ಮಂಡ್ಯ : ಲೊಕಸಭಾ ಚುನಾವಣೆ ಸಮೀಪಿಸುತ್ತಿದೆ. ಮಂಡ್ಯ ಲೋಕಸಭಾ ಕಣ ಸ್ಟಾರ್ವಾರ್ಗೆ ಸಜ್ಜಾಗಿದೆ. ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರ ಸ್ವಾಮಿ ಮತ್ತು ಸುಮಲತಾ ಅಂಬರೀಶ್ ಇಬ್ಬರಲ್ಲಿ ಯಾರು ಕಣಕ್ಕೆ ಇಳಿಯುತ್ತಾರೆ ಎಂಬುದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆದರೆ. ಕಾಂಗ್ರೆಸ್ ದೋಸ್ತಿ ಜೆಡಿಎಸ್ ಒತ್ತಡಕ್ಕೆ ಮಣಿದಿದೆ. ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಕಣಕ್ಕಿಳಿಯಲಿದ್ದಾರೆ. ನಿಖಿಲ್ ಕುಮಾರ ಸ್ವಾಮಿ ತಮ್ಮ ಸ್ಪರ್ಧೆ ಖಚಿತ ಎಂದು ಹೇಳಿದ್ದಾರೆ.
ಇವತ್ತು ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದ ನಿಖಿಲ್ ಮತ್ತೊಮ್ಮೆ ತಮ್ಮ ಸ್ಪರ್ಧೆಯನ್ನು ಖಚಿತಪಡಿಸಿದರು. ಅಧಿಕೃತವಾಗಿ ನನಗೆ ಟಿಕೆಟ್ ಘೋಷಿಸಿದ್ದಾರೆ. ದೇವೇಗೌಡರು ಕೊಟ್ಟಿರುವ ಜವಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದಿದ್ದಾರೆ.
ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಸಹ ತಮ್ಮ ಸ್ಪರ್ಧೆ ನಿಶ್ಚಿತ ಅಂತ ಹೇಳಿದ್ದಾರೆ. ಯಾರು ಏನೇ ಎಂದರು ನಾನು ಕೇಳಲ್ಲ. ನಾನು ಬೇರೆ ಕಡೆ ನಿಲ್ಲುವ ಪ್ರಶ್ನೆಯೇ ಇಲ್ಲ. ನಾನು ಮಂಡ್ಯದಿಂದಲೇ ಕಣಕ್ಕೆ ಇಳಿಯುತ್ತೇನೆ ಎಂದಿದ್ದಾರೆ.
ಹಾಗಾದ್ರೆ ಸುಮಲತಾ ದೋಸ್ತಿ ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲ್ಲ ಅನ್ನೋದು ಖಚಿತ. ಬಿಜೆಪಿಯಿಂದ ಸ್ಪರ್ಧಿಸುತ್ತಾರಾ..? ಆ ಯೋಚನೆಯೂ ಇಲ್ಲ. ಹಾಗಾಗಿ ಅವರು ಪಕ್ಷೇತರ ಅಭ್ಯರ್ಥಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ನಿಶ್ಚಿತವಾಗಿದೆ. ಇದರೊಂದಿಗೆ ಮಂಡ್ಯ ಲೋಕಕಣ ಸ್ಟಾರ್ ವಾರ್ಗೆ ವೇದಿಕೆಯಾಗಲಿದೆ. ಮತದಾರ ಸುಮಲತಾ ಅಂಬರೀಶ್ ಅವರ ಕೈ ಹಿಡಿಯುತ್ತಾನೋ..? ಅಥವಾ ನಿಖಿಲ್ ಅವರ ಕೈ ಹಿಡಿಯುತ್ತಾರಾ ಅನ್ನೋದು ಕುತೂಹಲ.