ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕ ಹಿತದೃಷ್ಟಿಯಿಂದ “ಇಂಧನ ಉಳಿಸಿ” ಅಂತ ಕರೆ ಕೊಟ್ಟಿದ್ದೇ ತಡ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈಗ ಹೊಸ ಕ್ರಾಂತಿ ಶುರುವಾಗಿದೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಮೋದಿಯವರ ಸಲಹೆಯನ್ನ ಅಕ್ಷರಶಃ ಪಾಲಿಸಲು ಮುಂದಾಗಿದ್ದು, ಸರ್ಕಾರಿ ನೌಕರರಿಗೆ ವಾರದಲ್ಲಿ ಎರಡು ದಿನ ಕಡ್ಡಾಯವಾಗಿ “ವರ್ಕ್ ಫ್ರಮ್ ಹೋಮ್” ಘೋಷಿಸಿದ್ದಾರೆ. ಇನ್ಮುಂದೆ ದೆಹಲಿ ಸರ್ಕಾರಿ ನೌಕರರು ಮನೆಯಿಂದಲೇ ಫೈಲ್ ವಿಲೇವಾರಿ ಮಾಡಲಿದ್ದು, ರಸ್ತೆಗಿಳಿಯುವ ವಾಹನಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಲಿದೆ.
ಇಷ್ಟೇ ಅಲ್ಲ, ದೆಹಲಿ ಸರ್ಕಾರ “ಮೇರಾ ಭಾರತ್ ಮೇರಾ ಯೋಗದಾನ್” (ನನ್ನ ಭಾರತ, ನನ್ನ ಕೊಡುಗೆ ) ಅನ್ನೋ ಪಕ್ಕಾ ದೇಶಭಕ್ತಿಯ ಅಭಿಯಾನವನ್ನೇ ಶುರು ಮಾಡಿದೆ. ಇಂಧನ ಉಳಿಸೋದು ಬರಿ ಮಾತಲ್ಲ, ಅದು ನಮ್ಮ ಜವಾಬ್ದಾರಿ ಅನ್ನೋದನ್ನ ತೋರಿಸಿಕೊಡಲು ಸಚಿವರು ಮತ್ತು ಅಧಿಕಾರಿಗಳು ಈಗ ಟೊಂಕ ಕಟ್ಟಿ ನಿಂತಿದ್ದಾರೆ. ಇದ್ರಲ್ಲಿ ಹೈಲೈಟ್ ಅಂದ್ರೆ “ಮೆಟ್ರೋ ಮಂಡೇ” ಅಂದ್ರೆ ಪ್ರತಿ ಸೋಮವಾರ ದೆಹಲಿಯ ಸಚಿವರು, ಐಎಎಸ್ ಅಧಿಕಾರಿಗಳು ಮತ್ತು ಎಲ್ಲಾ ನೌಕರರು ತಮ್ಮ ಐಷಾರಾಮಿ ಕಾರುಗಳನ್ನ ಬಿಟ್ಟು ಮೆಟ್ರೋ ರೈಲಿನಲ್ಲೇ ಆಫೀಸಿಗೆ ಬರಬೇಕು ಅಂತ ಖಡಕ್ ಆರ್ಡರ್ ಮಾಡಲಾಗಿದೆ.
ಸಂಚಾರ ದಟ್ಟಣೆ ಮತ್ತು ಪೆಟ್ರೋಲ್ ಪೋಲಾಗೋದನ್ನ ತಪ್ಪಿಸಲು ಸರ್ಕಾರ ಕಚೇರಿಗಳ ಕೆಲಸದ ಸಮಯದಲ್ಲೂ ಬದಲಾವಣೆ ಮಾಡಿದೆ. ಅಷ್ಟೇ ಅಲ್ಲ, ಸರ್ಕಾರದ ಶೇ. 50ರಷ್ಟು ಸಭೆಗಳು ಇನ್ಮುಂದೆ ಆನ್ಲೈನ್ ಅಥವಾ ವರ್ಚುವಲ್ ಮೂಲಕವೇ ನಡೆಯಲಿವೆ. ಸಭೆಯ ಹೆಸರಲ್ಲಿ ಅಧಿಕಾರಿಗಳು ಅತ್ತಿಂದಿತ್ತ ಓಡಾಡಿ ಡೀಸೆಲ್ ಸುಡೋ ಕಾಲಕ್ಕೆ ಈಗ ಬ್ರೇಕ್ ಬಿದ್ದಿದೆ. ಅಧಿಕಾರಿಗಳಿಗೆ ತಿಂಗಳಿಗೆ ಸಿಗ್ತಿದ್ದ ಪೆಟ್ರೋಲ್ ಕೋಟಾದಲ್ಲೂ ಶೇ. 20ರಷ್ಟು ಕಡಿತ ಮಾಡಲಾಗಿದ್ದು, ಮಿತವ್ಯಯದ ಬಿಸಿ ಈಗ ಮೇಲಂತಸ್ತಿನವರಿಗೂ ತಟ್ಟಿದೆ.
ಇನ್ನು ದೆಹಲಿ ಸರ್ಕಾರದ ಖಜಾನೆಯಿಂದ ಮುಂದಿನ 6 ತಿಂಗಳ ಕಾಲ ಹೊಸ ವಾಹನಗಳ ಖರೀದಿಯೇ ಇರೋದಿಲ್ಲ. ಅದು ಪೆಟ್ರೋಲ್ ಇರಲಿ ಅಥವಾ ಎಲೆಕ್ಟ್ರಿಕ್ ವಾಹನವೇ ಇರಲಿ, ಒಂದು ರೂಪಾಯಿ ಕೂಡ ವಾಹನಗಳ ಮೇಲೆ ಖರ್ಚು ಮಾಡಬಾರದು ಅಂತ ಸರ್ಕಾರ ತೀರ್ಮಾನಿಸಿದೆ. ನೌಕರರ ಅನುಕೂಲಕ್ಕಾಗಿ ವಿವಿಧ ವಸತಿ ಸಮುಚ್ಚಯಗಳಿಂದ 58 ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು, ವೈಯಕ್ತಿಕ ವಾಹನಗಳ ಬದಲಿಗೆ ಈ ಬಸ್ಗಳಲ್ಲೇ ಸಂಚರಿಸುವಂತೆ ಉತ್ತೇಜಿಸಲಾಗುತ್ತಿದೆ.
ಅನಗತ್ಯ ವಿದೇಶಿ ಪ್ರವಾಸಗಳಿಗೂ ಈಗ ಮುಕ್ತಿ ಸಿಕ್ಕಿದೆ. ಮುಂದಿನ ಒಂದು ವರ್ಷದವರೆಗೆ ದೆಹಲಿ ಸರ್ಕಾರದ ಯಾವುದೇ ಸಚಿವ ಅಥವಾ ಅಧಿಕಾರಿ ಅಧಿಕೃತ ವಿದೇಶಿ ಟ್ರಿಪ್ ಹೋಗುವಂತಿಲ್ಲ. ವಿದೇಶಿ ವಿನಿಮಯ ಮೀಸಲು ಉಳಿಸಲು ಮೋದಿ ಮಾಡಿದ್ದ ಮನವಿಯನ್ನ ರೇಖಾ ಗುಪ್ತಾ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, “ನೋ ವಿದೇಶಿ ಪ್ರವಾಸ” ರೂಲ್ಸ್ ಜಾರಿಗೆ ತಂದಿದೆ. ಜೊತೆಗೆ ವಾರದಲ್ಲಿ ಒಂದು ದಿನ “ನೋ ವೆಹಿಕಲ್ ಡೇ” ಆಚರಿಸುವಂತೆ ಸಾರ್ವಜನಿಕರಿಗೂ ಮನವಿ ಮಾಡಿದೆ.
ಕಚೇರಿ ಒಳಗೆ ಕೂಡ ವಿದ್ಯುತ್ ಉಳಿಸಲು ಹೊಸ ಪ್ಲ್ಯಾನ್ ಮಾಡಲಾಗಿದೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಎಸಿ (AC) ತಾಪಮಾನವನ್ನ 24 ರಿಂದ 26 ಡಿಗ್ರಿ ಸೆಲ್ಸಿಯಸ್ಗೆ ಫಿಕ್ಸ್ ಮಾಡಲಾಗಿದೆ. ಇದರಿಂದ ಕರೆಂಟ್ ಬಿಲ್ ಉಳಿಯೋದಷ್ಟೇ ಅಲ್ಲ, ಪರಿಸರಕ್ಕೂ ಲಾಭವಾಗಲಿದೆ. ನೌಕರರಿಗೆ ಇಂಧನ ಬೆಲೆ ಏರಿಕೆಯ ಹೊರೆ ತಪ್ಪಿಸಲು ಸಾರಿಗೆ ಭತ್ಯೆಯನ್ನು ಶೇ. 10ರಷ್ಟು ಹೆಚ್ಚಳ ಮಾಡಲಾಗಿದೆ. ಒಟ್ಟಾರೆಯಾಗಿ, ಜಾಗತಿಕ ತೈಲ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ದೆಹಲಿ ಸರ್ಕಾರ 7 ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇಂಧನ ಉಳಿತಾಯದ ಈ ಅಭಿಯಾನ ನಾಳೆಯಿಂದಲೇ ಜಾರಿಗೆ ಬರಲಿದೆ.



