ವ್ಯಕ್ತಿ ವಿಚಾರವಲ್ಲ ಸುವಿಚಾರವಷ್ಟೇ..

1
204

ಅಲ್ಲೊಂದು ಆರಡಿಯ ದೇಹ ವಿಕಾರವಾಗಿ ಹೆಣವಾಗಿ ಮಲಗಿತ್ತು. ಇಲ್ಲೊಂದು ಶವ ಕಾವಹೊತ್ತವನ ಎದೆಯ ಪ್ರತೀಕಾರದ ಮಸಣಕಾವ್ಯದಿ ಬರೆದಂತಿತ್ತು. ಹೂಹಿಡಿದವನು ಅಂಗಿ ತೊಡದೆಯೇ ಕೇವಲ ಚಡ್ಡಿಯಲ್ಲಿಯೇ ಸೂತಕದ ಮನೆಯ ಜಗಲಿಯ ತುಳಿದಿದ್ದ. ಅವನ್ಯಾರೋ ಕಿತ್ತೋದ ಚಪ್ಪಲಿಯಲೇ ಬರಿ’ಗೈ’ಯಲಿ ಕಣ್ಣೀರ ಕೊಡಪಾನವ ಕಂಕುಳಲಿ ಹೊತ್ತು ಅದೇ ಜಾಗಕ್ಕೆ ಓಡಿದ್ದ. ಇನ್ನುಳಿದವರು ಚಿಂತಕರ ಸಂಘವ ತಬ್ಬಿ ಗೋಳಿಟ್ಟರು ಇದ ನೋಡಿ ದೇವಸ್ಥಾನದಲಿ ಮಚ್ಚು‌ಲಾಂಗುಗಳು ಮಸೀದಿಯಲಿ ಮದ್ದುಗುಂಡುಗಳ ತಲೆಗಳು ಜನ್ಮತಾಳಿದವು. ರಾಜ್ಯ ರಾಜ್ಯವಾ ಮಾರಿ ಊರು ಕೇರಿಗೆ ಬೆಂಕಿಹತ್ತಿಸಲು ಎತ್ತಿಕಟ್ಟಿದವನ ಜೋಳಿಗೆಯಲಿ ಹಣದ ಹೊಳೆಯೇ ತುಂಬಿತ್ತು. ಆದರೇನು ಸತ್ತವನ ಹೆತ್ತಕರುಳು ಹೊತ್ತ ನೋವಿಗೆ ಸ್ಪಂದಿಸದ ಅಪರಿಚಿತರೇ ಪರಿಚಿತರಂತೆ ಮೂರು ದಿನ ಕಂಡರು.

ಆ ಮೂರು ದಿನದಲ್ಲೇ ರಕ್ತ ರಕ್ತದ ನಡುವೆ ಭಕ್ತಿಯ ಹೆಸರು ಅಂಟಿಸಿ ಸೆರಗಲಿ ಬೆಂಕಿಯ ಗಂಟ ಹೊರಿಸಿದ್ದರು. ಇದರಿಂದ ರಕ್ತದಿ ರಾಜಕೀಯದ ಬೇಳೆಯ ಬೇಯಿಸಿ ಓಟಿಗಾಗಿ ಜಾತಿ-ಧರ್ಮದ ವೇಷಕಟ್ಟಿದ್ದರು. ಸರಿಯಾಗಿ ಐದು ವರ್ಷದ ಹೊಲಸು ರಾಜಕೀಯವಿಲ್ಲಿ ಮುಗಿದಿದೆ ಎಂದಾದಾಗ ಜನರ ನಾಡಿಬಡಿತವ ನಿಲ್ಲಿಸುವ ಶತಪ್ರಯತ್ನದಲಿ ಪಕ್ಷಗಳು ನಿರತವಾಗಿದೆ. ಊರು ಕೇರಿಯ ಸುಟ್ಟು ನಾರುತಿರುವ ನಾಲಿಗೆಯಲೇ ಬಡವರ ಜೀವಹಿಂಡುವ ಕೋಟಿ ಹಂಡೆಯ ಹೊತ್ತವನು ಜನಸಾಮಾನ್ಯರನ್ನ ಉರುವಲಾಗಿ ಬಳಸುತ್ತಿರೋದು ನಿಜಕ್ಕೂ ಆಘಾತಕಾರಿಯೇ. ಹಿಂದೂ-ಮುಸ್ಲಿಂ ಬೇಧಭಾವ ಶ್ರೀಸಾಮಾನ್ಯರಿಗೇನೂ ಇಲ್ಲಾ ಸ್ವಾಮಿ, ಯಾಕಂದ್ರೆ ಅವರಿಗೆ ಓಟಿನ ಅವಶ್ಯಕತೆ ಇಲ್ಲ. ನೋಟಿನ ಓಟವ ಬಲ್ಲವರಲ್ಲ, ನೋಟದಲಿ ಮೃದುವಾಗಿ ಕೆಲಸದಲಿ ಹಿತವಾಗಿ ಒಂದೊತ್ತಿನ ಗಂಜಿ ಕುಡಿದು ಬದುಕುತ್ತಿರುವ ಮುಗ್ಧರ ಮೊಗದ ನಗೆಯನ್ನ ಅಳಿಸದಿರಿ.
ನಾವೆಲ್ಲರೂ ಮಾನವರು ಮನುಜ ಮತವೇ ವಿಶ್ವದ ಉಸಿರು-ಹಸಿರೆಂಬ‌ ಧರ್ಮವ ಹೊಂದೋಣ. ಆದ್ರೆ, ಬಿಳಿಬಣ್ಣವ ಹಚ್ಚಿ ಮಾತಿನಲೇ ಹೆಣವನುರುಳಿಸಿ ಅಧಿಕಾರವ ಹಿಡಿಯುವ ಕೊಳಕು ಮನಸಿಗೆ ಮಣೆಹಾಕದಿರಿ-ಕೊನೆಗಾಣದಿರಿ ಎನ್ನುವುದೇ ನಮ್ಮಿ ಆಶಯ.

-ದತ್ತರಾಜ್ ಪಡುಕೋಣೆ

1 COMMENT

LEAVE A REPLY

Please enter your comment!
Please enter your name here