ಕಲೆಗೆ ತಮಿಳುನಾಡಿನಲ್ಲಿ ಮೊದಲಿಂದ ಬೆಲೆ ಇದೆ. ಈ ಮಾತು ಇಂದು ( ಮೇ 4 ) ಮತ್ತೊಮ್ಮೆ ಸಾಬೀತಾಗಿದೆ. ಬೆಳ್ಳಿತೆರೆಯ ಮೇಲೆ ಧಗಧಗಿಸುವ ತಮ್ಮ ನೆಚ್ಚಿನ ನಾಯಕನನ್ನು ತಮಿಳುನಾಡಿನ ಜನ ತಲೆ ಮೇಲೆ ಹೊತ್ತು ಮೆರೆಸಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ವಿಜಯ್ ಐತಿಹಾಸಿಕ ದಾಖಲೆ ಬರೆದಿದ್ದಾರೆ.
ಇನ್ನೂ ಚುನಾವಣೆಯ ಮುನ್ನ ಏನೆಲ್ಲಾ ಆಯ್ತು ಎನ್ನುವುದು ಎಲ್ಲರಿಗೆ ಗೊತ್ತಿರುವ ವಿಚಾರವೇ. ರಾಜಕೀಯದ ರಣರಂಗಕ್ಕೆ ವಿಜಯ್ ಧುಮುಕಿದ ಬೆನ್ನಲ್ಲೇ ನಾಲ್ಕು ಗೋಡೆಗಳ ನಡುವೆ ಇದ್ದ ವಿಚಾರ ಹೊರ ಬಂದಿತ್ತು. ವಿಜಯ್ ಮತ್ತು ಸಂಗೀತಾ ದಾಂಪತ್ಯ ಕಲಹ ಇಡೀ ತಮಿಳುನಾಡಿನಲ್ಲಿ ಮಾತ್ರವಲ್ಲ ಭಾರತದೆಲ್ಲೆಡೆ ಸುದ್ದಿಯಾಯ್ತು.
ಹಾಗೇ ನೋಡಿದರೆ ವಿಜಯ್ ಮತ್ತು ತ್ರಿಶಾ ಸಂಬಂಧದ ಮೇಲೆ ಹಲವರಿಗೆ ಅನುಮಾನ ಇರುವುದು ಇಂದು ನಿನ್ನೆಯಿಂದಲ್ಲ. ಹಲವಾರು ವರ್ಷಗಳಿಂದ ಈ ಜೋಡಿಯನ್ನು ಅನುಮಾನದ ದೃಷ್ಟಿಯಲ್ಲಿಯೇ ತಮಿಳುನಾಡು ನೋಡುತ್ತಿತ್ತು. ಸಂಗೀತಾ ಸಲ್ಲಿಸಿದ್ದ ವಿಚ್ಚೇದನದ ಅರ್ಜಿಯಿಂದ ಇವರ ಸಂಬಂಧದ ಮೇಲೊಂದು ಮುದ್ರೆ ಬಿದ್ದಂತಾಯ್ತು ಅಷ್ಟೇ .
ನಿಜಾ.. ಇವತ್ತು ಕೂಡ ಇಬ್ಬರು ತಮ್ಮ ಸಂಬಂಧವನ್ನು ಎಲ್ಲರೆದುರು ಎಲ್ಲಿಯೂ ಒಪ್ಪಿಕೊಂಡಿಲ್ಲ. ಆದರೆ, ಬೆಂಕಿ ಇಲ್ಲದೇ ಹೊಗೆಯಾಡಲ್ಲ. ಇದಕ್ಕೆ ಮತ್ತೊಂದು ಪುರಾವೆ ಎನ್ನುವಂತೆ ಚುನಾವಣೆಯಲ್ಲಿ ದಳಪತಿ ಕೊರಳಿಗೆ ವಿಜಯದ ಹಾರ ಬಿದ್ದ ಬೆನ್ನಲ್ಲೇ ತ್ರಿಶಾ ಸೀದಾ ತಿರುಪತಿಯಿಂದ ಓಡೋಡಿಕೊಂಡು ವಿಜಯ್ ನಿವಾಸಕ್ಕೆ ಬಂದಿದ್ದಾರೆ.
ಹೌದು, ಅಸಲಿಗೆ ಇಂದು (ಮೇ 4 ) ತ್ರಿಶಾಗೆ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ತ್ರಿಶಾ ತಿರುಪತಿ ದೇವಸ್ಥಾನಕ್ಕೆ ತೆರಳಿದ್ದರು. ತಿಮ್ಮಪ್ಪನ ದರ್ಶನ ಮಾಡಿದರು. ಇಲ್ಲಿಯೇ ವಿಜಯೋತ್ಸವದ ಸುಳಿವು ತ್ರಿಶಾಗೆ ಸಿಕ್ಕಿತ್ತು. ಹೀಗಾಗಿಯೇ, ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ವಿಜಯ್ ಅವರ ಐತಿಹಾಸಿಕ ಗೆಲುವಿನ ಜೊತೆಗೆ ಆಚರಿಸಲು ತ್ರಿಶಾ ನಿರ್ಧರಿಸಿದಂತಿತ್ತು.
ತಿರುಪತಿಯಿಂದ ನೇರವಾಗಿ ಚೆನ್ನೈಗೆ ಬಂದಿಳಿದ ತ್ರಿಶಾ, ಬೇರೆಲ್ಲಿಗೂ ಹೋಗದೆ ಸೀದಾ ವಿಜಯ್ ಅವರ ನೀಲಂಕರೈ ನಿವಾಸಕ್ಕೆ ದೌಡಾಯಿಸಿದರು. ಕೈಯಲ್ಲಿ ತಿಮ್ಮಪ್ಪನ ಪ್ರಸಾದ, ಮುಖದಲ್ಲಿ ಗೆಲುವಿನ ನಗೆ ಹೊತ್ತು ಬಂದ ತ್ರಿಶಾ ಅವರನ್ನ ನೋಡಿ ವಿಜಯ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಇವತ್ತು ತ್ರಿಶಾಗೆ 43ನೇ ವಸಂತದ ಸಂಭ್ರಮವಾದರೆ, ದಳಪತಿಗೆ ಅಧಿಕಾರದ ಗದ್ದುಗೆ ಏರುವ ಸಂಭ್ರಮ.
ವಿಜಯ್ ಮನೆ ಮುಂದೆ ಪೊಲೀಸರ ಬಿಗಿ ಬಂದೋಬಸ್ತ್ ಇದ್ದರೂ, ಅಭಿಮಾನಿಗಳ ಸಾಗರವನ್ನೇ ದಾಟಿಕೊಂಡು ತ್ರಿಶಾ ಅವರ ಕಾರು ಒಳಪ್ರವೇಶಿಸಿದ ದೃಶ್ಯ ಈಗ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ. ಮದುವೆ, ವಿಚ್ಛೇದನ ಮತ್ತು ಅಫೇರ್ ಸುದ್ದಿಗಳ ನಡುವೆ ತ್ರಿಶಾ ಈ ರೀತಿ ಬಹಿರಂಗವಾಗಿ ವಿಜಯ್ ಮನೆಗೆ ಬಂದಿರೋದು ಸದ್ಯ ಅಭಿಮಾನಿಗಳ ಮನದಲ್ಲಿ ಹತ್ತಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಹಿಂದೆ ‘ಗಿಲ್ಲಿ’, ‘ತಿರುಪಾಚಿ’, ‘ಆತಿ’, ‘ಕುರುವಿ’ ಮತ್ತು ‘ಲಿಯೋ’ ಸಿನಿಮಾಗಳಲ್ಲಿ ಇವರಿಬ್ಬರ ಕೆಮಿಸ್ಟ್ರಿ ನೋಡಿ ಫಿದಾ ಆಗಿದ್ದ ಅಭಿಮಾನಿಗಳು, ಇವತ್ತು ತ್ರಿಶಾರನ್ನ ‘ಮಿಸಸ್ ಸಿಎಂ’, ‘ತಮಿಳುನಾಡಿನ ಅತ್ತಿಗೆ’, ಎಂದೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಟ್ಯಾಗ್ ಮಾಡ್ತಿದ್ದಾರೆ.
ರಾಜಕೀಯವಾಗಿ ವಿಜಯ್ ಈಗ ಹೊಸ ಪ್ರಯಾಣ ಶುರು ಮಾಡಿದ್ದಾರೆ. ಡಿಎಂಕೆ ಮತ್ತು ಎಐಎಡಿಎಂಕೆಯಂತಹ ಘಟಾನುಘಟಿಗಳನ್ನ ಸೈಡಿಗಟ್ಟಿರೋ ‘ಟಿವಿಕೆ’ ಪಕ್ಷ 104 ಕ್ಷೇತ್ರಗಳಲ್ಲಿ ( ರಾತ್ರಿ 8 ಗಂಟೆಯವರೆಗೆ ) ಭರ್ಜರಿ ಮುನ್ನಡೆ ಸಾಧಿಸಿದೆ. ವಿಜಯ್ ಅವರ ಈ ‘ಕ್ಲೀನ್ ಸ್ವೀಪ್’ ಗೆಲುವಿಗೆ ತ್ರಿಶಾ ಅವರೇ ‘ಲಕ್ಕಿ ಚಾರ್ಮ್’ ಅಂತ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ವಿಜಯ್ ಪತ್ನಿಯಿಂದ ದೂರವಾಗಿ ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದ ಸಮಯದಲ್ಲಿ, ತ್ರಿಶಾ ಅವರ ಈ ನಿರಂತರ ಬೆಂಬಲ ವಿಜಯ್ ಪಾಲಿಗೆ ದೊಡ್ಡ ಶಕ್ತಿಯಾಗಿ ಪರಿಣಮಿಸಿದೆ ಅನ್ನೋದು ಈಗ ಗುಟ್ಟಾಗಿ ಉಳಿದಿಲ್ಲ.
ಇನ್ನು, ತ್ರಿಶಾ ಈ ಭೇಟಿಯನ್ನು ಕೇವಲ ಸೌಜನ್ಯದ ಭೇಟಿಅಥವಾ ಗೆಲುವಿಗೆ ವಿಶ್ ಮಾಡುವ ಉದ್ದೇಶ ಅಂತ ಹೇಳಬಹುದು. ಆದರೆ, ಅಸಲಿ ಕಥೆಯೇ ಬೇರೆ ಇದೆ ಅನ್ನೋದು ರಾಜಕೀಯ ಪಂಡಿತರ ಲೆಕ್ಕಾಚಾರ. ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮುನ್ನವೇ ತ್ರಿಶಾ ಅವರ ಈ ಭೇಟಿ, ಮುಂಬರುವ ದಿನಗಳಲ್ಲಿ ಈ ಜೋಡಿ ಅಧಿಕೃತವಾಗಿ ಒಂದಾಗುವ ಮುನ್ಸೂಚನೆಯಾ? ಇದ್ದರು ಇರಬಹುದು.
ಒಟ್ಟಿನಲ್ಲಿ, ತಮಿಳುನಾಡು ಇವತ್ತು ಇಬ್ಬರು ಸೂಪರ್ ಸ್ಟಾರ್ಗಳ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ದಳಪತಿ ವಿಜಯ್ ಕಿರೀಟಕ್ಕೆ ಗೆಲುವಿನ ಗರಿ ಸಿಕ್ಕಿದ್ದರೆ, ತ್ರಿಶಾ ತಮ್ಮ ಹುಟ್ಟುಹಬ್ಬದ ದಿನವೇ ನೆಚ್ಚಿನ ಗೆಳೆಯನ ವಿಜಯೋತ್ಸವದಲ್ಲಿ ಭಾಗಿಯಾಗಿ ಇತಿಹಾಸದ ಭಾಗವಾಗಿದ್ದಾರೆ. ಮುಂದಿನ ದಿನಗಳಲ್ಲಿ ದಳಪತಿ ರಾಜ್ಯವಾಳುವಾಗ ತ್ರಿಶಾ ಅವರ ಪಾತ್ರವೇನಿರುತ್ತೆ? ಕಾಲಿವುಡ್ನ ಈ ಮೋಸ್ಟ್ ಟಾಕ್ಡ್ ಜೋಡಿ ಅಧಿಕೃತವಾಗಿ ತಮ್ಮ ಸಂಬಂಧವನ್ನ ಯಾವಾಗ ಘೋಷಿಸುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ. ಸದ್ಯಕ್ಕಂತೂ ಚೆನ್ನೈನ ನೀಲಂಕರೈ ನಿವಾಸದಲ್ಲಿ ದಳಪತಿ ಮತ್ತು ಸೌತ್ ಕ್ವೀನ್ ನಡುವೆ ”ವಿಜಯದ ಪ್ರಸಾದ” ವಿನಿಮಯವಾಗುತ್ತಿರೋದಂತೂ ಸತ್ಯ..!



