No menu items!
13.9 C
Munich
Wednesday, April 29, 2026

ತೀರ್ಥಹಳ್ಳಿಯ ಈ ನಿರೂಪಕ ‘ಕೃಷಿ ಪ್ರೇಮಿ’…!

Must read

ಸರ್, ಹೇಗಿದ್ದೀರ? ಅಂದೆ…! ‘ ನಾನು ಚೆನ್ನಾಗಿದ್ದೀನಿ, ನೀವು ಹೇಗಿದ್ದೀರಿ’? ಅಂತ ಅವರು ಕೇಳಿದ್ರು. ಹೀಗೆ ಇಬ್ಬರ ನಡುವೆ ಮಾತು ಮುಂದುವರೆಯುತ್ತಾ ಸಾಗಿತು. ಸರ್, ಊರಿಗೆ ಹೋಗಿದ್ರಾ? ನನ್ನ ಮತ್ತೊಂದು ಪ್ರಶ್ನೆ…! ಹ, ಲಾಸ್ಟ್ ವೀಕ್ ಹೋಗಿದ್ದೆ, ನೀವು ಹೋಗಿದ್ರಾ ಅಂತ ಅವ್ರು… ಮುಂದಿನ ತಿಂಗಳು ಹೋಗ್ ಬೇಕಂತಿದ್ದೀನಿ. ನಿಮ್ಮಮನೇಲಿ ಎಲ್ಲಾ ಹೇಗಿದ್ದಾರೆ? ಊರು ಹೆಂಗಿದೆ? ಅಂತ ನಾನು…! “ಊರು ಚಂದ ಇದೆ. ಮನೆಯಲ್ಲೆಲ್ಲಾ ಚಂದ ಇದಾರೆ ಮಾರಾಯ್ರೆ. ಅಡಕೆ ಕೊಯ್ಲು ಅಲ್ವಾ… ? ಅದಕ್ಕೆ ಆಗಾಗ ಹೋಗಿ ಬರ್ತಿರ್ತೀನಿ…’’ ಅಂತ ಹೇಳಿದ್ರು…!
ನಿಮಗೆ ಈಗಾಗಲೇ ಗೊತ್ತಾಗಿದೆ ಅನ್ಕೊತೀನಿ. ಇವತ್ತು ನಾನಿಲ್ಲಿ ಬರೀತಾ ಇರೋದು ಮಲೆನಾಡಿನ ಹೆಮ್ಮೆಯ ವ್ಯಕ್ತಿ ಬಗ್ಗೆ. ಹೌದು, ನನ್ನ ಜೊತೆ ಹೀಗೆ ಮಾತಾಡಿದವ್ರು ಟಿವಿ9ನ ಮಾಲ್ತೇಶ್…!

ಮಲೆನಾಡಿನ ಕುಗ್ರಾಮದಲ್ಲಿ ಹುಟ್ಟಿ ಬೆಳೆದ ಇವರ ಪ್ರಥಮ ಆದ್ಯತೆ ಕೃಷಿ. ಕೃಷಿಯಲ್ಲಿ ಹೊಸತೇನಾದರು ಮಾಡಬೇಕು ಎಂಬ ಆಸೆ. ಹಾಗಂತ ಪತ್ರಿಕೋದ್ಯಮವನ್ನು ಬಿಟ್ಟು ಕೃಷಿಯೊಂದನ್ನೇ ಅಪ್ಪಿಕೊಳ್ಳುವ ಮನಸ್ಸಿಲ್ಲ…! ಕೃಷಿ ಮತ್ತು ಪತ್ರಿಕೋದ್ಯಮ ಎರಡು ಇವರ ಎರಡು ಕಣ್ಣುಗಳಿದ್ದಂತೆ…! ಇವರಿಗೆ ಎರಡರ ಮೇಲೂ ಪ್ರೀತಿ ಗೌರವ. ಎರಡನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ ತೀರ್ಥಹಳ್ಳಿಯ ಹೆಮ್ಮೆಯ ಯುವಕ…! ಇವರೂರು ಮಲೆನಾಡ ಸಿರಿ ಶಿವಮೊಗ್ಗದ ತೀರ್ಥಹಳ್ಳಿ,  ಕನ್ನಂಗಿ ಬಳಿಯ  ಕುಗ್ರಾಮ ಕುಚ್ಚಲು ಜನಗಲ್. ಸರಿಯಾದ ರಸ್ತೆ, ಬಸ್ ವ್ಯವಸ್ಥೆಯಿಲ್ಲದ ಹಳ್ಳಿಯಿಂದ ಬಂದಿರುವ ಪ್ರತಿಭೆ ‘ಮಾಲ್ತೇಶ್’.


ಟಿವಿ9 ಕನ್ನಡ ಸುದ್ದಿವಾಹಿನಿಯ ನಿರೂಪಕ ಮಾಲ್ತೇಶ್ ಅವರು ಯಾರಿಗೆ ತಾನೆ ಗೊತ್ತಿಲ್ಲ? ಎಷ್ಟೋ ಜನ ಹುಡುಗಿಯರ ನಿದ್ರೆ ಗೆಡಿಸಿರೋ ನಿರೂಪಕ. ಹಳ್ಳಿಬಿಟ್ಟು ಪಟ್ಟಣ ಸೇರ್ಕೋ ಬೇಕು ಅಂತ ಕನಸುಕಾಣುವವರ ನಡುವೆ ಮಾಲ್ತೇಶ್ ತುಂಬಾ ಭಿನ್ನವಾಗಿ ಕಾಣ್ತಾರೆ. ಕೃಷಿ ಬೇಕಿಲ್ಲ, ಕೈತುಂಬ ಸಂಬಳ ಸಿಗೋ ಕೆಲಸ ಬೇಕು, ಅದೇ ತನ್ನ ಜೀವನ ಎಂದು ಅನ್ಕೊಂಡವ್ರು ಮಾಲ್ತೇಶ್ ಅವರ ಬಗ್ಗೆ ತಿಳಿಲೇಬೇಕು. ಡಿಗ್ರಿನೋ, ಮಾಸ್ಟರ್ ಡಿಗ್ರಿನೋ ಮುಗಿದ ಮೇಲೆ ಹಳ್ಳಿಬಿಟ್ಟು ನಗರ, ಮಹಾನಗರಗಳಿಗೆ ಬಂದು ಸೆಟಲ್ ಆಗುವವರೇ ಹೆಚ್ಚು. ಇದರಿಂದ ಎಷ್ಟೋ ಹಳ್ಳಿಗಳು ಕಾಣೆ ಆಗುವ ಆತಂಕವಿದೆ. ಅದರಿಲಿ, ಎಲ್ಲರಂತಲ್ಲ ನಮ್ಮ ಮಾಲ್ತೇಶ್.


ಯಾಕ್ ಗೊತ್ತಾ? ಡಿಗ್ರಿ ಮುಗಿದ ಮೇಲೆ ಇವರು ಕೆಲಸ ಹುಡ್ಕೊಂಡು ಬೆಂಗಳೂರು, ದೆಹಲಿ, ಮುಂಬೈ ಅಂತ ಹೊರಟವರಲ್ಲ…! ಕೃಷಿ ಮಾಡ್ತೀನಿ ಅಂತ ಮನೆಗೆ ಮರಳಿದ ‘ಕೃಷಿ ಪ್ರೇಮಿ’. ಮಾಲ್ತೇಶ್ ಅವರ ತಂದೆ ಶಿವಪ್ಪ ಗೌಡ್ರು, ತಾಯಿ ಪುಷ್ಪವತಿ. ಅಕ್ಕ ಮಯೂರ, ಬಾವ ರಾಜಾರಾಂ. ರೇಷ್ಮಾ ಇವರ ಅರ್ಧಾಂಗಿ.


ಆರಂಭದಲ್ಲೇ ಹೇಳಿದಂತೆ ಕಾಡಿನ ಮಧ್ಯೆ ಇವರ ಮನೆ. ಬಸ್ ಗೆ ಬರಬೇಕು ಅಂದ್ರೆ ನಾಲ್ಕೈದು ಕಿಮೀ ನಡೆದುಕೊಂಡು ಬರ್ಬೇಕು. ಹುಟ್ಟೂರುಕುಚ್ಚಲು ಜನಗಲ್  ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಯಿಂದ 5ನೇ ತರಗತಿಯವರೆಗೆ ಓದಿದ ಮಾಲ್ತೇಶ್ 6 ಮತ್ತು 7ನೇ ತರಗತಿಯನ್ನು ತೀರ್ಥಹಳ್ಳಿಯ ಸೆಂಟರ್ ಮೇರಿಸ್ ಶಾಲೆಯಲ್ಲಿ, ಪ್ರೌಢಶಿಕ್ಷಣವನ್ನು ತೀರ್ಥಹಳ್ಳಿಯ ಸಹ್ಯಾದ್ರಿ ಶಾಲೆಯಲ್ಲಿ ಮಾಡಿದ್ರು. ಅದಾದ ಬಳಿಕ ಪಿಯುಸಿ ಮತ್ತು ಬಿಬಿಎಂ ಪದವಿ ವ್ಯಾಸಂಗ ಮಂಗಳೂರಿನ ಸೆಂಟ್ ಅಲೋಷಿಯಸ್‍ನಲ್ಲಿ ಮುಗಿಸಿದ್ರು.


ಪದವಿ ಮುಗಿಯುತ್ತಿದ್ದಂತೆ ವಾಪಸ್ಸು ಊರಿಗೆ ಬಂದ್ರು. ಅಪ್ಪ ಮಾಡಿಟ್ಟಿರುವ ಜಮೀನಿನ ಜೊತೆಗೆ ನಾನೂ ಏನಾದ್ರು ಒಂದಿಷ್ಟು ಮಾಡ್ಬೇಕು ಅಂದ ನಿರ್ಧರಿಸಿದ್ರು. ಸ್ವಲ್ಪ ಜಮೀನು ಖರೀದಿ ಮಾಡ್ಬೇಕು ಅಂತ ಪ್ಲಾನ್ ಮಾಡಿದ್ರು, ಆದ್ರೆ, ಇಷ್ಟುಬೇಗ ಇವೆಲ್ಲಾ ಬೇಡ ಅಂತ ಅಪ್ಪ-ಅಮ್ಮ. ಮಾಲ್ತೇಶ್ ಎಷ್ಟೇ ಹಠ ಹಿಡಿದ್ರು, ಅಪ್ಪ- ಅಮ್ಮಮಾತ್ರ, ಸದ್ಯಕ್ಕೆ ಬೇಡ, ಮುಂದೆ ಮಾಡಬಹುದು. ಹೇಗಿದ್ರು, ಓದಿದ್ಯಾ, ಸ್ವಲ್ಪ ಹೊರಗಡೆ ಪ್ರಪಂಚ ನೋಡ್ಕೊಂಡು ಬಾ ಅಂದ್ರು. ಅಪ್ಪ-ಅಮ್ಮನ ಜೊತೆ ವಾದ ಮಾಡಿ, ಹಠಹಿಡಿದು, ಜಗಳ ಮಾಡಿ ಗೆಲ್ಲೋಕೆ ಆಗದೇ ಕೊನೆಗೂಂದು ದಿನ ರಾತ್ರೋ ರಾತ್ರಿ ಬೆಂಗಳೂರು ಬಸ್ ಹತ್ತಿದ್ರು. ಒಂದಿಷ್ಟು ದಿನ ಕೆಲಸಕ್ಕೆ ಅಲೆದ್ರು. ಆದಿತ್ಯಾ ಬಿರ್ಲಾದಲ್ಲಿ ಆಡಿಟಿಂಗ್ ಮ್ಯಾನೇಜರ್ ಆಗಿ ಕೆಲಸ ಸಿಕ್ತು. ಆದ್ರೆ, ಎಲ್ಲೆಲ್ಲೋ, ಬೇರೆ ಯಾರಿಗಾಗಿಯೋ ಕೆಲಸ ಮಾಡೋಕ್ಕಿಂತ ನಮ್ಮವರಿಗಾಗಿ ಕೆಲಸ ಮಾಡ್ಬೇಕು…! ಜನಸಾಮಾನ್ಯರಿಗೆ ಒಂದಿಷ್ಟು ಒಳ್ಳೆದನ್ನು ಮಾಡೋ ಕೆಲಸ ನನ್ನಿಂದಾಗಬೇಕು ಅಂತ ಯೋಚ್ನೆ ಮಾಡ್ತಿದ್ರು.


ಹೀಗಿರುವಾಗ ಚೇತನ್ ಹರೀಶ್ ಅವರಿಂದ ಕಸ್ತೂರಿ ಚಾನಲ್‍ಗೆ ಹೋಗಬಹುದು, ಹೊಸಬರನ್ನು ತಗೋಳ್ತಾ ಇದ್ದಾರೆ ಎಂಬ ಸಲಹೆ ಬಂತು. ಮಾಧ್ಯಮದ ಗಾಳಿಗಂಧವೂ ಗೊತ್ತಿರದ ಮಾಲ್ತೇಶ್ ಕಸ್ತೂರಿಗೆ ಆಯ್ಕೆಯಾಗಿಯೇ ಬಿಟ್ಟರು. ಮಾಧ್ಯಮದಲ್ಲಿ ರಿಪೋರ್ಟಿಂಗ್‍ನಲ್ಲಿ ಸಿಕ್ಕ ಅನುಭವ ಎಲ್ಲೂ ಸಿಗಲ್ಲ. ಜನರ ಕಷ್ಟಗಳಿಗೆ ಹೆಚ್ಚಾಗಿ ಸ್ಪಂದಿಸೋಕೆ ಆಗೋದು ವರದಿಗಾರನಾದಾಗ ಮಾತ್ರ. ಅಷ್ಟೇ ಅಲ್ಲದೆ ಫೀಲ್ಡ್ ಎಕ್ಸ್‍ಪಿರಿಯನ್ಸ್ ಗಿಂತ ದೊಡ್ಡದು ಬೇರಾವುದೂ ಇಲ್ಲ ಎಂದು ಮಾಲ್ತೇಶ್ ರಿಪೋರ್ಟರ್ ಆದ್ರು. ಇಷ್ಟದ ವರದಿಗಾರಿಕೆ ನಡುವೆ ಆಗಾಗ ನಿರೂಪಣೆ ಮಾಡುವುದು ಅನಿವಾರ್ಯ ಆಗಿತ್ತು. ವರದಿಗಾರಿಕೆ, ನಿರೂಪಣೆ ಎರಡನ್ನೂ ಕಲಿಯುತ್ತಾ, ನಿಭಾಯಿಸುತ್ತಾ ಬೆಳೆದರು ಮಾಲ್ತೇಶ್.


ಅಂದು ಕಸ್ತೂರಿಯಲ್ಲಿದ್ದ ಗಜಾನನ ಹೆಗಡೆಯವರು ಮಾಲ್ತೇಶ್ ಅವರ ಮಾಧ್ಯಮಗುರುಗಳಾದ್ರು. ತಪ್ಪುಗಳನ್ನು ತಿದ್ದಿದ್ರು. ದಾರಿ ತೋರಿಸಿದ್ದು ಚೇತನ ಹರೀಶ್, ಗಾಡ್ ಫಾದರ್ ಗಜಾನನ ಹೆಗಡೆ ಅಂತ ಹೇಳಿಕೊಳ್ಳುತ್ತಾರೆ ಮಾಲ್ತೇಶ್. 2011ರಿಂದ 2012 ರವರೆಗೆ ಕಸ್ತೂರಿಯಲ್ಲಿ ಕೆಲಸ ಮಾಡಿದ ಮಾಲ್ತೇಶ್ 2012ರಲ್ಲಿ ರಾಜ್ ನ್ಯೂಸ್ ಸೇರಿದ್ರು. ಅಲ್ಲಿ ಹಮೀದ್ ಪಾಳ್ಯ ಅವರಿಂದ ಉತ್ತಮ ಮಾರ್ಗದರ್ಶನ ಪಡೆದ್ರು. ಅಲ್ಲಿಯೂ ರೀಪೋರ್ಟರ್ ಹಾಗೂ ಆ್ಯಂಕರ್ ಆಗಿ ಕೆಲಸ ಮಾಡಿದ್ರು. ಮಾಧ್ಯಮದಲ್ಲಿ ಕೆಲಸ ಮಾಡಿದ್ದಕ್ಕೆ ಒಂದೊಳ್ಳೆ ಅರ್ಥಬರೋದು ಟಿವಿ9ನಲ್ಲಿ ಕೆಲಸ ಮಾಡಿದಾಗ ಅನ್ನೋದು ಎಷ್ಟೋ ಜನರಂತೆ ಮಾಲ್ತೇಶ್ ಅವರ ನಂಬಿಕೆ ಕೂಡ. ಟಿವಿ9ನಲ್ಲಿ ಕೆಲಸ ಮಾಡೋ ಕನಸು ನನಸಾಗಲು ತುಂಬಾ ಕಾಲ ಬೇಕಾಗಲಿಲ್ಲ. 2013ರ ಕೊನೆಯಲ್ಲಿ ಟಿವಿ9 ಬಳಗ ಸೇರುವ ಅವಕಾಶ ಮಾಲ್ತೇಶ್ ಅವರದ್ದಾಯಿತು.


ಅಲ್ಲಿಂದ ಇಲ್ಲಿಯವರೆಗೂ ಟಿವಿ9ನಲ್ಲಿ ರಿಪೋರ್ಟರ್ ಆಗಿ, ನಿರೂಪಕರಾಗಿ ಸೇವೆಸಲ್ಲಿಸ್ತಿದ್ದಾರೆ. ಮಾಲ್ತೇಶ್ ಟಿವಿ9ಗೆ ಹೋದ ಆರಂಭದಲ್ಲಿ ನನಗೆ ರಿರ್ಪೋಟಿಂಗೇ ಇಷ್ಟ ಅಂತ ಹೇಳಿದ್ದರು. ನಿರೂಪಣೆ ಮಾಡು ಅಂದ್ರು ಅದಕ್ಕೆ ಒಪ್ಪಿರಲಿಲ್ಲ. ಪೂರ್ಣ ಪ್ರಮಾಣದ ವರದಿಗಾರನಾಗಬೇಕು ಎಂಬುದೆ ಅವರ ಹೆಬ್ಬಯಕೆ ಆಗಿತ್ತು. ಅಂದು ಟಿವಿ9ನಲ್ಲಿದ್ದ ರವಿಕುಮಾರ್ ಹಾಗೂ ಮಾರುತಿ ಅವರು ಆ್ಯಂಕರ್ ಆಗಲು ಪ್ರೀತಿಯಿಂದ ಒತ್ತಾಯಿಸಿದ್ರು, ಪ್ರೋತ್ಸಾಹ ನೀಡಿದ್ರು.


ನಿರೂಪಣೆ ಪ್ರಾಕ್ಟಿಸ್ ಮಾಡು ಅಂದ್ರೂ ಮಾಲ್ತೇಶ್ ಮಾಡ್ತಿರ್ಲಿಲ್ಲ…! ಒಂದು ದಿನ ಇದ್ದಕ್ಕಿದ್ದಂತೆ ಈಗಲೇ ನಿರೂಪಣೆಗೆ ಹೋಗು ಅಂತ ಕಳಿಸಿದ್ರಂತೆ…! ಕಸ್ತೂರಿ, ರಾಜ್‍ನಲ್ಲಿ ಮಾಡಿದ್ದ ನಿರೂಪಣೆ ಅನುಭವದ ಧೈರ್ಯದಲ್ಲೇ ಕ್ಯಾಮೆರ ಮುಂದೆ ಹೋದ್ರಂತೆ ಮಾಲ್ತೇಶ್…! ಕಾರ್ಯಕ್ರಮ ಮುಗಿಸಿ ಸ್ಟೂಡಿಯೋದಿಂದ ಹೊರಬಂದಾಗ ಸಿಕ್ಕಾಪಟ್ಟೆ ಫೋನ್ ಕರೆಗಳು ಬಂದಾಗ ತುಂಬಾ ಖುಷಿ ಆಯ್ತಂತೆ. ಆಮೇಲಿಂದ ರಿಪೋರ್ಟಿಂಗ್, ನಿರೂಪಣೆ ಎರಡನ್ನೂ ಮಾಡಿಕೊಂಡು ಬರುತ್ತಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ಫೀಲ್ಡ್ ಗೆ ಹೋಗಿ ಸುದ್ದಿ ಮಾಡ್ಕೊಂಡು ಬರೋದು ಮಾಲ್ತೇಶ್ ಅವರಿಗೆ ತುಂಬಾ ಇಷ್ಟ. ಟಿವಿ9ನ ಹತ್ತನೇ ವರ್ಷದ ಆನಿವರ್ಸರಿಯ ಎರಡು ದಿನದ ವೇದಿಕೆ ಕಾರ್ಯಕ್ರಮ ನಡೆಸಿಕೊಡುವ ಅವಕಾಶ ಕೂಡ ಇವರಿಗೆ ಸಿಕ್ಕಿತ್ತು. ಇದು ಇವರ ಮರೆಯಲಾಗದ ಕ್ಷಣಗಳಲ್ಲೊಂದು.


‘‘ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡೋಕೆ ತಾಳ್ಮೆ ಮುಖ್ಯ. ದನಿ ಇಲ್ಲದವರ ದನಿಯಾಗಿ ಕೆಲಸ ಮಾಡಬೇಕು. ವಾಚ್ ನೋಡುವ ಸಂಸ್ಕೃತಿ ಇರಬಾರದು. 24* 7 ಪತ್ರಕರ್ತರಾಗಿಯೇ ಇರಬೇಕು. ಪ್ಯಾಷನ್ ಇದ್ರೆ ಮಾತ್ರ ಮೀಡಿಯಕ್ಕಾ ಬರಬೇಕು. ಬರೀ ಕೆಲಸ ಅಂತ ಬರಬಾರದು. ಸ್ಕ್ರೀನ್ ಮೇಲಿದ್ದರಷ್ಟೇ ಬೆಲೆ ಎನ್ನೋದು ತಪ್ಪುಕಲ್ಪನೆ. ಇಲ್ಲಿ ಏನಾದರೂ ಮಾಡಬೇಕೆಂಬ ತುಡಿತ, ಸಾಧಿಸುವ ಛಲ ಇರಬೇಕು’’ ಎನ್ನುತ್ತಾರೆ ನಿರೂಪಕ ರೈತ ಮಾಲ್ತೇಶ್.

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

10 ನವೆಂಬರ್ 2017 : ಈಶ್ವರ್ ದೈತೋಟ

11 ನವೆಂಬರ್ 2017 : ಭಾವನ

12  ನವೆಂಬರ್ 2017 : ಜಯಶ್ರೀ ಶೇಖರ್

13 ನವೆಂಬರ್ 2017 : ಶೇಷಕೃಷ್ಣ

14 ನವೆಂಬರ್ 2017 : ಶ್ರೀಧರ್ ಶರ್ಮಾ

15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

16 ನವೆಂಬರ್ 2017 : ಅರವಿಂದ ಸೇತುರಾವ್

17 ನವೆಂಬರ್ 2017 : ಲಿಖಿತಶ್ರೀ

18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

19 ನವೆಂಬರ್ 2017 : ಅಪರ್ಣಾ

20 ನವೆಂಬರ್ 2017 :  ಅಮರ್ ಪ್ರಸಾದ್

21 ನವೆಂಬರ್ 2017 :   ಸೌಮ್ಯ ಮಳಲಿ

22 ನವೆಂಬರ್ 2017 :  ಅರುಣ್ ಬಡಿಗೇರ್

23ನವೆಂಬರ್ 2017 :  ರಾಘವ ಸೂರ್ಯ

24ನವೆಂಬರ್ 2017 :  ಶ್ರೀಲಕ್ಷ್ಮಿ

25ನವೆಂಬರ್ 2017 :  ಶಿಲ್ಪ ಕಿರಣ್

26ನವೆಂಬರ್ 2017 :  ಸಮೀವುಲ್ಲಾ

27ನವೆಂಬರ್ 2017 :  ರಮಾಕಾಂತ್ ಆರ್ಯನ್

28ನವೆಂಬರ್ 2017 :  ಮಾಲ್ತೇಶ್

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article