ಉತ್ತರ ಪ್ರದೇಶದ ಹಮೀರ್ಪುರದಲ್ಲಿ ನಡೆದಿರುವ ಈ ಘಟನೆ ಕೇಳಿದರೆ ಮೈ ನವಿರೇಳುತ್ತದೆ. ಕೇವಲ 44 ಲಕ್ಷ ರೂಪಾಯಿ ವಿಮೆ ಹಣಕ್ಕಾಗಿ ಪತಿಯೇ ತನ್ನ ಹೆಂಡತಿಯನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಹಣದ ಆಸೆಗೆ ಬಲಿಪಶುವಾದ ಆ ಹತಭಾಗ್ಯ ಮಹಿಳೆಯ ಕಥೆ ಸದ್ಯ ಇಡೀ ಊರನ್ನೇ ಬೆಚ್ಚಿಬೀಳಿಸಿದೆ.
ಕೊಲೆಯಾದ ಮಹಿಳೆಯನ್ನು ರೀಟಾ ಎಂದು ಗುರುತಿಸಲಾಗಿದೆ. ರೀಟಾಗೆ ಮೊದಲ ಪತಿ ತೀರಿಕೊಂಡ ಬಳಿಕ ಕಾನ್ಪುರದಲ್ಲಿ ಅಮರ್ ಸಿಂಗ್ ಪರಿಚಯವಾಗಿದ್ದು, ಇಬ್ಬರೂ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ರೀಟಾಗೆ ಮೊದಲ ಮದುವೆಯಿಂದ ನಾಲ್ವರು ಮಕ್ಕಳಿದ್ದಾರೆ. ಎಲ್ಲರೊಂದಿಗೆ ನೆಮ್ಮದಿಯಾಗಿ ಬಾಳಬೇಕಿದ್ದ ಆಕೆಯ ಬದುಕಿನಲ್ಲಿ, ಆಕೆ ನಂಬಿದ ಗಂಡನೇ ಯಮನಾಗಿ ಕಾಡುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ.
ಹಾಗೇ ನೋಡಿದರೆ ಅಮರ್ ಸಿಂಗ್ ಅಸಲಿ ಉದ್ದೇಶವೇ ಬೇರೆ ಇತ್ತು. ಹೇಗಾದರೂ ಮಾಡಿ ಸುಲಭವಾಗಿ ಹಣ ಸಂಪಾದಿಸಬೇಕು ಎಂದುಕೊಂಡ ಆತ, ಪತ್ನಿಯ ಜೀವದ ಮೇಲೆಯೇ ಕಣ್ಣುಹಾಕಿದ್ದ. ಯೋಜನೆ ಪ್ರಕಾರ, ಬರೋಬ್ಬರಿ 44 ಲಕ್ಷ ರೂಪಾಯಿಯ ಜೀವವಿಮೆ ಪಾಲಿಸಿಯನ್ನು ರೀಟಾ ಹೆಸರಿನಲ್ಲಿ ಮಾಡಿಸಿದ್ದ. ಆ ವಿಮಾ ಪಾಲಿಸಿಯ ಮೊದಲ ಪ್ರೀಮಿಯಂ ಮೊತ್ತವಾಗಿ ಬರೋಬ್ಬರಿ 2.60 ಲಕ್ಷ ರೂಪಾಯಿಗಳನ್ನು ಕಟ್ಟಿ, ವಿಮೆ ಹಣವನ್ನು ಹೇಗಾದರೂ ಮಾಡಿ ದೋಚಿಕೊಳ್ಳಲು ದೊಡ್ಡದೊಂದು ಸಂಚನ್ನೇ ರೂಪಿಸಿದ್ದ.
ತನ್ನ ದುಷ್ಟ ಯೋಜನೆಗೆ ಮೂವರು ಸ್ನೇಹಿತರನ್ನು ಸಹ ಒಳಗೆ ಸೇರಿಸಿಕೊಂಡಿದ್ದ. ರೀಟಾಳನ್ನು ಲಾಲ್ಪುರ ಪ್ರದೇಶದ ಬೈತ್ಕಾ ಧಾಮ್ ದೇವಾಲಯದ ಬಳಿ ಕರೆದೊಯ್ದು, ಕೈಯಲ್ಲಿ ಕೋಲು ಮತ್ತು ದೊಣ್ಣೆಗಳನ್ನು ಹಿಡಿದು ಮನಬಂದಂತೆ ಥಳಿಸಿ ಸಾಯಿಸಿದ್ದಾರೆ. ಅಷ್ಟಕ್ಕೆ ಮುಗಿಯಲಿಲ್ಲ; ಇದನ್ನು ಯಾರೋ ವಾಹನ ಹರಿಸಿ ಮಾಡಿದ ಆಕ್ಸಿಡೆಂಟ್ ಎಂದು ನಂಬಿಸಲು, ಆಕೆಯ ಹೆಣದ ಮೇಲೆ ಕಾರು ಹರಿಸಿ, ಬಳಿಕ ಸುಟ್ಟುಹಾಕಲು ಕೂಡ ಪ್ರಯತ್ನ ನಡೆಸಿದ್ದರು.
ಇಷ್ಟು ಕೃತ್ಯ ಎಸಗಿ ಸುಮ್ಮನಿರದ ಅಮರ್ ಸಿಂಗ್, ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ನನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂದು ಮೊಸಳೆ ಕಣ್ಣೀರು ಹಾಕಿ ದೂರು ಕೂಡ ಕೊಟ್ಟಿದ್ದ. ಆದರೆ, ಆತನ ಹೇಳಿಕೆ ಮತ್ತು ಪೊಲೀಸರ ತನಿಖಾ ತಂತ್ರದ ಮುಂದೆ ಆತನ ಸುಳ್ಳುಗಳು ಹೆಚ್ಚು ಕಾಲ ನಿಲ್ಲಲಿಲ್ಲ. ಪೊಲೀಸರು ತಮ್ಮ ಸ್ಟೈಲ್ನಲ್ಲಿ ವಿಚಾರಣೆ ನಡೆಸುತ್ತಿದ್ದಂತೆ ಆತ ಮಾಡಿದ ಪಾಪದ ಕೃತ್ಯದ ಒಂದೊಂದೇ ಸತ್ಯಗಳು ಹೊರಬಂದವು.
ಈ ದುರಾಚಾರಿಗಳ ಕ್ರೌರ್ಯ ಎಷ್ಟಿತ್ತು ಎಂಬುದು ಮರಣೋತ್ತರ ಪರೀಕ್ಷಾ ವರದಿಯನ್ನು ನೋಡಿದರೆ ಸ್ಪಷ್ಟವಾಗುತ್ತದೆ. ರೀಟಾಳ ದೇಹದ ಮೇಲೆ ಬರೋಬ್ಬರಿ 12 ಕ್ಕೂ ಹೆಚ್ಚು ಕರಾಳ ಗಾಯಗಳಿದ್ದವು. ಆಕೆಯ ಮೂತ್ರಪಿಂಡವನ್ನು ಹೊರತುಪಡಿಸಿ, ದೇಹದ ಉಳಿದ ಎಲ್ಲಾ ಪ್ರಮುಖ ಆಂತರಿಕ ಅಂಗಾಂಗಗಳು ಸಂಪೂರ್ಣವಾಗಿ ಜಜ್ಜಲ್ಪಟ್ಟು ನಜ್ಜುಗುಜ್ಜಾಗಿದ್ದವು. ಇದನ್ನು ನೋಡಿದ ಡಾಕ್ಟರ್ ಗಳೇ ಅಯ್ಯೋ ಪಾಪ ಎಂದಿದ್ದರು.
ಸದ್ಯ ಅಮರ್ ಸಿಂಗ್ ಸೇರಿದಂತೆ ಆತನ ಮೂವರು ಸಹಚರರನ್ನು ಪೊಲೀಸರು ಲಾಕ್ ಮಾಡಿ ಒಳಹಾಕಿದ್ದಾರೆ. ಸಾಕ್ಷ್ಯಗಳನ್ನು ನಾಶ ಮಾಡಲು ಎಷ್ಟೇ ತಿಪ್ಪರಲಾಗ ಹಾಕಿದರೂ, ಪೊಲೀಸರು ಕೇವಲ 24 ಗಂಟೆಗಳಲ್ಲಿ ಇಡೀ ಪ್ರಕರಣವನ್ನು ಭೇದಿಸಿರುವುದು ನಿಜಕ್ಕೂ ದೊಡ್ಡ ಸಾಧನೆ. ಅಪ್ಪನ ಕೃತ್ಯದಿಂದ ತಾಯಿ ಇಲ್ಲದೆ ಆ ನಾಲ್ವರು ಮುಗ್ದ ಮಕ್ಕಳು ಅನಾಥರಾಗಿದ್ದಾರೆ.



