ರಾಜ್ಯದಲ್ಲಿ ಶಿಕ್ಷಣ ಸಚಿವರಿಂದಲೇ ಮಕ್ಕಳ ‘ಶಿಕ್ಷಣ’ ಹಳ್ಳ ಹಿಡಿದಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಖಾಸಗಿ ಶಾಲೆಗಳಿಗೆ ‘ಶಿಕ್ಷಣ’ ಸಚಿವರ ‘ಕುಮ್ಮಕ್ಕಿ’ನಿಂದಲೇ ಕಿರುಕುಳವಾಗುತ್ತಿದೆ. ಈ ಬಗ್ಗೆ ಖಾಸಗಿ ಶಾಲಾ ಸಂಘಟನೆ ‘ರೂಪ್ಸಾ’, ಮಾನ್ಯ ‘ಪ್ರಧಾನಿ’ಗಳಿಗೆ ಸುಧೀರ್ಘ ಪತ್ರ ಬರೆದಿದೆ. ಆದರೆ, ಪ್ರಧಾನಿ ತಮ್ಮವರ ಬಗೆಗಿನ ‘ಪತ್ರ’ಗಳಿಗೆ ಕೊಡುವ ‘ಗೌರವ’ ತಿಳಿದಿಲ್ಲವೇ ಎಂದು ಹರಿಹಾಯ್ದಿದೆ. ಇನ್ನೂ ಮತ್ತೊಂದೆಡೆ ಶಿಕ್ಷಣ ಸಚಿವರ ಬೇಜವಾಬ್ದಾರಿಯಿಂದಾಗಿ ಎರಡು ವರ್ಷಗಳಿಂದ ಖಾಸಗಿ ಶಾಲೆಗಳು ಸಂಕಷ್ಟ ಎದುರಿಸುತ್ತಿವೆ. ಅವರ ಕುಮ್ಮಕ್ಕಿನಿಂದ ಅಧಿಕಾರಿಗಳು ಖಾಸಗಿ ಶಾಲೆಗಳಿಗೆ ಪದೇ ಪದೇ ಸಮಸ್ಯೆ ಮಾಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ, ಅವರು ಮನವಿಗೆ ಸ್ಪಂದಿಸಿಲ್ಲ. ನಮ್ಮ ಎಲ್ಲ ಆರೋಪಗಳಿಗೆ ಸಂಬಂಧಿಸಿದಂತೆ ಸಾಕ್ಷಗಳ ಸಹಿತ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದೇವೆ. ಸಚಿವ ಸಂಪುಟದಿಂದ ಬಿ.ಸಿ. ನಾಗೇಶ್ ಅವರನ್ನು ತಕ್ಷಣ ಕೈ ಬಿಡುವಂತೆ ಆಗ್ರಹಿಸಿದ್ದೇವೆ. ವಜಾಗೊಳಿಸದಿದ್ದರೆ ಕಾನೂನಾತ್ಮಕ ಹೋರಾಟ ಮಾಡುತ್ತೇವೆ’ ಎಂದು ರುಪ್ಸದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಎಚ್ಚರಿಕೆ ನೀಡಿದರು.