ತಮಿಳುನಾಡು ರಾಜಕೀಯ ಅಂದ್ರೆ ಅಲ್ಲಿ ವೈಷಮ್ಯಕ್ಕೆ ಕೊನೆಯಿಲ್ಲ ಅನ್ನೋ ಮಾತಿದೆ. ಕರುಣಾನಿಧಿ ಮತ್ತು ಜಯಲಲಿತಾ ಕಾಲದಿಂದಲೂ ಅಲ್ಲಿನ ನಾಯಕರು ಪರಸ್ಪರ ಮುಖ ನೋಡೋದು ಕೂಡ ಅಪರೂಪವಾಗಿತ್ತು. ಆದರೆ ಈಗ ದಳಪತಿ ವಿಜಯ್ ಯುಗ ಶುರುವಾದ ಮೇಲೆ ಅಲ್ಲಿನ ರಾಜಕೀಯ ಸಂಸ್ಕೃತಿಯೇ ಬದಲಾದಂತಿದೆ. ಭಾನುವಾರವಷ್ಟೇ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ವಿಜಯ್, ಇಂದು (ಮೇ 11) ಮಾಡಿರೋ ಒಂದು ಕೆಲಸ ಈಗ ಇಡೀ ದೇಶದ ಗಮನ ಸೆಳೆದಿದೆ. ತಮ್ಮ ಬದ್ಧ ವೈರಿ, ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಅವರ ಮನೆಗೆ ಖುದ್ದಾಗಿ ಭೇಟಿ ನೀಡಿ ವಿಜಯ್ ಅಚ್ಚರಿ ಮೂಡಿಸಿದ್ದಾರೆ.
ಚುನಾವಣಾ ಅಖಾಡದಲ್ಲಿ ಡಿಎಂಕೆ ವಿರುದ್ಧ ಬೆಂಕಿ ಉಗುಳಿದ್ದ ವಿಜಯ್, ಪ್ರಮಾಣವಚನ ಸ್ವೀಕರಿಸುವಾಗಲೂ ಹಿಂದಿನ ಸರ್ಕಾರ ಸಾಲದ ಸುಳಿಗೆ ರಾಜ್ಯವನ್ನು ತಳ್ಳಿದೆ ಅಂತ ಸ್ಟಾಲಿನ್ ವಿರುದ್ಧ ಗುಡುಗಿದ್ದರು. ಆದರೆ ರಾಜಕೀಯ ಬೇರೆ, ವೈಯಕ್ತಿಕ ಗೌರವ ಬೇರೆ ಅನ್ನೋದನ್ನ ದಳಪತಿ ಸಾಬೀತು ಮಾಡಿದ್ದಾರೆ. ಸ್ಟಾಲಿನ್ ಅವರ ಚೆನ್ನೈ ನಿವಾಸಕ್ಕೆ ಭೇಟಿ ನೀಡಿದ ವಿಜಯ್ ಅವರಿಗೆ ಮಾಜಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅತ್ಯಂತ ಆತ್ಮೀಯವಾಗಿ ಸ್ವಾಗತ ಕೋರಿದ್ದಾರೆ. ಅಣ್ಣ-ತಮ್ಮಂದಿರಂತೆ ಕೈ ಕುಲುಕಿ ಮನೆ ಒಳಗೆ ಹೋದ ದೃಶ್ಯ ತಮಿಳುನಾಡಿನ ಪಾಲಿಗೆ ನಡೆದ ಅಪರೂಪದಲ್ಲಿ ಅಪರೂಪದ ಸಂಗತಿ.
ವಿಜಯ್ಗೆ ಸ್ಟಾಲಿನ್ ಹೂಗುಚ್ಛ ನೀಡಿ, ರೇಷ್ಮೆ ಶಾಲು ಹೊದಿಸಿ ಶುಭ ಕೋರಿದ್ದಾರೆ. ನಿನ್ನೆಯವರೆಗೂ ಪರಸ್ಪರ ವಾಗ್ದಾಳಿ ನಡೆಸುತ್ತಿದ್ದ ನಾಯಕರು ಇವತ್ತು ಒಂದೇ ಸೋಫಾದಲ್ಲಿ ಕುಳಿತು ನಗುನಗುತ್ತಾ ಮಾತನಾಡುತ್ತಿರುವುದನ್ನ ನೋಡಿ ರಾಜಕೀಯ ಪಂಡಿತರೇ ದಂಗಾಗಿದ್ದಾರೆ. ತಮಿಳುನಾಡು ರಾಜಕೀಯದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಮನೆಗೆ ಹಾಲಿ ಸಿಎಂ ಭೇಟಿ ನೀಡುವುದು ಸಾಮಾನ್ಯ ವಿಷಯವಲ್ಲ. ಇದು ದ್ರಾವಿಡ ಮಣ್ಣಿನಲ್ಲಿ ಒಂದು ಹೊಸ ಮತ್ತು ಆರೋಗ್ಯಕರ ರಾಜಕೀಯ ಸಂಪ್ರದಾಯಕ್ಕೆ ನಾಂದಿ ಹಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಹಿಂದೆ 2021ರಲ್ಲಿ ಸ್ಟಾಲಿನ್ ಸಿಎಂ ಆದಾಗ ಒ. ಪನ್ನೀರ್ಸೆಲ್ವಂ ಅವರು ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ ಸ್ಟಾಲಿನ್ ಮನೆಯ ಮೆಟ್ಟಿಲು ಹತ್ತಿ ವಿಜಯ್ ನೀಡಿರುವ ಈ ಭೇಟಿ ಕೇವಲ ಸೌಜನ್ಯಕ್ಕಷ್ಟೇ ಸೀಮಿತವಾಗಿದೆಯೇ ಅಥವಾ ಇದರ ಹಿಂದೆ ಏನಾದರೂ ಮೈತ್ರಿಯ ಲೆಕ್ಕಾಚಾರವಿದೆಯೇ ಅನ್ನೋ ಪ್ರಶ್ನೆ ಈಗ ಎದ್ದಿದೆ. ಯಾಕಂದ್ರೆ, ಡಿಎಂಕೆ ಮತ್ತು ವಿಜಯ್ ನಡುವೆ ಚುನಾವಣಾ ಸಮಯದಲ್ಲಿ ಅಕ್ಷರಶಃ ಯುದ್ಧವೇ ನಡೆದಿತ್ತು. ಅಂತಹ ಕಿಚ್ಚಿನ ನಡುವೆ ಈ ಹೂಗುಚ್ಛ ವಿನಿಮಯ ಸಖತ್ ಕುತೂಹಲ ಮೂಡಿಸಿದೆ.
ಈ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಇದು ಅಲ್ವಾ ರಿಯಲ್ ರಾಜಕೀಯ ಅಂದ್ರೆ! ಅಂತ ಕಮೆಂಟ್ ಮಾಡ್ತಿದ್ದಾರೆ. ಸ್ಟಾಲಿನ್ ಜೊತೆಗಿನ ಈ ಮುಖಾಮುಖಿ ಭೇಟಿಯ ವೇಳೆ ಉದಯನಿಧಿ ಸ್ಟಾಲಿನ್ ಉಪಸ್ಥಿತರಿದ್ದು ಪ್ರಮುಖ ಪಾತ್ರ ವಹಿಸಿದ್ದಾರೆ. ಒಟ್ಟಿನಲ್ಲಿ, ಸಿಎಂ ಪಟ್ಟಕ್ಕೇರಿದ ಬೆನ್ನಲ್ಲೇ ವಿಜಯ್ ಅವರ ಈ ನಡೆ ಕುತೂಹಲ ಕೆರಳಿಸಿದೆ. ಚರ್ಚೆಗೆ ಗ್ರಾಸವಾಗಿದೆ.



