No menu items!
23.4 C
Munich
Saturday, May 2, 2026

ನನ್ನ ಅಮ್ಮ ಹಾಗೂ ನನ್ನ ತಂದೆ ಆತ್ಮ ಸಂಗಾತಿಗಳು, ಜನುಮದ ಜೋಡಿ ಇದ್ದಹಾಗೆ….

Must read

ನನ್ನ ಅಮ್ಮ ಹಾಗೂ ನಮ್ಮ ತಂದೆ ಆತ್ಮ ಸಂಗಾತಿಗಳು, ಜನುಮದ ಜೋಡಿ ಇದ್ದಹಾಗೆ. ಇವರಿಬ್ಬರೂ ಪ್ರೀತಿಸಿ ಮದುವೆಯಾದದ್ದು. ಅದೂ ಆಗಿನ ಕಾಲದಲ್ಲೇ ಅಂತರ್‍ಜಾತಿ ವಿವಾಹ. ಮೊದಮೊದಲಿಗೆ ಇವರಿಬ್ಬರೂ ಭೇಟಿಯಾದದ್ದು ಒಂದು ಕಿರಾಣಿ ಅಂಗಡಿಯಲ್ಲಿ. ಆ ಅಂಗಡಿಯಲ್ಲೇ ಕೆಲ್ಸ ಮಾಡ್ತಾ ಇದ್ರಂತೆ ಅಪ್ಪ. ಒಂದು ದಿನ ನನ್ನ ತಾಯಿ ಅವರ ಸ್ನೇಹಿತೆಯ ಜೊತೆ ಆ ಅಂಗಡಿಗೆ ಒಮ್ಮೇ ಭೇಟಿ ಕೊಟ್ಟಾಗ ಅಪ್ಪಂಗೆ ಒಂದೇ ಸೈಟಲ್ಲಿ ಲವ್ ಆಗ್ಬಿಟ್ಟಿದೆ. ಅಮ್ಮನನ್ನು ಕಂಡ ಕೂಡಲೇ ಒಂದು ಪತ್ರದಲ್ಲಿ ಲವ್ ಲೆಟರ್ ಬರಿಯೋಕೆ ಶುರು ಮಾಡೇ ಬಿಟ್ರಂತೆ. ಆಗೆಲ್ಲಾ ಈಗಿನಷ್ಟು ತಂತ್ರಜ್ಞಾನ ಮುಂದುವರೆದಿಲ್ಲದ ಕಾರಣ ಏನೇ ಅಭಿಪ್ರಾಯ ತಿಳಿಸುವುದಾದರೂ ಅದು ಪತ್ರದ ಮೂಲಕವೇ.. ತಾಯಿ ಮತ್ತೊಮ್ಮೆ ಅಂಗಡಿಗೆ ಬಂದಾಗ ಅಪ್ಪ ತನ್ನ ಪ್ರೀತಿಯ ನಿವೇಧನೆಯನ್ನು ಪತ್ರದ ಮೂಲಕ ಬರೆದು ಕೊಟ್ಟಿದ್ದರು. ಅಲ್ಲಿಂದ ನೋಡ್ರಿ ಅವರಿಬ್ಬರ ಪ್ರೀತಿ ಸ್ಟಾರ್ಟ್ ಆಗಿದ್ದು. ವಿಚಿತ್ರ ಸಂಗತಿ ಏನಪ್ಪಾ ಅಂದ್ರೆ ಅಪ್ಪಾ ಮತ್ತು ಅಮ್ಮ ಅವರ ಮನೆ ಎದುರುಬದುರಲ್ಲೇ ಇತ್ತು ನೋಡಿ. ಅಪ್ಪ ಒಂದು ಶಿಳ್ಳೆ ಹೊಡುದ್ರೆ ಸಾಕಿತ್ತಂತೆ ಅಮ್ಮ ಥಟ್ ಅಂತ ಪ್ರತ್ಯಕ್ಷಳಾಗಿಬಿಡ್ತಿದ್ಲು. ಅಷ್ಟೇ ಅಲ್ಲ ಅವರಿಬ್ಬರ ಪಿಸು ಪಿಸು ಮಾತು ಮನೆಯ ಕಿಟಕಿಯಿಂದ ಸಂಚರಿಸುತ್ತಾ ಇತ್ತು. ಅಪ್ಪಾ ಏನಾದ್ರು ಕೆಲಸಕ್ಕೆ ಓಗಿದ್ದಾಗಲೆಲ್ಲ ಅಮ್ಮ ಎಸ್.ಟಿ.ಡಿ ಬೂತ್‍ನಿಂದ ಕಾಲ್ ಮಾಡಿ ಮಾತಾಡ್ತಾ ಇದ್ಲು. ಅಷ್ಟೊಂದು ಪ್ರೀತಿ ಅಪ್ಪನ ಮೇಲೆ ತೋರುಸ್ತಿದ್ಲು. ಕೊನೆಗೆ ಎಲ್ಲರ ವಿರೋಧದ ನಡುವೆಯೇ ಅಂತರ್‍ಜಾತಿ ವಿವಾಹವಾದರು. ಅಷ್ಟೇ ಅಲ್ಲ ಎಲ್ಲರೂ ಹೊಗಳುವಂತೆ ಸಂಸಾರ ಸಾಗುಸ್ತಾನು ಇದ್ರು. ಒಂದು ಘಟ್ಟದಲ್ಲಿ ತಂದೆ ತನ್ನ ಕೆಲಸವನ್ನು ಕಳೆದುಕೊಂಡಾಗ ಅಮ್ಮ ಕುಟುಂಬದ ಭಾರವನ್ನು ಹೊತ್ತಳು. ಅಪ್ಪ ನಮ್ಮನ್ನೆಲ್ಲರ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು. ಒಂದೇ ಮಾತಲ್ಲಿ ಹೇಳುವುದಾದರೆ ಇಬ್ಬರೂ ತಮ್ಮ ಜೀವನದ ತಕ್ಕಡಿಯನ್ನು ಸಮಾನವಾಗಿ ತೂಗುತ್ತಿದ್ದರು ಅನ್ಬೋದು..
ಅಪ್ಪನಿಗಿದ್ದದ್ದು ಒಂದೇ ಚಟ ಅದು ಧೂಮಪಾನ. ಸುಮಾರು 30 ವರ್ಷಗಳಿಂದ ಅಪ್ಪ ಈ ಚಟಕ್ಕೆ ಬಿದ್ದು ಹೊರಬರಲಾರದೇ ಸಾಕಷ್ಟು ಬಾರಿ ಸೋತು ಹೋಗಿದ್ದರು. ಕೊನೆಗೆ ಅದರಿಂದಲೇ ಅವರು ಇಹಲೋಕ ಪ್ರಯಾಣ ಮುಗಿಸಿದರು. ಈ ಘಟನೆ ನಮ್ಮಿಬ್ಬರಿಗೆ ಇನ್ನಿಲ್ಲದ ನೋವು ಉಂಟುಮಾಡಿತ್ತು. ಆದ್ರೆ ಅಪ್ಪ ಸತ್ತಾಗ ನಾನು ಒಂದು ಹನಿ ಕಣ್ಣೀರನ್ನೂ ಹಾಕಿರಲಿಲ್ಲ. ಕಾರಣವಿಷ್ಟೇ ಅಂದು ಅಪ್ಪ ನಮ್ಮನ್ನೆಲ್ಲಾ ಅಗಲಿದ್ದಾರೆ ಎಂಬುದು ನನಗೆ ನಂಬಲೂ ಅಸಾಧ್ಯವಾಗಿತ್ತು. ಮತ್ತೊಂದೆಡೆ ಎಲ್ಲಿ ನಾ ಕಣ್ಣೀರಾಕಿದರೆ ಅಮ್ಮ ಸಂಪೂರ್ಣವಾಗಿ ಕುಗ್ಗಿ ಹೋಗುತ್ತಾಳೇನೋ ಎಂಬ ಭಯ ನನ್ನಲ್ಲಿ ಆವರಿಸತೊಡಗಿತ್ತು. ಆದ್ದರಿಂದ ಅಮ್ಮನಿಗಾಗಿ ನಾನು ಮನಸ್ಸು ಗಟ್ಟಿಮಾಡಿಕೊಳ್ಳುವ ಸ್ಥಿತಿ ಅಂದು ನನಗಿತ್ತು. ಆದರೂ ಅಮ್ಮನ ಅರ್ಧ ಜೀವ, ಶಕ್ತಿ ಎಲ್ಲವೂ ಕುಂದು ಹೋಗಿತ್ತು. ಅಪ್ಪನಿಲ್ಲದೇ ಅಮ್ಮನ ಜೀವ ಪ್ರತಿ ದಿನವೂ ಕೊರಗಿ ಕೊರಗಿ ಸೊರಗಿ ಹೋಗಿದ್ದಳು. ಅಮ್ಮ ಅಪ್ಪನಿಗೆ ಎಷ್ಟರ ಮಟ್ಟಿಗೆ ಪ್ರೀತಿಸುತ್ತಿದ್ದಳೆಂದರೆ ಅಪ್ಪ ಹೋದ ಬಳಿಕವೂ ಅವರ ಹೆಸರಿನಲ್ಲಿ ಪತ್ರವನ್ನು ಬರೆಯುತ್ತಿದ್ದಳು. ಇದು ಅವರಿಬ್ಬರ ಭಾವನಾತ್ಮಕ ಸಂಬಂಧ ಹೇಗಿತ್ತು ಎಂಬುದನ್ನು ತಿಳಿಸುತ್ತದೆ. ಅಪ್ಪನ ಬಗ್ಗೆ ಮೂರೊತ್ತು ಅವರ ಚಿಂತೆಯಲ್ಲಿಯೇ ಮಗ್ನಳಾಗಿರುತ್ತಿದ್ದಳು. ಆದರೆ ಕಳೆದ ಐದು ತಿಂಗಳಿಂದ ಏಕೋ ಗೊತ್ತಿಲ್ಲ ಅಮ್ಮ ಅಪ್ಪನ ಕುರಿತು ಮಾತನಾಡುವುದನ್ನೇ ಬಿಟ್ಟಿದ್ದಾಳೆ. ಅಪ್ಪನಿಲ್ಲದೇ ಅಮ್ಮ ಒಂಟಿಯಾಗಿ ಧೈರ್ಯದಿಂದ ಬದುಕು ಕಟ್ಟಿಕೊಳ್ಳುತ್ತಿದ್ದಾಳೆ.
ಸಮಯ ಸಿಕ್ಕಾಗಲೆಲ್ಲಾ ನಾನು ಅಮ್ಮ ಒಟ್ಟಿಗೆ ಇರ್ತಿದ್ವಿ. ಜೊತೆಯಲ್ಲೇ ಕಾಲ ಕಳಿತಾ ಇದ್ವಿ. ಅಮ್ಮ ನನಗಾಗಿ ತುಂಬಾ ಕಷ್ಟ ಪಟ್ಟಿದ್ದಾಳೆ, ಹಗಲಿರುಳು ದುಡಿದು ನನಗೆ ತನ್ನ ಎಲ್ಲಾ ಸರ್ವಸ್ವವನ್ನೇ ತ್ಯಾಗ ಮಾಡಿದ್ದಾಳೆ. ನಾನೆಂದೂ ಕಲ್ಪನೆಯೂ ಕೂಡ ಮಾಡಿರಲಿಲ್ಲ ನನಗೆ ಒಂದೊಳ್ಳೆ ಅಮ್ಮನಿಲ್ಲವೆಂದು. ಅಂತಹ ತ್ಯಾಗಮಯಿ ನನ್ನ ತಾಯಿ.
ಇನ್ನೊಂದಡೆ ನಾನು ವಿದ್ಯೆಯನ್ನು ಪಡೆಯುತ್ತಿದ್ದ ಶಾಲೆಯಲ್ಲಿ ಕೆಲವು ಕೆಟ್ಟ ಹುಳುಗಳನ್ನು ನಾನು ನೋಡಿದ್ದೇನೆ. ಶಾಲೆಯಲ್ಲಿ ನಾನು ಕೆಲವೇ ಕೆಲವು ಹುಡುಗರೊಂದಿಗೆ ಮಾತನಾಡಿಸುತ್ತಿದ್ದೆ. ಕಾರಣ ಉಳಿದ ಹುಡುಗರಲ್ಲಿ ನನಗೆ ಬೆಸ್ಟ್ ಅನ್ಸಿದ್ದು ಇವರುಗಳು ಮಾತ್ರ.. ಆದರೆ ನನ್ನ ಮೇಲೆ ಅದೇ ಶಾಲೆಯ ಹುಡುಗಿಯರು ತಪ್ಪಾಗಿ ಮಾತನಾಡುತ್ತಿದ್ರು. ನನ್ನನ್ನು ಬೇರೆಯವರೊಡನೆ ಹೋಲಿಕೆ ಮಾಡಿ ಹೀಯಾಳಿಸುತ್ತಿದ್ದರು. ಅವುಗಳನ್ನೆಲ್ಲಾ ಸಹಿಸಿಕೊಂಡಿದ್ದೆ ವಿನಃ ಅವರೆದುರು ಎಂದಿಗೂ ಮರು ಉತ್ತರ ನೀಡಿರಲಿಲ್ಲ. ಇಂದು ಹೀಯಾಳಿಸಿದವರು ಮುಂದೆ ಅವರ ತಪ್ಪಿನ ಅರಿವಾಗುತ್ತದೆ ಎಂಬ ನಂಬಿಕೆ ನನ್ನಲ್ಲಿತ್ತು.
ಇಂತಹ ಟೀಕಾಸ್ತ್ರಗಳಿಗೆ ಬಲಿಯಾಗದೇ ತಾನಾಯಿತು ತನ್ನ ಕೆಲಸವಾಯಿತು ಎಂದಿರುತ್ತಿದ್ದೆ. ಫೋಟೋಗ್ರಫಿ ನನ್ನ ಹವ್ಯಾಸವಾದ್ದರಿಂದ ಕಡೆಯವರೆಗೂ ನನ್ನ ಜೊತೆಗಾರನಾಗಿ ಬಂದದ್ದೇ ಈ ಛಾಯಾಗ್ರಹಣ. ಆದರೆ ತಾಯಿಯ ಮೇಲಿನ ಗಮನ ಎಂದಿಗೂ ಮರೆತಿರಲಿಲ್ಲ. ನಾನು ಎಷ್ಟೇ ಕೆಲಸದ ಒತ್ತಡದಲ್ಲಿದ್ದರೂ ಅಮ್ಮನ ಮೇಲಿನ ಗಮನ ಮಾತ್ರ ಅಚ್ಚಳಿಯದೇ ಉಳಿದಿತ್ತು.
ನನಗೆ ಅಂದು 17ನೇ ಹುಟ್ಟುಹಬ್ಬ. ನನ್ನ ಅಮ್ಮ ಹುಟ್ಟುಹಬ್ಬದ ಕೊಡುಗೆಯಾಗಿ ಒಂದು ಸ್ಕೂಟಿಯನ್ನು ಕೊಡಿಸಿದಳು. ನನಗೆ ಇನ್ನಿಲ್ಲದ ಆನಂದ. ಅಮ್ಮನ ಈ ಉಡುಗೊರೆಯಿಂದ ಮಾತುಗಳೇ ಹೊರಡದೇ ಅಮ್ಮನನ್ನು ಗಟ್ಟಿಯಾಗಿ ಅಪ್ಪಿಕೊಂಡೆ. ಒಂದು ದಿನ ನಾನು ಅಮ್ಮ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿರುವಾಗ ಕಾರೊಂದು ನೇರವಾಗಿ ನಮ್ಮ ಮೇಲೆ ಹರಿದಿತ್ತು. ತುಂಬಾ ಸಮಯದ ನಂತರ ಎಚ್ಚರಗೊಂಡಾಗ ನಾನು ರಕ್ತದ ಮಡಿವಿನಲ್ಲಿ ಬಿದ್ದಿದ್ದೆ. ಇಡೀ ರಸ್ತೆಯ ತುಂಬೆಲ್ಲಾ ರಕ್ತದ ಕೋಡಿಯೇ ಹರಿದಿತ್ತು. ಅದು ನನ್ನ ರಕ್ತವಾಗಿರಲಿಲ್ಲ ನನ್ನ ತಾಯಿಯ ರಕ್ತ..! ಅಪಘಾತದಲ್ಲಿ ನನಗೆ ಅಲ್ಪ ಸ್ವಲ್ಪ ಗಾಯಗಳಾಗಿತ್ತು ಬಿಟ್ಟರೆ ಅಮ್ಮನ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಪ್ರಜ್ಞೆ ತಪ್ಪಿದ್ದ ಅಮ್ಮ ರಕ್ತದ ಮಡುವಿನಲ್ಲೇ ಬಿದ್ದಿದ್ದಳು. ಸಹಾಯಕ್ಕಾಗಿ ಅಂಗಲಾಚಿ ಬೇಡಿಕೊಂಡರೂ ಸುತ್ತಲೂ ನೆರೆದಿದ್ದ ಜನ ತಮಗ್ಯಾಕೆ ಎಂಬಂತೆ ಮೂಖರಂತೆ ನೋಡುತ್ತಿದ್ದರೆ ವಿನಃ ಯಾವೊಬ್ಬನೂ ಸಹಾಯ ಮಾಡಿರಲಿಲ್ಲ. ಕೊನೆಗೆ ಒಬ್ಬ ಪುಣ್ಯಾತ್ಮ ತನ್ನ ಕಾರಿನಲ್ಲಿ ಅಮ್ಮನನ್ನು ಆಸ್ಪತ್ರೆಗೆ ಸೇರಿಸಿದ. ಆಕೆಗೆ ತಲೆ ಸೇರಿದಂತೆ ದೇಹದ ಹಲವಾರು ಭಾಗಗಳಲ್ಲಿ ಗಂಭೀರ ಗಾಯ ಆಗಿತ್ತು. ಅಮ್ಮ ಕೊನೆಗೂ ಉಳಿಯಲಿಲ್ಲ.. ನನ್ನನ್ನು ಮೋಸ ಮಾಡಿ ತಂದೆಯ ಜೊತೆ ಹೊರಟು ಹೋದಳು… ಇತ್ತ ಕಡೆ ಅಮ್ಮನೂ ಇಲ್ಲ ಅತ್ತ ಅಪ್ಪನೂ ಇಲ್ಲ.. ಒಂಟಿಯಾದೆ.. ಜೀವನವೇ ಕಗ್ಗತ್ತಲಾಗಿ ಪರಿಣಮಿಸಿತ್ತು… ಯಾರ ಬಳಿ ಹೋಗಲೀ..? ಈ ಹದಿನೆಂಟರ ಹರೆಯದಲ್ಲಿ ನನಗೆ ಭದ್ರತೆ ಎಲ್ಲಿ ಸಿಗುತ್ತೇ..? ಎಂದೆಲ್ಲಾ ಯೋಚನೆಗಳು ಶುರುವಾದವು. ತಂದೆ ತಾಯಿ ಕಳೆದು ಕೊಂಡ ನೋವು ನನ್ನ ಶತ್ರುಗಳಿಗೂ ಬಾರದಿಲಿ ಎಂದು ಪ್ರತಿ ದಿನ ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ.. ಕೊನೆಗೆ ನನಗೆ ಆಸರೆಯಾದದ್ದು ನನ್ನ ಅಜ್ಜಿ.. ಮುಂದೆ ನನ್ನ ಅಜ್ಜಿಯ ಮನೆಯಲ್ಲಿಯೇ ಜೀವನ ಆರಂಭಿಸಿದೆ. ಅಲ್ಲಿಂದ ತಿಳಿಯಿತು ಜೀವನ ಏನೆಂದು ಅಂತ.. ನನಗಾಗಿ ಅನೇಕ ಜವಾಬ್ದಾರಿಗಳು ನನ್ನ ಹೆಗಲ ಮೇಲೆ ಕುಳಿತಿದೆ ಅವುಗಳನ್ನೆಲ್ಲಾ ಸರಿಯಾಗಿ ನಿಭಾಯಿಸುವ ಶಕ್ತಿ ಆಗಲೇ ಬಂದದ್ದು. ದಿನಸಿ ತರೋದು, ಹಣಕಾಸಿನ ವ್ಯವಹಾರ, ಅಜ್ಜಿಯ ಆರೈಕೆ.. ಎಲ್ಲವೂ ನನ್ನ ಮೇಲೆ. ಇವೆಲ್ಲಾ ಒಬ್ಬಳೇ ಮಾಡಬೇಕಾ ಎಂದು ಹಲವಾರು ಬಾರಿ ಚಿಂತಿಸಿದ್ದರೂ ನನ್ನ ಆತ್ಮ ವಿಶ್ವಾಸವನ್ನು ಮಾತ್ರ ಎಂದೂ ಬಿಟ್ಟಿರಲಿಲ್ಲ. ಆಗಲೇ ನನಗೆ ಹಣದ ನಿಜವಾದ ಬೆಲೆ ಏನು ಅಂತ ಅರ್ಥ ಆದದ್ದು.
ನಾನು ಈ ಕಥೆಯ ಮೂಲಕ ಹೇಳ ಬಯಸೋದೇನಂದ್ರೆ ಮೊದಲಿಗೆ ನಿಮ್ಮ ಇಂದಿನ ಯೋಜನೆಗಳನ್ನು ನಾಳೆಗಿರಲಿ ಎಂದು ತಳ್ಳಿ ಹಾಕಬೇಡಿ ಅಥವಾ ನಿಮ್ಮ ಪೋಷಕರ ಮೇಲೆ ಹೊರಿಸಬೇಡಿ ಯಾಕೆಂದ್ರೆ ಕೆಲವೊಮ್ಮೆ ಆ ನಾಳೆಗಳು ಕಣ್ಮರೆಯಾಗಿ ಬಿಡುತ್ತದೆ. ಕಾಲ ಮಿತಿ ತುಂಬಾ ಸಡಿಲವಾದದ್ದು ಸ್ವಲ್ಪ ಯೋಚಿಸಿ..
ಎರಡನೆಯದಾಗಿ ನಿಮಗೆ ಒಬ್ಬರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳದೇ ಅವರನ್ನು ಕೀಳಿರಿಮೆಯಿಂದ ನೋಡಬೇಡಿ. ಎಲ್ಲರೂ ಕೆಲವೊಂದರ ಜೊತೆ ಪ್ರಯಾಣ ಬೆಳೆಸುತ್ತಿರುತ್ತಾರೆ. ಅದರಲ್ಲಿಯೇ ಅವರು ಜೀವನದ ಉತ್ತುಂಗಕ್ಕೆ ಏರುತ್ತಾರೆ. ಆದ್ದರಿಂದ ನೀವು ಯಾರನ್ನಾದರು ಹೀಯಾಳಿಸುವ ಮುನ್ನ ಅವರ ವ್ಯಕ್ತಿತ್ವದ ಬಗ್ಗೆ ಗಮನವಿರಲಿ. ಸ್ವಲ್ಪ ಸಹಾನುಭೂತಿ ತೋರಿ ಮಾನವರಾಗಿ….

my-love

  • ಪ್ರಮೋದ್ ಲಕ್ಕವಳ್ಳಿ

source : ಹ್ಯೂಮನ್ಸ್ ಆಫ್ ಬಾಂಬೆ

POPULAR  STORIES :

ಓಣಂ ಹಬ್ಬಕ್ಕೆ ಆನ್‍ಲೈನ್‍ನಲ್ಲಿ ಮದ್ಯಪಾನ ಮಾರಾಟ..!

ಸಾವಿನ ಮನೆಗೆ ಬಾರ್ ಗರ್ಲ್ಸ್ ರನ್ನು ಕರುಸ್ಕೊಳ್ತಾರೆ…!

ಇಂದು ವಿಶ್ವ ಫೋಟೋಗ್ರಫಿ ದಿನ… ನೀವು ನೋಡಿ ಕೆಲವು ಅದ್ಭುತ ಚಿತ್ರಗಳು..!

ಆಸ್ಪತ್ರೆಯಲ್ಲಿ ಜನ ಕ್ಯೂ ನಲ್ಲಿ ನಿಂತಿದ್ದರೂ ಸರ್ಕಾರಿ ನೌಕರ ಏನ್ ಮಾಡ್ತಾ ಇದ್ದ..? ಈ ವಿಡಿಯೋ ನೋಡಿ.

ವಿಶ್ವದ ಅತೀ ಹಿರಿಯ ವ್ಯಾಘ್ರ – ಮಚ್ಲಿ ದಿ ಕ್ವೀನ್ ಆಫ್ ಟೈಗರ್ಸ್ ಇನ್ನಿಲ್ಲ..!

ಜೋಗ ಜಲಪಾತದ ಅಭಿವೃದ್ಧಿ ಹೊಣೆ ಬಿ.ಆರ್.ಶೆಟ್ಟಿ ಒಡೆತನದ ಬಿ.ಆರ್.ಎಸ್.ವೆಂಚರ್ಸ್‍ಗೆ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article