ಈ ಬಾರಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆ ಇಲ್ಲ: ಭಾವನಾತ್ಮಕ ಪತ್ರ ಬರೆದ ಕಿಚ್ಚ ಸುದೀಪ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಮುಂಬರುವ ಹುಟ್ಟುಹಬ್ಬದ ಆಚರಣೆಯ ಕುರಿತು ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. ಬಲವಾದ ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ಈ ಬಾರಿ ಸೆಪ್ಟೆಂಬರ್ 2ರಂದು ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ತೀರ್ಮಾನಿಸಿರುವುದಾಗಿ ಅವರು ತಿಳಿಸಿದ್ದಾರೆ.
ಸೆಪ್ಟೆಂಬರ್ 2ರಂದು ತಾವು ಮನೆಯಲ್ಲೇ ಇರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸುದೀಪ್, ಅಭಿಮಾನಿಗಳು ತಮ್ಮ ನಿವಾಸದ ಬಳಿ ಬಂದು ಕಾಯಬಾರದು ಎಂದು ಕೈಮುಗಿದು ಮನವಿ ಮಾಡಿದ್ದಾರೆ.
ತಮ್ಮ ಪತ್ರದಲ್ಲಿ, “ಸಿಂಹ ಸುಮ್ಮನೆ ಕುಳಿತಿದೆ ಎಂದರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ” ಎಂಬ ಖಡಕ್ ಡೈಲಾಗ್ ಉಲ್ಲೇಖಿಸಿರುವ ಕಿಚ್ಚ ಸುದೀಪ್, ಮುಂದಿನ ದಿನಗಳಲ್ಲಿ ದೊಡ್ಡ ಪ್ರಾಜೆಕ್ಟ್ಗಳೊಂದಿಗೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗುತ್ತಿರುವ ಸುಳಿವು ನೀಡಿದ್ದಾರೆ.
“ಸೆಪ್ಟೆಂಬರ್ 2 ಕೇವಲ ಒಂದು ಸಾಮಾನ್ಯ ದಿನಾಂಕ. ಆದರೆ ಕಳೆದ 30 ವರ್ಷಗಳಿಂದ ಆ ದಿನವನ್ನು ಅದ್ಧೂರಿ ಹಬ್ಬವನ್ನಾಗಿ ಪರಿವರ್ತಿಸಿದವರು ನೀವೇ. ನೀವು ನಿಮ್ಮ ಊರುಗಳಲ್ಲಿ ಮಾಡುವ ಸಮಾಜಮುಖಿ ಕಾರ್ಯಗಳೇ ನನಗೆ ಶ್ರೀರಕ್ಷೆ ಹಾಗೂ ನಿಜವಾದ ಆಶೀರ್ವಾದ” ಎಂದು ಅಭಿಮಾನಿಗಳ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಸತ್ಕಾರ ಮತ್ತು ಸಂಭ್ರಮ ಗದ್ದಲವಾಗಬಾರದು ಎಂಬ ಸಂದೇಶವನ್ನೂ ನೀಡಿರುವ ಅವರು, ತಮ್ಮ ಹಾಗೂ ಅಭಿಮಾನಿಗಳ ನಡುವಿನ ಸಂಬಂಧವನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಶೀಘ್ರದಲ್ಲೇ ಎಲ್ಲರೂ ಮುಖಾಮುಖಿಯಾಗಿ ಭೇಟಿಯಾಗೋಣ ಎಂದು ಅಭಿಮಾನಿಗಳಿಗೆ ಭರವಸೆ ನೀಡಿರುವ ಕಿಚ್ಚ ಸುದೀಪ್, ಈ ಬಾರಿ ಹುಟ್ಟುಹಬ್ಬದ ಸಂಭ್ರಮಕ್ಕೆ ಬ್ರೇಕ್ ಹಾಕಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಹೊಸ ಸಿನಿಮಾಗಳು ಹಾಗೂ ಬಿಗ್ ಪ್ರಾಜೆಕ್ಟ್ಗಳ ಮೂಲಕ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಲು ಸಜ್ಜಾಗಿದ್ದಾರೆ.



