ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ‘ಐಸಿಸ್’ (ISIS) ಜೊತೆ ಲಿಂಕ್ ಹೊಂದಿದ್ದ ಜಾಲವೊಂದರ ಮೇಲೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಭಾರತದಿಂದ ಮುಗ್ಧ ಯುವಕರನ್ನು ಉಗ್ರರ ಶಿಬಿರಕ್ಕೆ ರವಾನಿಸುತ್ತಿದ್ದ ಹಾಗೂ ಅವರಿಗೆ ಹಣಕಾಸಿನ ನೆರವು ನೀಡುತ್ತಿದ್ದ ಜಾಲವನ್ನು ಬೆನ್ನಟ್ಟಿರುವ ಇಡಿ, ಮಂಗಳವಾರ (ಜುಲೈ 21) ಬೆಳಗಿನ ಜಾವವೇ ನಗರದ 8 ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಶಾಕ್ ನೀಡಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಖಲಿಸಿದ್ದ ಎಫ್ಐಆರ್ ಹಾಗೂ ಚಾರ್ಜ್ಶೀಟ್ ಆಧಾರದ ಮೇಲೆ ಈ ಹೈ-ವೋಲ್ಟೇಜ್ ಶೋಧ ಕಾರ್ಯಾಚರಣೆ ನಡೆದಿದೆ.
‘ಇಕ್ರಾ’ ಮತ್ತು ‘ಜಿಎಫ್ಎಂ’ ಟ್ರಸ್ಟ್ಗಳ ಮೂಲಕ ಹರಿದುಬಂತು ಹಣ: ಬ್ಯಾಂಕ್ ಖಾತೆ ಬ್ಲಾಕ್
ಎನ್ಐಎ ತನಿಖೆಯಲ್ಲಿ ಹೊರಬಿದ್ದ ಆಘಾತಕಾರಿ ಸತ್ಯಗಳನ್ನಾಧರಿಸಿ ಇಡಿ ಈಗ ಅಕ್ರಮ ಹಣ ವರ್ಗಾವಣೆ (Money Laundering) ಆಂಗಲ್ನಲ್ಲಿ ತನಿಖೆ ಚುರುಕುಗೊಳಿಸಿದೆ. ಬೆಂಗಳೂರಿನಲ್ಲಿ ಸಕ್ರಿಯವಾಗಿದ್ದ ‘ಇಕ್ರಾ ವೆಲ್ಫೇರ್ ಟ್ರಸ್ಟ್’ (Ikra Welfare Trust) ಮತ್ತು ‘ಜಿಎಫ್ಎಂ ಟ್ರಸ್ಟ್’ (GFM Trust) ಎಂಬ ಎರಡು ಸಂಸ್ಥೆಗಳ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಸಿರಿಯಾದಲ್ಲಿರುವ ಐಸಿಸ್ ಕಮಾಂಡರ್ಗಳಿಗೆ ಹಣ ವರ್ಗಾವಣೆ ಮಾಡಲಾಗುತ್ತಿತ್ತು. ಸ್ವಂತ ಉಳಿತಾಯ, ಖಾಸಗಿ ದೇಣಿಗೆ ಹಾಗೂ ಟ್ರಸ್ಟ್ಗಳ ಹೆಸರಲ್ಲಿ ಸಂಗ್ರಹವಾಗುತ್ತಿದ್ದ ಕೋಟ್ಯಂತರ ರೂಪಾಯಿ ಹಣವನ್ನು ಯುವಕರ ನೇಮಕಾತಿ ಮತ್ತು ಸಿರಿಯಾ ಪ್ರವಾಸಕ್ಕೆ ಬಳಸಲಾಗುತ್ತಿತ್ತು ಎಂಬುದು ಈಗ ಅಕ್ಷರಶಃ ಸಾಬೀತಾಗಿದೆ.
ಬ್ರೇನ್ವಾಶ್ಗೆ ‘ಕುರ್ಆನ್ ಸರ್ಕಲ್’ ಅಸ್ತ್ರ: ಸಿಎಎ-ಎನ್ಆರ್ಸಿ ಭೀತಿಯ ದುರುಪಯೋಗ
ಅಭಿವೃದ್ಧಿ ಹೊಂದುತ್ತಿರುವ ಮುಸ್ಲಿಂ ಯುವಕರನ್ನು ಗುರಿಯಾಗಿಸಿಕೊಂಡು ‘ಇಕ್ರಾ ಕ್ಯಾಂಪ್’ ಎಂಬ ವ್ಯಕ್ತಿತ್ವ ವಿಕಸನ ಶಿಬಿರ ನಡೆಸಲಾಗುತ್ತಿತ್ತು. ಇದರ ಮರೆಯಲ್ಲೇ ‘ಕುರ್ಆನ್ ಸರ್ಕಲ್’ ಎಂಬ ವಾರಾಂತ್ಯದ ರಹಸ್ಯ ಕೂಟಗಳನ್ನು ಆಯೋಜಿಸಿ ಯುವಕರ ಮನಸ್ಸಿನಲ್ಲಿ ತೀವ್ರಗಾಮಿ ಆಲೋಚನೆಗಳನ್ನು ತುಂಬಲಾಗುತ್ತಿತ್ತು. ದೇಶದಲ್ಲಿ ಸಿಎಎ (CAA) ಮತ್ತು ಎನ್ಆರ್ ಸಿ (NRC) ಪ್ರತಿಭಟನೆಗಳು ನಡೆದ ಸಂದರ್ಭದಲ್ಲಿ ಯುವಕರ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು, ಮುಸ್ಲಿಮೇತರರ ವಿರುದ್ಧ ಪ್ರಚೋದನೆ ನೀಡಲಾಗಿತ್ತು. ಆ ಬಳಿಕ ರಹಸ್ಯ ಸೋಶಿಯಲ್ ಮೀಡಿಯಾ ಗ್ರೂಪ್ಗಳ ಮೂಲಕ ಐಸಿಸ್ ಸಿದ್ಧಾಂತಕ್ಕೆ ಅವರನ್ನು ಸಂಪೂರ್ಣವಾಗಿ ಒಳಪಡಿಸಲಾಗುತ್ತಿತ್ತು.
ಟರ್ಕಿ ಮಾರ್ಗವಾಗಿ ಸಿರಿಯಾಗೆ ರವಾನೆ: ಯುದ್ಧಭೂಮಿಯಲ್ಲಿ ಇಬ್ಬರು ಬಲಿ
ಹೀಗೆ ಸಂಪೂರ್ಣವಾಗಿ ಬ್ರೇನ್ವಾಶ್ಗೊಳಗಾದ ಬೆಂಗಳೂರಿನ 6 ಯುವಕರನ್ನು ಟರ್ಕಿ ಮಾರ್ಗವಾಗಿ ಅಕ್ರಮವಾಗಿ ಸಿರಿಯಾಗೆ ಕಳುಹಿಸಿಕೊಡಲಾಗಿತ್ತು. ಭಾರತ ಸರ್ಕಾರದೊಂದಿಗೆ ಮೈತ್ರಿ ಹೊಂದಿರುವ ಸಿರಿಯಾ ಸರ್ಕಾರದ ವಿರುದ್ಧ ಐಸಿಸ್ ಪರವಾಗಿ ಯುದ್ಧ ಮಾಡಲು ಈ ಯುವಕರಿಗೆ ಆರ್ಥಿಕ ನೆರವು ನೀಡಲಾಗಿತ್ತು. ಆದರೆ, ಸಿರಿಯಾದ ಭೀಕರ ಯುದ್ಧಭೂಮಿಯಲ್ಲಿ ಬೆಂಗಳೂರಿನ ಇಬ್ಬರು ಯುವಕರು ಈಗಾಗಲೇ ಸತ್ತುಬಿದ್ದಿದ್ದು, ಇನ್ನುಳಿದ ನಾಲ್ವರು ತೀವ್ರವಾಗಿ ಗಾಯಗೊಂಡು ಅಲ್ಲಿಯೇ ತಲೆಮರೆಸಿಕೊಂಡಿದ್ದಾರೆ ಎಂಬ ಆಘಾತಕಾರಿ ವಿಚಾರ ಎನ್ಐಎ ತನಿಖೆಯಿಂದ ಬಹಿರಂಗವಾಗಿದೆ.
ಫ್ರೇಜರ್ ಟೌನ್ನ ಆಡಿಟರ್ ಮನೆ ಮೇಲೆಯೇ ‘ಇಡಿ’ ದಾಳಿ: ಶೋಧ ತೀವ್ರ!
ಈ ಇಡೀ ಫಂಡಿಂಗ್ ನೆಟ್ವರ್ಕ್ನ ಮಾಸ್ಟರ್ ಮೈಂಡ್ ಹಾಗೂ ಜಿಎಫ್ಎಂ ಟ್ರಸ್ಟ್ನ ಅಧಿಕೃತ ಆಡಿಟರ್ ಶಬೀರ್ ಖಾನ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಬೆಂಗಳೂರಿನ ಫ್ರೇಜರ್ ಟೌನ್ನಲ್ಲಿರುವ ‘ಟಾಸ್ಕಿನ್ ಅಪಾರ್ಟ್ಮೆಂಟ್’ನಲ್ಲಿರುವ ಶಬೀರ್ ಖಾನ್ ನಿವಾಸ ಮತ್ತು ಕಚೇರಿಯ ಮೇಲೆ ದಿಢೀರ್ ದಾಳಿ ನಡೆಸಿದ ಅಧಿಕಾರಿಗಳು ತಡರಾತ್ರಿಯವರೆಗೂ ಹಣಕಾಸಿನ ದಾಖಲೆಗಳನ್ನು ಜಾಲಾಡಿದ್ದಾರೆ. ವಿದೇಶಗಳಿಂದ ಈ ಟ್ರಸ್ಟ್ಗಳಿಗೆ ಬಂದಿರುವ ವಿದೇಶಿ ದೇಣಿಗೆ ಹಾಗೂ ಅವುಗಳು ಎಲ್ಲೆಲ್ಲಿಗೆ ವರ್ಗಾವಣೆಯಾಗಿವೆ ಎಂಬ ಬ್ಯಾಂಕ್ ಸ್ಟೇಟ್ಮೆಂಟ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಲಂಡನ್, ದುಬೈನಲ್ಲಿ ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆ!
ಇಡಿ ನಡೆಸಿರುವ ಶೋಧ ಕಾರ್ಯಾಚರಣೆ ವೇಳೆ ಮತ್ತೊಂದು ಬೆಚ್ಚಿಬೀಳಿಸುವ ಸಂಗತಿ ಬಯಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕಿತರು ಹಾಗೂ ಟ್ರಸ್ಟ್ಗಳು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಯುಎಇ (UAE), ಲಂಡನ್ ಮತ್ತು ದುಬೈ ಸೇರಿದಂತೆ ವಿದೇಶಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಗಳನ್ನು ಸಂಪಾದಿಸಿಟ್ಟಿರುವುದು ಪತ್ತೆಯಾಗಿದೆ. ವಿದೇಶದಲ್ಲಿದ್ದುಕೊಂಡೇ ಹವಾಲಾ ದಂದೆಯ ಮೂಲಕ ಭಾರತಕ್ಕೆ ಹಣ ಕಳಿಸಿ, ಇಲ್ಲಿ ಉಗ್ರವಾದಕ್ಕೆ ಪ್ರಚೋದನೆ ನೀಡಲಾಗುತ್ತಿತ್ತು ಎಂಬ ಅನುಮಾನಕ್ಕೆ ಈ ಅಕ್ರಮ ಆಸ್ತಿಗಳು ಸಾಕ್ಷಿ ನುಡಿಯುತ್ತಿವೆ.
ನಾಲ್ವರು ಪ್ರಮುಖರು ಜೈಲಿಗೆ: ವಿಚಾರಣೆಯಲ್ಲಿ ಬಿಚ್ಚಿಬೀಳುತ್ತಾ ಸತ್ಯ?
ಈ ಜಾಲಕ್ಕೆ ಸಂಬಂಧಿಸಿದಂತೆ ಎನ್ಐಎ ಈಗಾಗಲೇ ಇರ್ಫಾನ್ ನಾಸೀರ್, ಮೊಹಮದ್ ತಾಕೀರ್, ಜುಹೈಬ್ ಮನ್ನ ಹಾಗೂ ಅಬ್ದುಲ್ ಖಾದಿರ್ ಎಂಬ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದೆ. ಸದ್ಯ ಈ ನಾಲ್ವರೂ ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದು, ಕೋರ್ಟ್ ವಿಚಾರಣೆ ಎದುರಿಸುತ್ತಿದ್ದಾರೆ. ಇವರ ನೀಡಿದ ಸುಳಿವು ಹಾಗೂ ಇಡಿ ಅಧಿಕಾರಿಗಳಿಗೆ ಸಿಕ್ಕಿರುವ ಡಿಜಿಟಲ್ ಪುರಾವೆಗಳ ಆಧಾರದ ಮೇಲೆ, ಬೆಂಗಳೂರಿನಲ್ಲಿ ಅಡಗಿರುವ ಇನ್ನಷ್ಟು ಐಸಿಸ್ ಸ್ಲೀಪರ್ ಸೆಲ್ ಕೊಂಡಿಗಳನ್ನು ಪತ್ತೆ ಮಾಡಲು ತನಿಖಾ ಸಂಸ್ಥೆಗಳು ಬಲೆ ಬೀಸಿವೆ.



