ಅತ್ಯುತ್ತಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡಿದ್ದ ಶ್ರೀಲಂಕಾ ತಂಡ ಎರಡನೇ ಓಡಿಐ ಪಂದ್ಯದಲ್ಲಿ ಬಹುತೇಕ ನಿಯಂತ್ರಣ ಸಾಧಿಸಿತ್ತು. ವಿಶೇಷವಾಗಿ ದ್ವಿತೀಯ ಇನಿಂಗ್ಸ್ನಲ್ಲಿ 160ಕ್ಕೆ 6 ವಿಕೆಟ್ಗಳನ್ನು ಕಿತ್ತಿದ್ದ ಲಂಕಾ ಬೌಲರ್ಗಳು ಧವನ್ ಪಡೆಗೆ ಆಘಾತ ನೀಡಿದ್ದರು. ಆದರೆ, ದೀಪಕ್ ಚಹರ್ ಅಜೇಯ 69 ರನ್ ಗಳಿಸುವ ಮೂಲಕ ಆತಿಥೇಯರ ಕನಸನ್ನು ಭಗ್ನಗೊಳಿಸಿದ್ದರು.
ಕಳೆದ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದ ಶ್ರೀಲಂಕಾ ತಂಡ, ಶುಕ್ರವಾರದ ಪಂದ್ಯದಲ್ಲಿ ಗೆದ್ದು ಗೌರವ ಉಳಿಸಿಕೊಳ್ಳುವ ಕಡೆ ಗಮನ ಹರಿಸಲಿದೆ. ಆ ಮೂಲಕ ಮುಂದಿನ ಮೂರು ಪಂದ್ಯಗಳ ಟಿ20 ಸರಣಿಗೆ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಲಿದೆ.
ನಾಳಿನ (ಶುಕ್ರವಾರ) ಪಂದ್ಯದಲ್ಲಿ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಮೊದಲ ಪಂದ್ಯದಲ್ಲಿ ಕೇವಲ 24 ಎಸೆತಗಳಲ್ಲಿ 43 ರನ್ ಸಿಡಿಸಿದ್ದ ಪೃಥ್ವಿ ಶಾ, ಎರಡನೇ ಪಂದ್ಯದಲ್ಲಿ ವನಂದು ಹಸರಂಗ ಸ್ಪಿನ್ ಮೋಡಿಗೆ ಕ್ಲೀನ್ ಬೌಲ್ಡ್ ಆಗಿದ್ದರು. ಅಲ್ಲದೆ, ಮೊದಲನೇ ಹಣಾಹಣಿಯಲ್ಲಿ ಬೌನ್ಸರ್ನಲ್ಲಿ ತಲೆಗೆ ಪೆಟ್ಟು ತಿಂದಿದ್ದ ಪೃಥ್ವಿಗೆ ಮೂರನೇ ಹಣಾಹಣಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.
ಒಂದು ವೇಳೆ ಪೃಥ್ವಿ ಶಾಗೆ ವಿಶ್ರಾಂತಿ ನೀಡಿದ್ದೇ ಆದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಅಂತಾರಾಷ್ಟ್ರೀಯ ಓಡಿಐ ಕ್ರಿಕೆಟ್ಗೆ ಪದಾರ್ಪಣೆ ಮಾಡಬಹುದು. ಅಂದಹಾಗೆ, ದೇವದತ್ ಪಡಿಕ್ಕಲ್ ಕಳೆದ ಎರಡು ಆವೃತ್ತಿಗಳ ದೇಶಿ ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಕಳೆದ ಆವೃತ್ತಿಯ ವಿಜಯ್ ಹಝಾರೆ ಟ್ರೊಫಿ ಟೂರ್ನಿಯಲ್ಲಿಯೂ ಅವರು 700ಕ್ಕೂ ಅಧಿಕ ರನ್ ಗಳಿಸಿದ್ದರು. ಅಲ್ಲದೆ, ಆರ್ಸಿಬಿ ತಂಡದ ಪರ 2021ರ ಐಪಿಎಲ್ ಟೂರ್ನಿಯ ಮೊದಲ ಅವಧಿಯಲ್ಲಿ ಮಿಂಚಿನ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು.
ಶ್ರೀಲಂಕಾ ವಿರುದ್ಧ ಕಳೆದ ಎರಡೂ ಪಂದ್ಯಗಳಲ್ಲಿ ಕನ್ನಡಿಗ ಮನೀಶ್ ಪಾಂಡೆ ನಿರಾಸೆ ಮೂಡಿಸಿದ್ದಾರೆ. ಮೊದಲ ಪಂದ್ಯದಲ್ಲಿ 26 ರನ್ ಗಳಿಸಿ ಅನಗತ್ಯ ಹೊಡೆತಕ್ಕೆ ಕೈ ಹಾಕಿ ಕ್ಯಾಚ್ ಕೊಟ್ಟಿದ್ದ ಮನೀಶ್, ಎರಡನೇ ಹಣಾಹಣಿಯಲ್ಲಿ 37 ರನ್ ಗಳಿಸಿ ಅನಿರೀಕ್ಷಿತವಾಗಿ ರನೌಟ್ ಆಗಿದ್ದರು. ಈ ಕಾರಣದಿಂದ ಅವರನ್ನು ಮೂರನೇ ಪಂದ್ಯದಲ್ಲಿ ಕೈ ಬಿಟ್ಟು, ಅವರ ಬದಲು ಸಂಜು ಸ್ಯಾಮ್ಟನ್ ಅವರನ್ನು ಪ್ಲೇಯಿಂಗ್ ಇಲೆವೆನ್ಗೆ ಕರೆ ತರುವ ಸಾಧ್ಯತೆ ಇದೆ. ಅಂದಹಾಗೆ, ಮೊದಲನೇ ಓಡಿಐಗೆ ಇಶಾನ್ ಕಿಶನ್ ಬದಲು ಸಂಜು ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದರು. ಆದರೆ, ಅವರು ಗಾಯಕ್ಕೆ ತುತ್ತಾಗಿದ್ದರಿಂದ ಆಡಲು ಸಾಧ್ಯವಾಗಿರಲಿಲ್ಲ. ಇನ್ನುಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ.
ಶುಕ್ರವಾರ ಮಳೆ ಬೀಳುವ ಸಾಧ್ಯತೆ ಇದ್ದು, ಮೂರನೇ ಓಡಿಐ ಪಂದ್ಯ ರದ್ದಾಗಬಹುದು ಎಂದು ಹಲವು ವರದಿಗಳು ತಿಳಿಸುತ್ತಿವೆ. ಇಲ್ಲವಾದಲ್ಲಿ ಕಳೆದ ಪಂದ್ಯದ ರೀತಿ ಮೋಡ ಮುಸುಕಿದ ವಾತಾವರಣ ಕಂಡು ಬರಲಿದೆ. ಪಂದ್ಯದ ದಿನ ಇಲ್ಲಿನ ಉಷ್ಣಾಂಶ 28ರ ಸರಾಸರಿ ಇರಲಿದೆ.
ಇಲ್ಲಿನ ಆರ್ ಪ್ರೇಮದಾಸ ಕ್ರೀಡಾಂಗಣದ ಪಿಚ್ ಈಗಾಗಲೇ ನಿಧಾನಗತಿಗೆ ತಿರುಗಿದೆ. ಎರಡನೇ ಪಂದ್ಯದಲ್ಲಿಯೂ ಪಿಚ್ ಇದೇ ರೀತಿ ವರ್ತಿಸಿತ್ತು. ಹಾಗಾಗಿ, ಶುಕ್ರವಾರದ ಪಂದ್ಯದಲ್ಲಿಯೂ ಇದೇ ರೀತಿ ಪಿಚ್ ಮುಂದುವರಿಯಬಹುದು. ವೇಗಿಗಳಿಗಿಂತಲೂ ಸ್ಪಿನ್ನರ್ಗಳು ಇದರ ಲಾಭವನ್ನು ಪಡೆಯಬಹುದಾಗಿದೆ.
ಪೃಥ್ವಿ ಶಾ/ದೇವದತ್ ಪಡಿಕ್ಕಲ್, ಶಿಖರ್ ಧವನ್, ಇಶಾನ್ ಕಿಶನ್, ಮನೀಶ್ ಪಾಂಡೆ/ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್
ಆವಿಷ್ಕಾ ಫೆರ್ನಾಂಡೊ, ಮಿನೋದ್ ಭನುಕ (ವಿ.ಕೀ), ಭನುಕ ರಾಜಪಕ್ಸ, ಧನಂಜಯ್ ಡಿ ಸಿಲ್ವಾ, ಚರಿತಾ ಅಸಲಂಕ, ದಸೂನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣರತ್ನೆ, ದುಷ್ಮಂಥ ಚಮೀರಾ, ಲಕ್ಷಣ್ ಸಂಡಕನ್, ಕಸೂನ್ ರಜಿತಾ