No menu items!
10.8 C
Munich
Wednesday, April 29, 2026

ಆಗ ಸಿನಿಮಾ ಜರ್ನಲಿಸ್ಟ್ ಈಗ ಕಲಾವಿದ…!

Must read

ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿ ನಂತರದ ದಿನಗಳಲ್ಲಿ ಸಿನಿಮಾ, ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿರುವ ಅನೇಕರು ನಮ್ಮ ನಡುವೆ ಇದ್ದಾರೆ. ಅಂತವರ ಸಾಲಿಗೆ ಈಗ ಹೊಸ ಸೇರ್ಪಡೆ ತೀರ್ಥಹಳ್ಳಿ ಹುಡ್ಗ ಸಂದೀಪ್ ಕುಮಾರ್…!


ಸಿನಿಮಾ ಜರ್ನಲಿಸ್ಟ್ ಆಗಿ ಬೆಳ್ಳಿತೆರೆಯ ಸುದ್ದಿಗಳನ್ನು, ವಿಶೇಷ ಕಾರ್ಯಕ್ರಮಗಳನ್ನು ಮಾಡ್ತಿದ್ದ ಸಂದೀಪ್ ಈಗ ಸಿನಿ ಜರ್ನಿಯನ್ನು ಆರಂಭಿಸಲು ಉತ್ಸುಕರಾಗಿದ್ದಾರೆ…! ಇದು ಸಂದೀಪ್ ಸಿನಿ ಅಡ್ಡ… ಸಿನಿಮಾವನ್ನು ಸೀರಿಯಸ್ ಆಗಿ ತೆಗೆದುಕೊಂಡಿರೋ ಸಂದೀಪ್ ಸಿಕ್ಕಾಪಟ್ಟೆ ತಯಾರಿ ನಡೆಸ್ತಾ ಇದ್ದಾರೆ…


ತೀರ್ಥಹಳ್ಳಿಯ ರೈತ ಕುಟುಂಬದಲ್ಲಿ ಹುಟ್ಟಿದವ್ರು ಸಂದೀಪ್. ಅಪ್ಪ ಗುಂಡಪ್ಪ ಗೌಡ್ರು, ಅಮ್ಮ ಸರೋಜ, ಪತ್ನಿ ರಶ್ಮಿ, ಅಕ್ಕ ರಂಜಿತಾ, ಬಾವ ಸುರೇಶ್, ಅಕ್ಕನ ಪುಟ್ಟ ಮಗಳು ಲಕ್ಷ್ಯ. ತೀರ್ಥಹಳ್ಳಿಯ ಸೆಂಟ್ ಮೇರಿಸ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಜೂನಿಯರ್ ಕಾಲೇಜಿನಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿದ ಸಂದೀಪ್ ಮುಂದಿನ ಪಯಣ ಸಾಗಿದ್ದು ರಾಜಧಾನಿ ಬೆಂಗಳೂರತ್ತ.


ಮನೆಯಲ್ಲಿ ಕಷ್ಟ ಇತ್ತು. ಆದ್ದರಿಂದ ಉದ್ಯೋಗವನ್ನರಿಸಿ ಬೆಂಗಳೂರಿಗೆ ಬಂದ್ರು. ಅಲ್ಲಿ-ಇಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಲಾರಂಭಿಸಿದ್ರು. ಆದ್ರೆ, ಅದರಿಂದ ತೃಪ್ತಿ ಸಿಗಲಿಲ್ಲ. ನಾನು ಏನಾದ್ರು ಮಾಡಿ ಓದು ಮುಂದುವರೆಸಬೇಕು ಅನ್ಕೊಂಡ್ರು. ಸಂಜೆ ಕಾಲೇಜಿಗೆ ಹೋಗಲಾರಂಭಿಸಿದ್ರು. ಹೀಗೆ ಬೆಳಗ್ಗೆ ಕೆಲಸ, ಸಂಜೆ ಓದು…ಹೀಗೆ ಪಿಯುಸಿ, ಬಿಕಾಂ ಪದವಿಯನ್ನೂ ಮುಗಿಸಿದ್ರು.


ನಂತರ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ರು. ಒಂದು ದಿನ ಟಿವಿ9ನ ಟೆಕ್ನಿಕಲ್ ಹೆಡ್ ಶ್ರೀಕಾಂತ್ ಅವರ ಪರಿಚಯವಾಗುತ್ತೆ. ಮಾಧ್ಯಮ ಕ್ಷೇತ್ರದ ಬಗ್ಗೆ ಆಸಕ್ತಿಯಿದ್ದ ಸಂದೀಪ್, ಟಿವಿ9ನಲ್ಲಿ ನನಗೊಂದು ಅವಕಾಶ ಸಿಗಬಹುದೇ ಅಂತ ಕೇಳ್ತಾರೆ. ಸರಿ, ಟ್ರೈಮಾಡು ಎಂದು ಶ್ರೀಕಾಂತ್ ಸಂದೀಪ್ ಗೆ ಹೇಳ್ತಾರೆ. ಟಿವಿ9ನಲ್ಲಿ ನಡೆಸಿದ ಎಲ್ಲಾ ಪರೀಕ್ಷೆಗಳಲ್ಲೂ ಪಾಸ್ ಆದ ಸಂದೀಪ್ ಸಿನಿಮಾ ಪತ್ರಕರ್ತನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ರು.


‘ನೀವು ಹೇಳಿದ್ದು ನಾವು ಕೇಳಿದ್ದು’ ಖ್ಯಾತಿಯ ಮಂಜುನಾಥ್ ಸಂಜೀವ್ ಅವರು ಸಂದೀಪ್‍ಗೆ ಗುರುವಾಗಿ ಸಿಕ್ಕರು. ಇವತ್ತಿಗೂ ಮಂಜುನಾಥ್ ಸಂಜೀವ್ ನನ್ನ ಮಾಧ್ಯಮ ಗುರು ಅಂತ ಹೆಮ್ಮೆಯಿಂದ ಹೇಳಿಕೊಳ್ತಾರೆ ಸಂದೀಪ್. ಅಂದು ಸುವರ್ಣದಲ್ಲಿದ್ದ ಪತ್ರಕರ್ತ ಚೇತನ್ ನಾಡಿಗರ್ ಅವರಿಂದ ಸುವರ್ಣ ಚಾನಲ್‍ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ತು. 2009 ರಲ್ಲಿ ಟಿವಿ9ಗೆ ಸೇರಿದ್ದ ಸಂದೀಪ್ 2011ರಲ್ಲಿ ಸುವರ್ಣ ಸದಸ್ಯರಾದ್ರು. ಇಲ್ಲಿ ಸಾಕಷ್ಟು ಅವಕಾಶಗಳು ಸಿಕ್ಕವು. ಸಿನಿಮಾ ವರದಿಗಾರನಾಗಿ, ಪ್ರೋಗ್ರಾಂ ಪ್ರೊಡ್ಯೂಸರ್ ಆಗಿ, ನಿರೂಪಕರಾಗಿ ಗುರುತಿಸಿಕೊಳ್ಳೋಕೆ ಒಂದೊಳ್ಳೆ ವೇದಿಕೆಯಾಯ್ತು ಸುವರ್ಣ.


ನೆನಪಿರಲಿ ಪ್ರೇಮ್ ಅಭಿನಯದ ‘ಮತ್ತೆ ಬನ್ನಿ ಪ್ರೀತ್ಸೋಣ’ ಸಿನಿಮಾದ ಶೂಟಿಂಗ್ ಮುಂಬೈಯಲ್ಲಿ ನಡೀತಾ ಇತ್ತು. ಆ ವೇಳೆ ಬೆಂಗಳೂರಿಂದ ಮುಂಬೈಗೆ ಹೋಗಿ ಆ ಸಿನಿಮಾದ ಬಗ್ಗೆ ಸ್ಟೋರಿ ಮಾಡಿಕೊಂಡು ಬಂದಿದ್ರು ಸಂದೀಪ್. ಇದು ಸಂದೀಪ್ ಅವರು ನಿರೂಪಕರಾಗಿ ನಡೆಸಿಕೊಟ್ಟ ಮೊಟ್ಟ ಮೊದಲ ಕಾರ್ಯಕ್ರಮವಾಗಿತ್ತು.


ರಿಯಲ್ ಸ್ಟಾರ್ ಉಪೇಂದ್ರ ಅವರ ‘ಗಾಡ್ ಫಾದರ್’ ಚಿತ್ರ ತೆರೆಕಂಡಾಗಿ 3 ಮಂದಿ ಉಪೇಂದ್ರ ಅವರ ನಡುವೆ ನಿರೂಪಕರಾಗಿ ಇವರು (ಸಂದೀಪ್) ಕುಳಿತು ನಡೆಸಿಕೊಟ್ಟಿದ್ದ ವಿಭಿನ್ನ ಕಾರ್ಯಕ್ರಮ ಇವರ ಸೃಜನಶೀಲತೆಗೆ ಹಿಡಿದ ಕನ್ನಡಿ. ಅದೇರೀತಿ ‘ಒಂಟೆ ಮೇಲೆ ಕೋಮಲ್’, ‘ಕೋಟೆಯಲ್ಲಿ ಕೋಮಲ್’ ಹೀಗೆ ಸಿನಿಮಾ ಕಾರ್ಯಕ್ರಮಗಳನ್ನು ವಿಭಿನ್ನ ರೀತಿಯಲ್ಲಿ ನಡೆಸಿಕೊಡೋ ಮೂಲಕ ತಾನು ಎಲ್ಲರಿಂತ ಡಿಫ್ರೆಂಟ್ ಅಂತ ತೋರಿಸಿಕೊಟ್ಟಿದ್ದರು.

ಸುವರ್ಣ ವಾಹಿನಿಯ ಜನಪ್ರಿಯ ಕಾರ್ಯಕ್ರಮ ‘ಸುವರ್ಣ ಗರ್ಲ್ಸ್’ ನಿಮಗೆ ಗೊತ್ತಿದೆ. 6 ಜನ ನಿರೂಪಕಿಯರು ಸಿನಿ ಸೆಲಬ್ರಿಟಿಗಳನ್ನು ಇಂಟರ್ ವ್ಯೂ ಮಾಡ್ತಿದ್ದ ವಿನೂತನ ಕಾರ್ಯಕ್ರಮ. ಈ ಕಾರ್ಯಕ್ರಮದ ತೆರೆ ಹಿಂದಿನ ಶಕ್ತಿ ಇದೇ ಸಂದೀಪ್. ಈ ಕಾರ್ಯಕ್ರಮದಲ್ಲಿ ಗೆಸ್ಟ್ ಗಳಿಗೆ ಕೊಡ್ತಿದ್ದ ಗಿಫ್ಟ್ ಗಳು ವಿಶೇಷವಾಗಿರುತ್ತಿದ್ದವು. ಅವರಿಗೆ ಇಷ್ಟವಾಗಿದ್ದನ್ನು ಬೇರೆ ಯಾರಿಂದಲೋ ತಿಳಿದು ತಂದುಕೊಡುತ್ತಿದ್ದರು. ಬೆಂಗಳೂರೆಲ್ಲಾ ಅಲೆದಾಡಿ, ಹುಡುಕಾಡಿ ಆ ಸೆಲಬ್ರಿಟಿಯ ಇಷ್ಟದ ತಿಂಡಿ ಅಥವಾ ವಸ್ತುವನ್ನು ತಂದುಕೊಡೋದು ದೊಡ್ಡ ಸವಾಲಾಗಿತ್ತು. ಅದರ ಹೊಣೆ ಹೊತ್ತಿದ್ದರು ಸಂದೀಪ್. ಕಿಚ್ಚ ಸುದೀಪ್ ಅವರಿಗೆ ‘ಚುಕ್ಕಿ’ ಅಂದ್ರೆ ಇಷ್ಟ. ಗಿಫ್ಟ್ ಬಾಕ್ಸ್ ನಲ್ಲಿ ಚುಕ್ಕಿ ಕಂಡು ‘ಇದು ನಿಮ್ಗೆ ಹೇಗೆ ಗೊತ್ತಾಯ್ತು?’ ಅಂತ ಸುದೀಪ್ ಆಶ್ಚರ್ಯಪಟ್ಟಿದ್ದರು…!


ಈ ಕಾರ್ಯಕ್ರಮದ 25ನೇ ಎಪಿಸೋಡ್ ಗೆ ಕಮಲ ಹಾಸನ್ ಬಂದಿದ್ದರು. ಆ ಕಾರ್ಯಕ್ರಮ ಯಶಸ್ವಿಯಾಗಿತ್ತು. ಆದ್ರೆ, 6 ಮಂದಿ ನಿರೂಪಕಿಯರು ಇದು ನಮಗೆ ಇಷ್ಟವಾಗಿಲ್ಲ ಅಂತ ಮುನಿಸಿಕೊಂಡು ಸ್ಟೂಡಿಯೋದಲ್ಲಿ ಕುಳಿತು, ಸಂದೀಪ್ ಅವರಿಗೆ ಬರಹೇಳಿದ್ರು…! ಆಗ ಸಂದೀಪ್ ಗೆ ಯಾಕೀಗೆ ಮಾಡ್ತಿದ್ದಾರೆ ಅಂತ ಅರ್ಥವಾಗಿರ್ಲಿಲ್ಲ. ಆ ನಿರೂಪಕಿಯರದ್ದು ತಮಾಷೆಯ ಹುಸಿಮುನಿಸು ಆಗಿತ್ತು. ಸೆಲಬ್ರಿಟಿಗಳಿಗೆ ಸಪ್ರ್ರೈಸ್ ಗಿಫ್ಟ್ ಕೊಡ್ತಿದ್ದ ಸಂದೀಪ್ ಗೆ ಅಂದು ಸಪ್ರ್ರೈಸ್ ಕಾದಿತ್ತು…! ಸುವರ್ಣ ಗರ್ಲ್ಸ್ ಕಾರ್ಯಕ್ರಮದ ನಿರೂಪಕಿಯರು ಬಿಳಿಬಣ್ಣದ ಟೀ ಶರ್ಟ್ ಮೇಲೆ ಸಂದೀಪ್ ಅವರ ಬಗ್ಗೆ ಬರೆದು ಉಡುಗೊರೆ ನೀಡಿದ್ರು…! ಸುವರ್ಣ ಗಲ್ರ್ಸ್ ಕಾರ್ಯಕ್ರಮದ ಪ್ರಮುಖ ಕ್ಷಣಗಳ ಆಲ್ಬಮ್ ಒಂದನ್ನು ರೆಡಿ ಮಾಡಿ ಗಿಫ್ಟ್ ಕೊಟ್ಟಿದ್ರು. ಇದನ್ನೆಂದು ಸಂದೀಪ್ ಮರೆಯಲು ಸಾಧ್ಯವಿಲ್ಲವಂತೆ.


ಅಭಿನಯ ಚಕ್ರವರ್ತಿ ಸುದೀಪ್ ಅವರು ಆಗಾಗ ಮಧ್ಯರಾತ್ರಿ 3 ಗಂಟೆಗೆ ಕೆ.ಆರ್ ಮಾರ್ಕೇಟ್‍ಗೆ ಟೀ ಕುಡಿಯೋಕೆ ಬರ್ತಾರೆ. ಇದನ್ನು ತಿಳಿದಿದ್ದ ಸಂದೀಪ್ ಸುದೀಪ್ ಅವರ ಹುಟ್ಟುಹಬ್ಬದ ದಿನ ಮಧ್ಯರಾತ್ರಿ 3 ಗಂಟೆಗೆ ಕೆ.ಆರ್ ಮಾರ್ಕೆಟ್‍ನಲ್ಲಿ ಕೇಕ್ ಕತ್ತರಿಸಿ ಬರ್ತ್‍ಡೇ ಸೆಲಬ್ರೇಟ್ ಮಾಡಿಸಿದ್ರು. ಆ ಟೈಮಲ್ಲಿ ‘ಈಗ’ ಸಿನಿಮಾ ರಿಲೀಸ್ ಆಗಿತ್ತು. ಇಂತಹ ಅನೇಕ ವಿನೂತನ ಕಾರ್ಯಕ್ರಮಗಳನ್ನು ಮಾಡಿದ ಕೀರ್ತಿ ಸಂದೀಪ್ ಅವರದ್ದು.

ಸುವರ್ಣದಲ್ಲಿ ಗೌರೀಶ್ ಅಕ್ಕಿ, ಉದಯ ಮರ್ಕಿಣಿ, ವಿಶ್ವೇಶ್ವರ ಭಟ್ ಹಾಗೂ ಜಯಪ್ರಕಾಶ್ ಶೆಟ್ಟಿ ಅವರುಗಳ ಪ್ರೋತ್ಸಾಹ, ಮಾರ್ಗದರ್ಶನ ಸಿಕ್ಕಿತ್ತು. 2014ರಲ್ಲಿ ಸಮಯ ಚಾನಲ್ ಕಡೆಗೆ ಸಂದೀಪ್ ಹೊರಟ್ರು. ಇಲ್ಲಿಯೂ ನಾನಾ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ರಂಗನಾಥ್ ಭಾರಧ್ವಜ್ ಅವರ ಪ್ರೋತ್ಸಾಹ ದೊರೆಯಿತು. ‘ಕ್ವಾಟ್ಲೆ’ ಸಿನಿಮಾ ತೆರೆಕಂಡಾಗ ನಿರ್ದೇಶಕಿ ಚಂದ್ರಕಲಾ ಅವರೊಂದಿಗೆ ಕಾರ್ಯಕ್ರಮವೊಂದನ್ನು ನೆಡಿಸಿಕೊಟ್ಟಿದ್ರು. ಅವತ್ತು ‘ನೀವ್ಯಾಕೆ ಸಿನಿಮಾ ನಟನಾಗ ಬಾರದು’ ? ಅಂತ ಚಂದ್ರಕಲಾ ಅವ್ರು ಸಂದೀಪ್ ಗೆ ಕೇಳಿದ್ರು…! ನೀವು ಹೊಸಬರಿಗೆ ಅವಕಾಶ ಕೊಡೋದಾದ್ರೆ ಖಂಡಿತಾ ಆಗುತ್ತೆ ಅಂದಿದ್ದರು ಸಂದೀಪ್. ಅದಾಗಿ ಕೆಲವೇ ದಿನಗಳಲ್ಲಿ ಚಂದ್ರಕಲಾ ಅವರು ಸಂದೀಪ್‍ಗೆ ಫೋನ್ ಮಾಡಿ, ‘ನಿಮ್ಮನ್ನು ಹೀರೋ ಮಾಡೋಣ ಅಂತ. ಒಂದು ಕಥೆ ಹೇಳ್ತೀನಿ ಬನ್ನಿ’ ಎಂದು ಹೇಳಿದಾಗ ಸಂದೀಪ್ ಗೆ ನಂಬಲು ಆಗಿರಲ್ಲಿಲ್ಲ…!


ಕಥೆ ಇಷ್ಟವಾಯ್ತು ಸಿನಿಮಾದಲ್ಲಿ ನಟಿಸಲು ಮುಂದಾದ್ರು. 2015 ಡಿಸೆಂಬರ್ 12ರಂದು ತಾಜ್‍ಮಹಲ್ ಎದುರು ಶೂಟಿಂಗ್ ನಡೆದಿತ್ತು. ನಟನಾಗಿ ಕ್ಯಾಮೆರಾ ಎದುರು ಬಂದ ಮೊದಲ ನೆನಪದು. ಆಗ್ರ, ಚಂಡೀಗಡ ಸೇರಿದಂತೆ ನಾನಾ ಕಡೆಗಳಲ್ಲಿ ಶೂಟಿಂಗ್ ನಡೆದಿತ್ತು. ಇನ್ನು ಶೇ.30ರಷ್ಟು ಶೂಟಿಂಗ್ ಬಾಕಿ ಇರುವಾಗ ಕಾರಣಾಂತರದಿಂದ ಚಿತ್ರವನ್ನು ಅರ್ಧಕ್ಕೆ ನಿಲ್ಲಿಸಬೇಕಾಯ್ತು.


2016ರಲ್ಲಿ ಪಬ್ಲಿಕ್ ಟಿವಿ ಸೇರಿದ್ರು. ಎಚ್.ಆರ್ ರಂಗನಾಥ್ ಅವರು ಸಂದೀಪ್ ಅವರಿಗೆ ಸಿನಿಮಾ ಬ್ಯೂರೋ ಚೀಫ್ ಆಗಿ ಕಾರ್ಯ ನಿರ್ವಹಿಸೋ ಹೊಣೆಗಾರಿಕೆ ನೀಡಿದ್ರು. ಈ ವೇಳೆ ಟಿವಿ9, ಸುವರ್ಣ ನಂತರದ ಸ್ಥಾನದಲ್ಲಿ ಪಬ್ಲಿಕ್ ಟಿವಿಯ ‘ಸಿನಿ ಅಡ್ಡ’ ಕಾರ್ಯಕ್ರಮವಿತ್ತು. ಸಂದೀಪ್ ಜವಬ್ದಾರಿ ಹೊತ್ತಮೇಲೆ ‘ಸಿನಿ ಅಡ್ಡ’ ನಂಬರ್ 1 ಪಟ್ಟಕ್ಕೇರಿತು.


ತರ್ಲೆ ವಿಲೇಜ್ ಸಿನಿಮಾ ರಿಲೀಸ್ ಆದಾಗ ಎತ್ತಿನ ಗಾಡಿಯಲ್ಲಿ ಗಡ್ಡಪ್ಪ ಅವರನ್ನು ಕೂರಿಸಿಕೊಂಡು ಅವರೂರಿಗೆ ಹೋಗಿ, ಅಲ್ಲಿನ ಪಂಚಾಯತಿಕಟ್ಟೆಯಲ್ಲಿ ಸ್ಪೆಷಲ್ ಪ್ರೋಗ್ರಾಂ ನಡೆಸಿಕೊಟ್ಟಿದ್ರು.

ಕಿರಿಕ್ ಪಾರ್ಟಿ ಸಿನಿಮಾ ರಿಲೀಸ್ ಆದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೋಟು ಅಮಾನ್ಯ ಮಾಡಿತ್ತು. ಆಗ ರಕ್ಷಿತ್ ಶೆಟ್ಟಿ ಅವರ ಜೊತೆ ಸಂದೀಪ್ ಮಲ್ಲೇಶ್ವರಂ ಮಾರ್ಕೆಟ್‍ನಲ್ಲಿ ಸೀಕ್ರೇಟ್ ಕ್ಯಾಮೆರಾ ಇಟ್ಟು, ಹಣ್ಣು, ಹೂವುಗಳನ್ನು ಖರೀದಿಸಿ ನಗದುಕೊಡಲ್ಲ ಪೇಟಿಎಂ ಬಳಸಿ ಎಂದು ಅರಿವು ಮೂಡಿಸೋ ಕಾರ್ಯಕ್ರಮ ಮಾಡಿದ್ರು. ಹೀಗೆ ವಿಭಿನ್ನತೆಗೆ ಹೆಸರಾದ ಸಿನಿಮಾ ಜರ್ನಲಿಸ್ಟ್ ಸಂದೀಪ್.


ಸಿನಿಮಾ ಕ್ಷೇತ್ರದಲ್ಲಿ ಏನಾದರೂ ಮಾಡಬೇಕೆಂಬ ಕನಸಿದೆ. ಪ್ರಯತ್ನವಿಲ್ಲದೇ ಸೋಲೋದು ಬೇಡ. ಕನಸು ನನಸಾಗಿಲ್ಲ ಅಂತ ಕೊರಗೋದು ಬೇಡ ಎಂದು ಸಿನಿಮಾ ಕ್ಷೇತ್ರದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ. ಎರಡು ಸಿನಿಮಾಗಳ ಕೆಲಸ ನಡೀತಾ ಇದೆ. ಪತ್ನಿ ರಶ್ಮಿ ಅವರು ಮನೆಯ ನಿರ್ವಹಣೆ ಜವಬ್ದಾರಿ ಹೊತ್ತು ಪತಿ ಸಂದೀಪ್ ಗೆ ಪ್ರೋತ್ಸಾಹ ನೀಡಿ, ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.


ಈ ಹಿಂದೆ ಸುದೀಪ್ ಅಭಿನಯದ ‘ಮಾಣಿಕ್ಯ’ ಸೇರಿದಂತೆ ಒಂದೆರಡು ಚಿತ್ರಗಳಲ್ಲಿ ಸಣ್ಣಪಾತ್ರವೊಂದನ್ನು ಸಂದೀಪ್ ಮಾಡಿದ್ದರು. ಗೆಳೆಯ ಬಾಲು ನಿರ್ದೇಶನದ ‘ಅನಾದ್ಯಂತ’ ಕಿರುಚಿತ್ರದಲ್ಲಿ ನಟಿಸಿದ್ದಾರೆ. ತೀರ್ಥಹಳ್ಳಿಯ ಸಹ್ಯಾದ್ರಿ ಉತ್ಸವದಲ್ಲಿ ‘ಮಲೆನಾಡ ಪ್ರತಿಭೆ’ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.


ರವಿಚಂದ್ರನ್, ಅಂಬರೀಶ್, ಶಿವರಾಜ್ ಕುಮಾರ್, ಅನಂತನಾಗ್, ಉಪೇಂದ್ರ, ಸುದೀಪ್, ದರ್ಶನ್, ಪುನೀತ್, ಯಶ್ ಸೇರಿದಂತೆ ಬಹುತೇಕ ಸೂಪರ್ ಸ್ಟಾರ್ ಗಳ ಜೊತೆ ಟೆಲಿವಿಷನ್ ವಾಹಿನಿಗಳಲ್ಲಿ ಜನಪ್ರಿಯ ಕಾರ್ಯಕ್ರಮವನ್ನು ನಡೆಸಿಕೊಟ್ಟಿರುವ ಸಿನಿಮಾ ಜರ್ನಲಿಸ್ಟ್ ಸಂದೀಪ್ ಸಿನಿಮಾ ಕಲಾವಿದ ಆಗಲು ಹೊರಟಿದ್ದಾರೆ. ಕಲಾ ಸರಸ್ವತಿ ಇವರ ಕೈ ಹಿಡಿದು ನಡೆಸಲಿ ಎಂದು ಹಾರೈಸುತ್ತಾ…

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

1) 10 ನವೆಂಬರ್ 2017 : ಈಶ್ವರ್ ದೈತೋಟ

2)11 ನವೆಂಬರ್ 2017 : ಭಾವನ

3)12  ನವೆಂಬರ್ 2017 : ಜಯಶ್ರೀ ಶೇಖರ್

4)13 ನವೆಂಬರ್ 2017 : ಶೇಷಕೃಷ್ಣ

5)14 ನವೆಂಬರ್ 2017 : ಶ್ರೀಧರ್ ಶರ್ಮಾ

6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

7)16 ನವೆಂಬರ್ 2017 : ಅರವಿಂದ ಸೇತುರಾವ್

8)17 ನವೆಂಬರ್ 2017 : ಲಿಖಿತಶ್ರೀ

9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

10)19 ನವೆಂಬರ್ 2017 : ಅಪರ್ಣಾ

11)20 ನವೆಂಬರ್ 2017 :  ಅಮರ್ ಪ್ರಸಾದ್

12)21 ನವೆಂಬರ್ 2017 :   ಸೌಮ್ಯ ಮಳಲಿ

13)22 ನವೆಂಬರ್ 2017 :  ಅರುಣ್ ಬಡಿಗೇರ್

14)23ನವೆಂಬರ್ 2017 :  ರಾಘವ ಸೂರ್ಯ

15)24ನವೆಂಬರ್ 2017 :  ಶ್ರೀಲಕ್ಷ್ಮಿ

16)25ನವೆಂಬರ್ 2017 :  ಶಿಲ್ಪ ಕಿರಣ್

17)26ನವೆಂಬರ್ 2017 :  ಸಮೀವುಲ್ಲಾ

18)27ನವೆಂಬರ್ 2017 :  ರಮಾಕಾಂತ್ ಆರ್ಯನ್

19)28ನವೆಂಬರ್ 2017 :  ಮಾಲ್ತೇಶ್

20)29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

21)30ನವೆಂಬರ್ 2017 :  ಸುರೇಶ್ ಬಾಬು 

22)01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

23)02 ಡಿಸೆಂಬರ್ 2017 : ಶಶಿಧರ್ ಭಟ್

24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್

25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ

26)05 ಡಿಸೆಂಬರ್ 2017 : ಶ್ರುತಿ ಜೈನ್

27)06ಡಿಸೆಂಬರ್ 2017 : ಅವಿನಾಶ್ ಯುವನ್  

28)07ಡಿಸೆಂಬರ್ 2017 : ಶಿಲ್ಪ ಕೆ.ಎನ್

29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ

30)09ಡಿಸೆಂಬರ್ 2017 : ಸಂದೀಪ್ ಕುಮಾರ್

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article