ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಕಿಡಿಕಾರಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಸಿಎಂ ಆದ ಒಂದೇ ವರ್ಷಕ್ಕೆ ಅವರ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿತ್ತು. ಅರ್ಕಾವತಿ, ಕೆಪಿಎಸ್ಸಿ, ವಕ್ಫ್ ಆಸ್ತಿ ಕಬಳಿಕೆ, ಭೂ ಒತ್ತುವರಿ, ಸಿವಿಲ್ ಪೊಲೀಸ್ ನೇಮಕಾತಿ ಹಗರಣ ರಾರಾಜಿಸಿದ್ದವು.
ಕಾಂಗ್ರೆಸ್ ವಿರುದ್ಧ ಅಂದೇ ರಾಜ್ಯ ಬಿಜೆಪಿ ಘಟಕ ಧ್ವನಿ ಎತ್ತಿತ್ತು. ಸಿದ್ದರಾಮಯ್ಯ ಸ್ಮೃತಿಗೆ ಗರ ಬಡಿದಿದೆಯೇ ಎಂದು ಟ್ವೀಟ್ ಮಾಡಿದೆ. 2014ರ ಮಾ.22ರಂದು ಕೆಪಿಎಸ್ಸಿ ನೇಮಕಾತಿ ಪಟ್ಟಿ ಬಿಡುಗಡೆ ಮಾಡಿತ್ತು. ಅಂದು ಸಂಜೆಯೇ ನೇಮಕಾತಿ ಹಿಂದಿನ ಕರ್ಮಕಾಂಡದ ಬಂಡವಾಳ ಹೊರಬಿತ್ತು. ಆ ಅಕ್ರಮದಲ್ಲಿ 7 ಮಂದಿಯಷ್ಟೇ ಭಾಗಿ ಎಂದು ತೇಪೆ ಹಚ್ಚಿದ್ರು. ಅದರ ಬೆನ್ನಲ್ಲೇ 362 ಹುದ್ದೆಗಳ ನೇಮಕ ರದ್ದುಗೊಳಿಸಲಿಲ್ಲವೇ? ಎಂದು ಪ್ರಶ್ನಿಸಿದೆ. ಇನ್ನೂ ಸಿದ್ದರಾಮಯ್ಯರು ಲೋಕಾಯುಕ್ತ ಸಮಾಧಿ ಮಾಡಿದ್ದಕ್ಕೆ ಬೆಟ್ಟದಷ್ಟು ಪುರಾವೆಗಳಿವೆ. ಬೊಮ್ಮಾಯಿ ಸರ್ಕಾರ ಎಲ್ಲವನ್ನೂ ಬಯಲಿಗೆ ಎಳೆಯಲಿದೆ. ಏರುಧ್ವನಿಯಲ್ಲಿ ಮಾತಾಡಿದ ಮಾತ್ರಕ್ಕೆ ಎಲ್ಲವೂ ಸತ್ಯವಾಗಲ್ಲ ಕರಪ್ಟ್ ಕಾಂಗ್ರೆಸ್ ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟರ್ನಲ್ಲಿ ಕಿಡಿಕಾರಿದೆ.