No menu items!
5.2 C
Munich
Friday, April 24, 2026

ಬದುಕು ಸುಲಭವಲ್ಲ.

Must read

ಪ್ರತಿದಿನ ಹನ್ನೆರಡು ಗಂಟೆ ಆದ್ರೆ ಮನೆಯ ಮುಂದೆ ಸೊಪ್ಪು ಸೊಪ್ಪು ಅಂತ ಆತ ಬಂದು ನಿಲ್ತಾನೆ. ನಾವು ಸೋಪ್ಪು ತಗೋತಿವೋ ಬಿಡ್ತಿವೋ ಆತ ಒಂದು ದಿನವೂ ತಪ್ಪಿಸಲಾರ.. ಭಾನುವಾರ ಕೂಡ ಆತನಿಗೆ ರಜೆಯಿಲ್ಲ.. ನಮ್ಮ ಮನೆ ಮುಂದೆ ನಿಂತು ನಮ್ಮ ಮನೆಯ ಪುಟ್ಟ ರಾಜಕುಮಾರಿಯನ್ನ ಚಿನ್ನು ಅಂತ ಕರೆದೆ ಆತ ಮುಂದಕ್ಕೆ ಸಾಗೋದು.. ಆತ ಚಿನ್ನು ಅಂದ್ರೆ ನನ್ನ ಮಗಳಿಗೆ ಅದೇನೊ ಮಹದಾನಂದ.. ಅವನ ಧ್ವನಿ ಹಿಂದಿನ ರಸ್ತೆಯಲ್ಲಿ ಬಂದ್ರೆ ಸೋಫಾ ಹತ್ತಿ ಆತನಿಗೆ ಕಾಯೋದು ನನ್ನ ಮಗಳ ನಿತ್ಯದ ಕೆಲಸ.
ಒಂದು ದಿನ ನಾವು ಮನೆಮಂದಿಯೆಲ್ಲ ಮನೆಯಿಂದ ಸುಮಾರು ಐದು ಕಿಲೋಮೀಟರ್ ದೂರವಿರುವ ಹೋಟೆಲ್ ಒಂದಕ್ಕೆ ಬೆಳಿಗ್ಗೆ ಏಳೂವರೆಗೆ ಹೋಗಿದ್ವಿ… ಆಚೆ ನಿಂತು ತಿಂಡಿ ತಿನ್ನುತ್ತಿದ್ರೆ ಅಲ್ಲಿ ನನ್ನ ಮಗಳನ್ನ ಚಿನ್ನು ಅಂತ ಕರೆಯೋ ಧ್ವನಿ. ನೋಡಿದ್ರೆ ಅದೇ ಸೊಪ್ಪು ಮಾರುವವನು.. ನಿಜಕ್ಕೂ ಒಮ್ಮೆ ಕಣ್ಣಲ್ಲಿ ತುಂಬಿ ಬಂತು. ಕಾರಣ ಆತ ಬೆಳಿಗ್ಗೆ ಅಷ್ಟೊತ್ತಿಗೆ ಸೊಪ್ಪು ಮಾರಲು ಆರಂಬಿಸಿ ನಮ್ಮ ಮನೆ ಹತ್ತಿರ ಬರುವಾಗ ಮಟ ಮಟ ಮಧ್ಯಾಹ್ನ ವಾಗಿರತ್ತೆ. ಜೊತೆಗೆ ಅರ್ಧಕ್ಕರ್ಧ ಸೊಪ್ಪು ಹಾಗೇ ಉಳಿದಿರತ್ತೆ. ಎಲ್ಲ ಸೊಪ್ಪನ್ನು ಖಾಲಿ ಮಾಡಲು ಆತ ಇನ್ನೆಷ್ಟು ಅಲೆಯುತ್ತಾನೊ ಅಂತ ನೆನೆದು ಮನಸ್ಸು ಭಾರವಾಯ್ತು. ಒಬ್ಬ ವ್ಯಕ್ತಿ ಕೇವಲ ಸೊಪ್ಪು ಮಾರಿ ತನ್ನ ಬದುಕನ್ನ ಸಾಗಿಸುತ್ತಾನೆಂದರೆ ಅದು ಸುಲಭವಲ್ಲ..ಆತನ ಹೆಸರು ಜವರೇಗೌಡ. ಮಂಡ್ಯದವನು. ಬದುಕಿನ ಬಂಡಿ ನೂಕಲು ಬೆಂಗಳೂರಲ್ಲಿ ಸೊಪ್ಪು ಮಾರುವ ಕಾಯಕ ಆತನದ್ದು. ಪ್ರತಿದಿನ ಸೊಪ್ಪು ಮಾರಲು ಆತ ಮೂವತ್ತು ಕಿಲೋಮೀಟರ್ ಒಡಾಡ್ತಾನೆ. ನಿಜವಾಗಲೂ ಪ್ರತಿದಿನ ಪ್ರತಿ ಬೀದಿ ಸುತ್ತಿ ಮನೆಮುಂದೆ ನಿಂತು ನಮಗೆ ಬೇಕಾದ ಸೊಪ್ಪು ಕೊಡುವ ಆತನ ಬದುಕು ಅಷ್ಟು ಸುಲಭವಲ್ಲ. ಪ್ರತಿ ಮುಂಜಾನೆ ಸೂರ್ಯ ಕಣ್ಣುಬಿಡುವಷ್ಟರಲ್ಲಿ ಮಾರ್ಕೆಟ್ ತಲುಪಿ ಬೇಕಾದ ಸೊಪ್ಪನ್ನ ಆಯ್ಕೆಮಾಡಿ ಅಲ್ಲಿಂದ ಸೈಕಲ್ ತುಳಿಯುತ್ತಾ, ಜೊತೆಗೆ ನಡೆಯುತ್ತಾ ಪ್ರತಿ ಮನೆ ಮನೆಗೆ ತೆರಳುತ್ತಾನೆ.. ಕೆಲವರು ಪ್ರೀತಿಯಿಂದ ಮಾತನಾಡಿಸಿ ಸೊಪ್ಪು ಪಡೆದರೆ ಇನ್ನು ಹಲವರು ಕನಿಷ್ಠ ಗೌರವವನ್ನು ನೀಡದೇ ನಡೆಸಿಕೊಳ್ತಾರೆ. ಮಳೆ ಗಾಳಿ ಹೆಚ್ಚು ಕಡಿಮೆ ಆದಂತೆಲ್ಲಾ ಆತನ ವ್ಯಾಪಾರದ ಮೇಲೂ ಪರಿಣಾಮ ಬೀರುತ್ತಾ ಹೋಗತ್ತೆ.. ಕೇವಲ ಸೊಪ್ಪು ವ್ಯಾಪಾರದಿಂದ ಆತ ತನ್ನ ತಂದೆತಾಯಿ ಹೆಂಡತಿ ಮಕ್ಕಳ ಬದುಕನ್ನ ಸಾಗಿಸಬೇಕು. ದಿನಕ್ಕೆ ನೂರೋ ಇನ್ನೂರೋ ಸಂಪಾದನೆ ಮಾಡಿ ಯಾವ ಬದುಕನ್ನ ಹೇಗೆ ಕಟ್ಟಿಕೊಳ್ಳಬಲ್ಲ. ಮಕ್ಕಳಿಗೆ ಹೇಗೆ ಉತ್ತಮ ಶಿಕ್ಷಣ ಒದಗಿಸಬಲ್ಲ. ಪ್ರತಿದಿನ ಸೈಕಲ್ ತುಳಿಯೊ ತನ್ನ ಈ ಚಿಕ್ಕ ಸಂಪಾದನೆಯಲ್ಲಿ ಹೇಗೆ ತನ್ನ ಕಾರಿನ ಕನಸು ಈಡೇರಿಸಬಲ್ಲ..
ಇದು ಒಬ್ಬ ಸೊಪ್ಪು ಮಾರುವ ವ್ಯಕ್ಯಿ ಜವರೇಗೌಡನ ಕಥೆಯಲ್ಲ. ಹಲವರ ನಿತ್ಯಬದುಕು ಇದು.
ಇತನ ಹಾಗೇ ಇನ್ನೊಬ್ವ ತರಕಾರಿ ವ್ಯಾಪಾರಿ.. ಆತನೂ ಒಂದು ದಿನದ ಸಂಪಾದನೆಗಾಗಿ ಅಂದ್ರೆ ಹೊಟ್ಟಪಾಡಿಗಾಗಿ ಪ್ರತಿದಿನ ಹದಿನೈದರಿಂದ ಇಪ್ಪತ್ತು ಕಿಲೋಮೀಟರ್ ನಡೆಯುತ್ತಾನೆ.. ಭಾರದ ತಳ್ಳುವ ಗಾಡಿಯಲ್ಲಿ ತರಕಾರಿಯನ್ನ ತುಂಬಿಸಿ, ಬದನೆಕಾಯಿ ಬೆಂಡೆಕಾಯಿ, ಈರುಳ್ಳಿ ಟೊಮ್ಯಾಟೊ ಅಂತ ತಾನು ತಂದ ತರಕಾರಿಯ ಹೆಸರನ್ನ ಪ್ರತಿಮನೆಗೂ ಕೇಳುವಂತೆ ಕೂಗುತ್ತಾ, ಬಿಸಿಲು ಮಳೆ ಚಳಿಯನ್ನ ಲೆಕ್ಕಿಸದೆ ಅಲೆದಾಡಿ ಜೀವನಬಂಡಿಯನ್ನ ಆತ ನಡೆಸುತ್ತಿದ್ದಾನೆ.. ಆದ್ರೆ ಜನ ಮನೆ ಬಾಗಿಲಿಗೆ ತಾಜಾ ತರಕಾರಿ ಒದಗಿಸುತ್ತಾನೆ, ಅತೀ ಕಷ್ಡದ ಬದುಕನ್ನ ನಡೆಸುತ್ತಾನೆ ಅನ್ನೋದನ್ನು ಮರೆತು ಅಂತಹವರ ಬಳಿಯೇ ಚೌಕಾಸಿಗಿಳಿತಾರೆ.. ಅದೆಲ್ಲವನ್ನು ಸಹಿಸುತ್ತಾ ನಿತ್ಯವೂ ತಂದ ತರಕಾರಿಗಳನ್ನ ಖಾಲಿ ಮಾಡಿಯೇ ಆತ ಮನೆ ಸೇರುವಷ್ಟರಲ್ಲಿ ಸೂರ್ಯನೂ ಮನೆ ತಲುಪಿರುತ್ತಾನೆ. ಎಂತಹ ಕಷ್ಟದ ಬದುಕು ಇವರೆಲ್ಲರದ್ದು. ಅವರ ಕನಸು ಬಹುತೇಕ ನನಸಾಗದೇ ಹಾಗೇ ಉಳಿದೆಹೋಗುತ್ತದೆ. ಕಾರಣ ಅವರ ಆರ್ಥಿಕ ಸ್ಥಿತಿ.
ಇನ್ನೊಬ್ಬ ತಾತ ವಾರಕ್ಕೆ ಮೂರು ಬಾರಿ ಮನೆ ಮುಂದೆ ಬರುತ್ತಾನೆ.. ಸುಮಾರು ಮೂವತ್ತು ವರ್ಷಗಳಿಂದ ಆತನ ಬಳಿಯಲ್ಲಿಯೇ ಕಡ್ಲೆಪುರಿಯನ್ನ ಖರೀದಿ ಮಾಡುವದು ನಮ್ಮ ಮನೆಯವರ ಅಭ್ಯಾಸ.. ಆತ ಮೂವತ್ತು ವರ್ಷದ ಹಿಂದೆ ಹೇಗೆ ವ್ಯಾಪಾರ ಮಾಡುತ್ತಿದ್ದನೋ ಇಂದು ಕೂಡ ಹಾಗೆಯೇ ಇದ್ದಾನೆ. ಅಂದು ಅಂಕಲ್ ಅಂತ ಕರೆಯುತ್ತಿದ್ದ ಜನ ಇಂದು ತಾತಯ್ಯ ಅಂತ ಕರೆಯುತ್ತಾರೆ. ಅಷ್ಟೆ ಆತನ ಬದುಕಿನ ಬದಲಾವಣೆ..
ಇನ್ನು ಹೀನಾಯದ ಬದುಕು ಕೂಡ ಈ ಮಹಾನಗರದಲ್ಲಿ ಕಣ್ಮುಂದೆ ಬಂದು ನಿಲ್ಲುತ್ತೆ. ಆತ ಸುಮಾರು ಅರವತ್ತು ವಯಸ್ಸಿನ ವ್ಯಕ್ತಿ. ನೋಡಲು ನಿಶ್ಯಕ್ತನೇ.. ಆತ ಕೆಲವು ಮನೆಗಳಿಗೆ ತೆರಳಿ ಒಪ್ಪಿದರೆ ಅವರ ಮನೆಯ ಟಾಯ್ಲೆಟ್ ತೊಳೆದು ಅವರು ಕೊಡುವ ಹತ್ತೊ ಇಪ್ಪತ್ತೊ ರೂಪಾಯಿಗಳನ್ನ ಕೂಡಿ ಹಾಕಿ ತನ್ನ ಬದುಕನ್ನ ಆತ ಸಾಗಿಸುತ್ತಾನೆ..ಎಂತಹ ವಿಪರ್ಯಾಸ..
ಮಹಾನಗರಗಳು ಹಲವರ ಪಾಲಿಗೆ ಬದುಕು ಕಟ್ಟಿಕೊಡುವ ದೇವಸ್ಥಾನದಂತೆ. ಬದುಕಿನ ಅನಿವಾರ್ಯತೆಗಳಿಗೆ ಒಂದಿಲ್ಲೊಂದು ರೀತಿಯ ಪರಿಹಾರ ಸಿಗುವ ಸ್ಥಳವಿದು. ಇಲ್ಲಿ ಹಣವಂತರ ಬದುಕು ಆಡಂಬರವಾಗಿದ್ರೆ ಇಂತಹ ವ್ಯಾಪಾರಿಗಳ ಪಾಲಿಗೆ ಬದುಕು ಸುಲಭವಲ್ಲ.. ನಿತ್ಯವೂ ಹೋರಾಟದ ಹಾದಿ. ಒಂದುಕ್ಷಣ ಮರೆತರೂ ಅಂದಿಗದು ಉಪವಾಸದ ಬದುಕು..
ಎಲ್ಲರಂತೆ ಸುಖ ಜೀವನದ ಕನಸು ಇವರಲ್ಲೂ ಬೇಕಾದಷ್ಟಿವೆ. ಒಮ್ಮೆ ಮಾತಿಗಿಳಿದರೆ ಇವರೆಂತಹ ಮುಗ್ಧರು, ಎಷ್ಟು ಕಷ್ಟದ ಬದುಕು ಇವರದ್ದು ಅನ್ನೋದು ಕ್ಷಣಮಾತ್ರದಲ್ಲಿ ಅರ್ಥವಾಗಿಬಿಡತ್ತೆ. ತಮ್ಮ ಚಿಕ್ಕ ಸಂಪಾದನೆಯಲ್ಲೆ ಎಲ್ಲವನ್ನೂ ಸರಿತೂಗಿಸಿಕೊಂಡು, ಮನಸ್ಸಿನ ನೂರಾರು ಆಸೆಗಳನ್ನ ಸಾಯಿಸಿಕೊಂಡು ಪ್ರತಿದಿನವನ್ನು ಸ್ವಿಕರಿಸುವುದು ಸುಲಭವಲ್ಲ. ತಂದ ವಸ್ತುಗಳು ಅದೇನೆ ಆಗಿರಲಿ ಮನೆ ಸೇರುವ ಮೊದಲು ಖಾಲಿಯಾದ್ರೆ ನೆಮ್ಮದಿ ಇಲ್ಲವಾದರೆ ಆ ನಷ್ಟವನ್ನು ಅವರೇ ಭರಿಸಬೇಕು. ಯಾವ ಇನ್ಷುರೆನ್ಸ್ ಕಂಪನಿಯಾಗಲಿ ಸರ್ಕಾರವಾಗಲಿ ಅವರ ಕಷ್ಟಕ್ಕೆ ನಿಲ್ಲಲಾರದು.. ಅಂತಹ ಕಷ್ಟದ ಜೀವನ ಇವರೆಲ್ಲರದ್ದು..
ಒಂದು ದಿನವೂ ಮರೆಯದಂತೆ ಮನೆ ಮುಂದೆ ಬಂದು ಬೇಕಾಗಿರುವ ಹಲವು ಅಗತ್ಯಗಳನ್ನ ಪೂರೈಸುವ ಬಡ ವ್ಯಾಪಾರಿಗಳಿಗೆ ಚಿಕ್ಕ ಕಿರುನಗೆ, ನಯವಾಗಿ ಮಾತನ್ನಾಡಿದ್ರೆ ಅದುವೆ ಅವರಿಗೆ ನೀಡುವ ಗೌರವ. ಯಾಕಂದ್ರೆ ಅವರೆಲ್ಲರ ಬದುಕು ಸುಲಭವಲ್ಲ.

  • ಶ್ವೇತಾ ಭಟ್

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ

ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಯುವತಿ ಮಾಡಿದ್ದಾದ್ರೂ ಏನು..?

ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?

ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!

2019ರ ವರ್ಲ್ಡ್ ಕಪ್‍ನಲ್ಲಿ ಪಾಕ್ ಆಡೋದು ಬಹುತೇಕ ಡೌಟ್..! ಯಾಕೆ ಗೊತ್ತಾ..?

ಕಂಬಳ ಆಡುವವರಿಗೆ ಮಾನ ಮರ್ಯಾದೆ ಇಲ್ಲ ಎಂದ ಸ್ವಾತಂತ್ರ್ಯ ಹೋರಾಟಗಾರ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article