ಹುಡುಕಾಟದಲ್ಲಿ ಗೆದ್ದ ಅನ್ವೇಷಿ…!

1
73

‘ಅನ್ವೇಷಿ’- ಇದು ಭಾವನೆಗಳ ಹುಡುಕಾಟ, ಸ್ನೇಹ ಸಂಬಂಧದ ಹುಡುಕಾಟ, ಪ್ರೀತಿಯ ಹುಡುಕಾಟ, ಭವಿಷ್ಯದ ಹುಡುಕಾಟ, ದುರಂತವನ್ನು ತಪ್ಪಿಸಲು ನಡೆಸಿದ ಹುಡುಕಾಟ…! ಈ ಹುಡುಕಾಟಕ್ಕೆ ಸಿಕ್ಕಿದೆ ನಿರೀಕ್ಷಿತ ಗೆಲುವು…! ಹೊಸಚಿತ್ರ ಅನ್ವೇಷಿ ಗೆದ್ದಿದೆ, ಚಿತ್ರತಂಡಕ್ಕೆ ಗೆಲುವಿನ ಹುಡುಕಾಟದಲ್ಲಿ ಯಶಸ್ಸು ಸಿಕ್ಕಿದೆ.

ಹೌದು, ಇದು ಅನ್ವೇಷಿ ಚಿತ್ರದ ಕುರಿತ ಮಾತು. ಆರಂಭದಿಂದ ಕೊನೆಯವರೆಗೂ ಕುತೂಹಲವನ್ನು ಹಿಡಿದಿಟ್ಟಿದ್ದಾರೆ ನಿರ್ದೇಶಕ ವೇಮುಗಲ್ ಜಗನ್ನಾಥ್ ರಾವ್. ನೀವು ಕೊಟ್ಟ ದುಡ್ಡಿಗೆ ಖಂಡಿತಾ ಮೋಸವಿಲ್ಲ. ಸುಮಾರು 2.15 ಗಂಟೆಗಳ ಕಾಲ ನೀವು ನಿಮ್ಮನ್ನು ಮರೆತಿರ್ತೀರಿ. ಇಂಟರ್ವಲ್ ಬಂದಿದ್ದೇ ಗೊತ್ತಾಗಲ್ಲ…! ಆ ಕ್ಷಣ ನೀವು ಕುಳಿತ ಜಾಗದಿಂದ ಆಚೆ-ಈಚೆ ಹೋದ್ರು ಸಿನಿಮಾ ಬಗ್ಗೆಯೇ ನಿಮ್ಮ ಯೋಚ್ನೆ ಇರುತ್ತೆ. ಎಲ್ಲಿಯೂ ಒಂಚೂರು ಬೋರ್ ಹೊಡೆಸಲ್ಲ. ಚಿತ್ರ ಮುಗಿದ ಮೇಲೂ ನಿಮ್ಮನ್ನು ಕಾಡುತ್ತೆ…! ಇಷ್ಟು ಸಾಕಲ್ವಾ ಚಿತ್ರ ಚೆನ್ನಾಗಿದೆ ಅನ್ನೋಕೆ.


ಕಾಲೇಜು ದಿನಗಳಲ್ಲಿ ಮುಗ್ಧ ಗೆಳೆಯನಿಗೆ ಮಾಡಿದ್ದ ರ್ಯಾಗಿಂಗ್ ತಪ್ಪಿಗೆ ಪ್ರಾಯಶ್ಚಿತವೆಂಬಂತೆ ಗೆಳೆಯರನ್ನೆಲ್ಲಾ ಒಂದುಗೂಡಿಸಬೇಕಾದ ಅನಿವಾರ್ಯತೆ ನಾಯಕನಿಗೆ. ಆರೇಳು ಮಂದಿ ಸ್ನೇಹಿತರನ್ನೆಲ್ಲಾ ಒಂದುಗೂಡಿಸಲು ಆತ ನಡೆಸೋ ಪ್ರಯತ್ನ… ಅದಕ್ಕೆ ಎದುರಾಗೋ ಅಡೆತಡೆಗಳು. ಆಮೇಲೆ ಏನಾಗುತ್ತೆ… ಎನ್ನೋದೇ ಅನ್ವೇಷಿ.


ಚಿತ್ರದಲ್ಲಿ ರಘುಭಟ್, ತಿಲಕ್ ನಾಯಕರು. ತಿಲಕ್ ನಡೆಸೋ ಹುಡುಕಾಟದಲ್ಲಿ ಜೊತೆಗಿರೋ ವಿಕ್ರಂಸೂರಿ ನಗಿಸೋ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಇನ್ನೊಬ್ಬ ಅಘೋಷಿತ ನಾಯಕ ನಟ…! ಇನ್ನುಳಿದಂತೆ ತಿಲಕ್, ರಘುಭಟ್ ಅವರ ಜೊತೆಗೆ ಸಾಗುವ ಇತರ ಸ್ನೇಹಿತರ ಪಾತ್ರ, ಪ್ರಮುಖ ಪಾತ್ರಗಳಲ್ಲಿ ನಟಿಸಿರೋ ದಿಶಾ ಪೂವಯ್ಯ, ರಮ್ಯಾ ಬಾರ್ನ, ಅನಿ ಅಗರ್ವಾಲ್, ಹಿಂದಿ ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿ ಶ್ರದ್ಧಾ ಶರ್ಮಾ ಅವರ ನಟನೆ ಕೂಡ ಸೂಪರ್.


ಸಿಕ್ಸ್ತ್ ಸೆನ್ಸ್ ಬಲ್ಲ ಹುಡುಗನೊಬ್ಬ ಆದಿತ್ಯ (ತಿಲಕ್) ಗೆ ಕಾಲೇಜು ದಿನಗಳ ನಿನ್ನ ಫ್ರೆಂಡ್ಸ್ ನ ಒಂದುಮಾಡಬೇಕು. ನೀವೆಲ್ಲಾ ಸೇರಿ ಯಜ್ಞ ಮಾಡಿದ್ರೆ ಮಾತ್ರ ಬದುಕ ಬಹುದು. ಇಲ್ಲವಾದಲ್ಲಿ ನೀವೆಲ್ಲಾ ಸಾಯ್ತೀರಿ ಅಂತ ಭವಿಷ್ಯ ನುಡಿಯುತ್ತಾನೆ. ಅವನ ನಡೆ, ಮಾತು ವಿಚಿತ್ರ ಅನಿಸಿದ್ರೂ ಅದರಲ್ಲೇನೋ ಸತ್ಯ ಇದೆ ಎಂದು ಆದಿತ್ಯ ತನ್ನ ಆರೇಳು ಮಂದಿ ಹಳೆಯ ಸ್ನೇಹಿತರ ಹುಡುಕಾಟ ಆರಂಭಿಸ್ತಾನೆ. 15 ದಿನದೊಳಗೆ ಗೆಳೆಯ ಹುಡುಕಾಟ ಆಗಲೇ ಬೇಕಿರುತ್ತೆ.


ಈ ಹುಡುಕಾಟದಲ್ಲಿ ಮೊದಲು ಸಿಕ್ಕಿದ್ದು ಸಿನಿಮಾ ಸ್ಟಾರ್ ಆಗಿದ್ದ ಹೇಮಂತ್ (ರಘುಭಟ್). ನಂತರದಲ್ಲಿ ಬೇರೆ ಬೇರೆ ಗೆಳೆಯರನ್ನು ಹುಡುಕುತ್ತಾನೆ. ಆದ್ರೆ, ಕಾಲೇಜು ದಿನಗಳಲ್ಲಿ ಇವರಿಂದ ರ್ಯಾಗಿಂಗ್ ಗೆ ಒಳಗಾಗ್ತಿದ್ದ ಗೆಳೆಯ ಪಾಣಿ ಮಾತ್ರ ಸಿಕ್ಕಲ್ಲ..! ಬೇರೆ ಗೆಳೆಯರಿಗೆಲ್ಲಾ ಆಗಾಗ ಬಂದು ಮುಖದರ್ಶನ ಮಾಡಿ, ವಿಚಿತ್ರವಾಗಿ ಅವರೊಡನೆ ನಡೆದುಕೊಳ್ಳುತ್ತಿದ್ದ ಪಾಣಿ ಆದಿತ್ಯನ ಕೈಗೆ ಸಿಗಲ್ಲ…!


ನಾಯಕ ನಟ ರಘುಭಟ್ ಪಾಸಿಟೀವ್ ಮತ್ತು ನೆಗಿಟೀವ್ ಶೇಡ್ ಎರಡಲ್ಲೂ ಕಾಣಿಸಿಕೊಂಡಿದ್ದಾರೆ. ಕಳೆದವಾರ ಇವರ ಅಭಿನಯದ ಡ್ರೀಮ್‍ಗರ್ಲ್ ರಿಲೀಸ್ ಆಗಿತ್ತು. ಕೇವಲ ಒಂದುವಾರದ ಅಂತರದಲ್ಲಿ ಅನ್ವೇಷಿ ಮೂಲಕ ಮತ್ತೆ ತೆರೆಯಲ್ಲಿ ಮಿಂಚಿದ್ದಾರೆ. ಡ್ರೀಮ್ ಗರ್ಲ್‍ನಲ್ಲಿ ಕನಸು ನನಸಾಗಿರಲಿಲ್ಲ. ಆದ್ರೆ, ಅನ್ವೇಷಿ ಚಿತ್ರದ ಗೆಲುವು ರಘುಭಟ್ ಅವರ ಮುಖದಲ್ಲಿ ನಗು ಅರಳಿಸಿದೆ.


ಇಷ್ಟೆಲ್ಲಾ ಸರಿ, ಪಾಣಿ ಆದಿತ್ಯಗೆ ಏಕೆ ಸಿಗಲ್ಲ..? ಗೆಳೆಯರೆಲ್ಲಾ ಏಕೆ ಮತ್ತೆ ಒಂದಾಗಿ ಯಜ್ಞ ಮಾಡಿಸಬೇಕಿತ್ತು…? ಕೊನೆಗೂ ಒಂದಾಗ್ತಾರ…? ಪಾಣಿ ಹೇಗೆ ಆದಿತ್ಯಗೆ ಸಿಕ್ತಾನೆ…? ಈ ಪ್ರಶ್ನೆಗಳಿಗೆ ನಿಮಗೆ ಉತ್ತರ ಸಿಗಬೇಕಾದ್ರೆ ನೀವು ಥಿಯೇಟರ್ ಗೆ ಹೋಗ್ಲೇ ಬೇಕು… ಸಿನಿಮಾ ಖಂಡಿತಾ ನಿಮಗೆ ಇಷ್ಟವಾಗುತ್ತೆ…

1 COMMENT

LEAVE A REPLY

Please enter your comment!
Please enter your name here