ಬದುಕು ಅನ್ನೋದು ಸಖತ್ ವಿಚಿತ್ರ. ಇಲ್ಲಿ ಯಾರೋ ಎತ್ತರಕ್ಕೆ ಬೆಳೆಯುತ್ತಾರೆ ಅಂದ್ರೆ ಅದಕ್ಕೆ ಕೇವಲ ಅದೃಷ್ಟವೊಂದೇ ಕಾರಣವಲ್ಲ, ಅದರ ಹಿಂದೆ ದೊಡ್ಡ ಮಟ್ಟದ ಶ್ರಮ ಮತ್ತು ಛಲ ಇರುತ್ತೆ. ಇದಕ್ಕೆ ಲೇಟೆಸ್ಟ್ ಉದಾಹರಣೆಯೇ ಎಸ್. ಕೀರ್ತನಾ. ದಳಪತಿ ವಿಜಯ್ ಅವರ ‘ತಮಿಳು ವೆಟ್ರಿ ಕಳಗಂ’ (TVK) ಪಕ್ಷದಿಂದ ಕಣಕ್ಕಿಳಿದು, ಇಡೀ ತಮಿಳುನಾಡು ರಾಜಕೀಯವೇ ತನ್ನತ್ತ ತಿರುಗಿ ನೋಡುವಂತೆ ಮಾಡಿರೋ 29 ವರ್ಷದ ಈ ಕಲಿ ಯಾರು ಅನ್ನೋದು ಈಗ ದೊಡ್ಡ ಕುತೂಹಲ.
ಭಾರತದ ಪಟಾಕಿ ರಾಜಧಾನಿ ಎಂದೇ ಕರೆಯಲ್ಪಡುವ ಶಿವಕಾಶಿಯಲ್ಲಿ ಕಳೆದ 7 ದಶಕಗಳಿಂದ ಪುರುಷರದ್ದೇ ದರ್ಬಾರ್ ಇತ್ತು. ಅಂತಹ ಕೋಟೆಯೊಳಗೆ ಒಬ್ಬ 29 ವರ್ಷದ ಯುವತಿ ನುಗ್ಗಿ, ಅಲ್ಲಿನ ಪುರುಷ ಪ್ರಾಬಲ್ಯವನ್ನು ಮಣ್ಣುಮುಕ್ಕಿಸಿದ್ದಾರೆ ಅಂದ್ರೆ ಅದು ಸಾಮಾನ್ಯ ಮಾತಲ್ಲ. ಕೀರ್ತನಾ ಕೇವಲ ಶಾಸಕಿಯಾಗಿಲ್ಲ, ವಿಜಯ್ ಅವರ ಚೊಚ್ಚಲ ಸಂಪುಟದಲ್ಲಿ ಸ್ಥಾನ ಪಡೆದಿರೋ ಏಕೈಕ ಮಹಿಳಾ ಸಚಿವೆ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಭಾನುವಾರವಷ್ಟೇ ಅವರು ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಯಾರು ಈ ಕೀರ್ತನಾ ಅಂತ ನೋಡಿದರೆ ಅವರ ಹಿನ್ನೆಲೆ ನಿಜಕ್ಕೂ ರೋಚಕವಾಗಿದೆ. 1996ರಲ್ಲಿ ವಿರುಧುನಗರದಲ್ಲಿ ಜನಿಸಿದ ಇವರು ಓದಿದ್ದು ಪಕ್ಕಾ ಸರ್ಕಾರಿ ಶಾಲೆಯಲ್ಲಿ. ಗಣಿತದಲ್ಲಿ ಬಿಎಸ್ಸಿ ಮುಗಿಸಿ, ಪುದುಚೇರಿ ವಿಶ್ವವಿದ್ಯಾಲಯದಲ್ಲಿ ಸ್ಟ್ಯಾಟಿಸ್ಟಿಕ್ಸ್ ವಿಷಯದಲ್ಲಿ ಎಂಎಸ್ಸಿ ಗೋಲ್ಡ್ ಮೆಡಲಿಸ್ಟ್ ಆಗಿರೋ ಇವರು, ರಾಜಕೀಯಕ್ಕೆ ಬರುವ ಮುನ್ನ ದೊಡ್ಡ ದೊಡ್ಡ ರಾಜಕಾರಣಿಗಳ ಹಿಂದೆ ‘ಮಾಸ್ಟರ್ ಮೈಂಡ್’ ಆಗಿ ಕೆಲಸ ಮಾಡಿದ್ದರು.
ಹೌದು, ಕೀರ್ತನಾ ಮೊದಲು ರಾಜಕೀಯ ಸಲಹೆಗಾರ್ತಿಯಾಗಿ ಐ-ಪ್ಯಾಕ್ (IPAC) ನಂತಹ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು. ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು ಮತ್ತು ಎಂ.ಕೆ. ಸ್ಟಾಲಿನ್ ಅವರಂತಹ ದಿಗ್ಗಜ ನಾಯಕರ ಚುನಾವಣಾ ಪ್ರಚಾರದ ತಂತ್ರಗಳನ್ನು ರೂಪಿಸಿದ ಅನುಭವ ಇವರದ್ದು. “ಅಧಿಕಾರಶಾಹಿ ಹೇಗೆ ಕೆಲಸ ಮಾಡುತ್ತೆ, ರಾಜಕೀಯ ವ್ಯವಸ್ಥೆಯ ನಾಡಿಮಿಡಿತ ಏನು ಅನ್ನೋದನ್ನ ನಾನು ಹತ್ತಿರದಿಂದ ನೋಡಿದ್ದೆ, ಹಾಗಾಗಿ ನನಗೆ ರಾಜಕೀಯಕ್ಕೆ ಬರೋದು ಕಷ್ಟವಾಗಲಿಲ್ಲ” ಅಂತಾರೆ ಈ ಪಂಚಭಾಷಾ ಪಾರಂಗತೆ.
ತಮಿಳುನಾಡಿನಲ್ಲಿ ಹಿಂದಿ ಅಂದ್ರೆ ಸ್ವಲ್ಪ ಅಲರ್ಜಿ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ ಕೀರ್ತನಾ ಮಾತ್ರ ತಮಿಳಿನ ಜೊತೆ ಇಂಗ್ಲಿಷ್, ಹಿಂದಿ, ತೆಲುಗು ಸೇರಿದಂತೆ 5 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು. ತಮ್ಮ ಈ ಭಾಷಾ ಪ್ರೌಢಿಮೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ಇವರು, ಉತ್ತರ ಭಾರತದ ಜನರಿಗೂ ವಿಜಯ್ ಅವರ ಸಂದೇಶ ತಲುಪುವಂತೆ ಹಿಂದಿಯಲ್ಲೇ ಪ್ರಚಾರ ಮಾಡಿ ಸೈ ಎನಿಸಿಕೊಂಡಿದ್ದರು.
ಶಿವಕಾಶಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಇಳಿದಾಗ ಕೀರ್ತನಾ ಕೇವಲ ಭಾಷಣಕ್ಕೆ ಸೀಮಿತವಾಗಲಿಲ್ಲ. ಅಲ್ಲಿನ ಪಟಾಕಿ ಕಾರ್ಖಾನೆಯ ಕಾರ್ಮಿಕರ ನೋವಿಗೆ ದನಿಯಾದರು. ಮಹಿಳಾ ಕಾರ್ಮಿಕರಿಗೆ ಸಮಾನ ವೇತನ, ಆರೋಗ್ಯ ವಿಮೆ ಮತ್ತು ವಿಷಕಾರಿ ರಾಸಾಯನಿಕಗಳಿಂದ ರಕ್ಷಣೆ ನೀಡುವ ಭರವಸೆ ನೀಡಿದರು. ಜನರ ನಾಡಿಮಿಡಿತ ಅರಿತಿದ್ದ ಇವರಿಗೆ ಶಿವಕಾಶಿಯ ಜನ 68,709 ಮತಗಳನ್ನು ನೀಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಅಶೋಕನ್ ಜಿ ಅವರನ್ನು 11 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸುವಂತೆ ಮಾಡಿದರು.
ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಕೀರ್ತನಾ ಒಂದು ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. 29ನೇ ವಯಸ್ಸಿನಲ್ಲೇ ಸಚಿವೆ ಪಟ್ಟ ಅಲಂಕರಿಸಿರೋ ಇವರು, ಇವತ್ತಿನ ಯುವ ಪೀಳಿಗೆಗೆ ಮತ್ತು ಮುಖ್ಯವಾಗಿ ರಾಜಕೀಯಕ್ಕೆ ಬರಬೇಕು ಎಂದುಕೊಳ್ಳುವ ಹೆಣ್ಣುಮಕ್ಕಳಿಗೆ ದೊಡ್ಡ ಮಾದರಿ. ನಾನು ಯಾವಾಗಲೂ ರಾಜಕೀಯದಲ್ಲಿ ಇರಬೇಕು ಅಂತ ಕನಸು ಕಂಡಿದ್ದೆ, ಆ ಕನಸು ಇಂದು ನನಸಾಗಿದೆ ಎನ್ನುವ ಕೀರ್ತನಾ ಮಾತುಗಳಲ್ಲಿ ಆತ್ಮವಿಶ್ವಾಸ ಎದ್ದು ಕಾಣುತ್ತೆ.
ಒಟ್ಟಿನಲ್ಲಿ, ದಳಪತಿ ವಿಜಯ್ ಅವರ ಸೈನ್ಯದಲ್ಲಿರೋ ಈ ‘ಪಟಾಕಿ’ ಕೀರ್ತನಾ, ಮುಂದಿನ ದಿನಗಳಲ್ಲಿ ತಮಿಳುನಾಡು ರಾಜಕೀಯದಲ್ಲಿ ಯಾವ ರೀತಿಯ ಕ್ರಾಂತಿ ಮಾಡಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಿದೆ. ಒಬ್ಬ ಸಾಮಾನ್ಯ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಇಂದು ಮಂತ್ರಿಯಾಗಿ ರಾಜ್ಯದ ಚುಕ್ಕಾಣಿ ಹಿಡಿಯಲು ಹೊರಟಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.



