



