No menu items!
2.7 C
Munich
Friday, May 1, 2026

ಮಹಾಮಾರಿ ಕ್ಯಾನ್ಸರ್ ಗೆದ್ದ ಕಲಾವಿದೆಯ ಯಶೋಗಾಥೆ..!

Must read

ಶೆರಿಲ್ ಬ್ರಗಾಂಜಾ. ಇವರ ಬದುಕಂತೂ ವರ್ಣಮಯ. ಅದ್ಭುತ ಪೈಂಟರ್ ! ಬ್ರಗಾಂಜಾ ಅವರು ಹುಟ್ಟಿದ್ದು ಮುಂಬೈನಲ್ಲಿ. ಆದ್ರೆ ಬೆಳೆದಿದ್ದೆಲ್ಲ ಪಾಕಿಸ್ತಾನದ ಲಾಹೋರ್ನಲ್ಲಿ. ಶೆರಿಲ್ ತಂದೆ ಹೋಟೆಲ್ ನಡೆಸುತ್ತಿದ್ದರು. ಭಾರತ – ಪಾಕಿಸ್ತಾನ ಇಬ್ಭಾಗವಾದ ಸಂದರ್ಭದಲ್ಲಿ ನಡೆದ ಭಾರೀ ಹಿಂಸಾಚಾರಕ್ಕೂ ಈ ಕುಟುಂಬ ಸಾಕ್ಷಿಯಾಗಿದೆ.
ಬಾಲ್ಯದಿಂದಲೇ ಬ್ರಗಾಂಜಾ ಅವರಿಗೆ ಕಲೆಯಲ್ಲಿ ಅತೀವ ಆಸಕ್ತಿಯಿತ್ತು. ಆದರೆ ಅದನ್ನು ವ್ಯಕ್ತಪಡಿಸಲಾಗದೆ ಮುಜುಗರ ಅನುಭವಿಸುತ್ತಿದ್ದರು. ಈ ಸಂದರ್ಭದಲ್ಲಿ ಹುಟ್ಟು ಕಲಾವಿದೆಯ ನೆರವಿಗೆ ಬಂದವರು ಅವರ ಸಹೋದರ. 1960ರಲ್ಲಿ ಬ್ರಗಾಂಝಾ ಉನ್ನತ ವಿದ್ಯಾಭ್ಯಾಸಕ್ಕಾಗಿ ಲಂಡನ್ಗೆ ಹಾರಿದರು. ಅಲ್ಲಿಂದ ಅವರ ಬದುಕು ಸಂಪೂರ್ಣ ಬದಲಾಗಿತ್ತು.
1966ರಲ್ಲಿ ಬ್ರಗಾಂಝಾ ಅವರ ಬದುಕಿನ ಪಯಣ ಕೆನಡಾದಲ್ಲಿ ಸಾಗಿತ್ತು. ಕೆನಡಾದ ಮೊಂಟ್ರಿಯಲ್ ನಗರಕ್ಕೆ ಬಂದಿಳಿದ ಅವರು, ಅಲ್ಲಿನ ಸಂಸ್ಕೃತಿ, ಜೀವನ ಶೈಲಿಯಿಂದ ಪ್ರಭಾವಿತರಾದರು. ಅವರ ಕಲೆಗೂ ಹೊಸ ಆಯಾಮ ಸಿಕ್ಕಿತ್ತು. ಬ್ರಗಾಂಝಾ ಅವರದ್ದು ಪೇಂಟಿಂಗ್ನಲ್ಲಿ ನುರಿತ ಹಸ್ತ. ಕೈಯಲ್ಲಿ ಕುಂಚ ಹಿಡಿದರು ಅಂದ್ರೆ ಎಂಥ ಸನ್ನಿವೇಶವನ್ನಾದರೂ ಅದ್ಭುತವಾಗಿ ಚಿತ್ರಿಸಬಲ್ಲ ಅಪ್ರತಿಮ ಕಲಾವಿದೆ.
ಬ್ರಗಾಂಜಾ ಅವರ ಕುಂಚಗಳು ನಿಜಕ್ಕೂ ಕಮಾಲ್ ಮಾಡಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ಬ್ರಗಾಂಜಾ ಅವರ ಭಾರತೀಯ ಶೈಲಿಯ ಪೇಂಟಿಂಗ್ಗೆ ಮೊಂಟ್ರಿಯಲ್ ನಗರ ಬೆರಗಾಗಿಹೋಯ್ತು. 2008ರಲ್ಲಿ ಮೊಂಟ್ರಿಯಲ್ ವುಮನ್ ಆಫ್ ದಿ ಇಯರ್ ಪ್ರಶಸ್ತಿ ಕೂಡ ಅವರಿಗೆ ಲಭಿಸಿದೆ. ಅಲ್ಲಿನ ಸರ್ಕಾರ ಕೂಡ ಬ್ರಗಾಂಜಾ ಅವರನ್ನು ಗುರುತಿಸಿ ಅಭಿನಂದಿಸಿದ್ದ್ದು ಉಂಟು.
ಮೇರು ಕಲಾವಿದೆಯಾಗಿ ಯಶಸ್ಸಿನ ಉತ್ತುಂಗದಲ್ಲಿದ್ದರೂ ಬ್ರಗಾಂಜಾ ಅವರ ವೈಯಕ್ತಿಕ ಬದುಕಿನಲ್ಲಿ ದೊಡ್ಡ ಬಿರುಗಾಳಿಯೇ ಬೀಸಿತ್ತು. ಪತಿಯಿಂದ ವಿಚ್ಛೇದನ ಪಡೆದ ಅವರು ಆಘಾತಕ್ಕೊಳಗಾಗಿದ್ರು. ಅದರಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಕ್ಯಾನ್ಸರ್ ಮಾರಿ ವಕ್ಕರಿಸಿಕೊಂಡಿತ್ತು. ಆದ್ರೆ ಅದೆಲ್ಲವನ್ನ ಆತ್ಮವಿಶ್ವಾಸದಿಂದ್ಲೇ ಎದುರಿಸಿ ಗೆದ್ದ ಛಲಗಾತಿ ಶೆರಿಲ್ ಬ್ರಗಾಂಜಾ.
ಈಗ ಇವರು ಬರೀ ತಾಯಿ ಮಾತ್ರವಲ್ಲ ಅತ್ತೆ ಕೂಡ ಹೌದು. ಕ್ಯಾನ್ಸರ್ನಿಂದಲೂ ಪಾರಾಗಿ ಬಂದ ಇವರು ಮತ್ತೆ ಬಣ್ಣಗಳಿಂದ್ಲೇ ಬದುಕನ್ನು ತುಂಬಿಕೊಟ್ಟಿದ್ದಾರೆ. ಬ್ರಗಾಂಜಾ ಕೇವಲ ಕಲಾವಿದೆ ಮಾತ್ರವಲ್ಲ. ಕವಯತ್ರಿ, ಲೇಖಕಿ ಜೊತೆಗೆ ಕಾರ್ಯಕರ್ತೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕಲಾನೈಪುಣ್ಯ, ಬಣ್ಣಗಳೊಂದಿಗೆ ಆಟವಾಡಿ ಭಾವನೆಗಳನ್ನ ಹೊರಸೂಸುವ ಕ್ರಮ ಇವರ ಮನಗೆದ್ದಿತ್ತು. ಅವರಿಂದಲೇ ಪ್ರೇರಣೆ ಪಡೆದ ಬ್ರಗಾಂಜಾ ಈಗ ಕೆನಡಾದಲ್ಲೇ ನೆಲೆ ನಿಂತಿದ್ದಾರೆ. ಅಲ್ಲೇ ಭಾರತದ ಸಂಸ್ಕೃತಿಯನ್ನ ಕಲೆಯ ಮೂಲಕ ಪಸರಿಸುತ್ತಿದ್ದಾರೆ.
ಬ್ರಗಾಂಜಾ ಅವರು, ಕ್ಯಾನ್ಸರ್ ಪೀಡಿತರಾಗಿದ್ದ ಸಂದರ್ಭದಲ್ಲಿ ತಾವು ಅನುಭವಿಸಿದ ಯಾತನೆಯನ್ನು ಸಹ ಕ್ಯಾನ್ವಾಸ್ ಮೇಲೆ ಕೆತ್ತಿದ್ದಾರೆ. ಮಹಿಳೆಯರೇ ಇವರ ಅತ್ಯಮೂಲ್ಯ ಚಿತ್ರಗಳಿಗೆ ಸ್ಪೂರ್ತಿ. ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ಸಹ ಬ್ರಗಾಂಜಾ ಚಿತ್ರಿಸಿದ್ದಾರೆ. ಕಾಮಾಂಧರ ಕೈಗೆ ಸಿಕ್ಕು ಅಮಾಯಕ ಹೆಣ್ಣು ಮಗಳು ನರಳಿದ ಪರಿಯನ್ನ, ಆಕೆಯ ಬದುಕು ಕಮರಿ ಹೋಗಿದ್ದನ್ನ ಜಗತ್ತಿಗೆ ತಿಳಿಸಿಕೊಟ್ಟಿದ್ದಾರೆ. ಇದರ ಜೊತೆಗೆ ಇಂತಹ ವಿಕೃತಿಗಳನ್ನು ತಡೆಯುವ ಅಗತ್ಯದ ಬಗೆಗೂ ಸಂದೇಶ ಸಾರಿದ್ದಾರೆ.
ಏನೇ ಹೇಳಿ, ಕ್ಯಾನ್ಸರ್ ಗೆದ್ದು, ಕಲೆಯ ಮೂಲಕ ಸಾಮಾಜಿಕ ಕಳಕಳಿಯನ್ನೂ ಮೆರೆಯುತ್ತಿರುವ ಈ ಅಪ್ರತಿಮ ಕಲಾವಿದೆಗೆ ನಮ್ಮದೊಂದು ಸಲಾಂ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article