ಪ್ರತಿ ಗಣೇಶ ಮೂರ್ತಿಗೂ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿದ್ದಾರೆ. ಈ ಸಂಬಂಧ ಕಮಿಷನರ್ ಕಚೇರಿಯಲ್ಲಿ ಮಾತನಾಡಿದ ಅವರು, ಸುರಕ್ಷತೆ ದೃಷ್ಟಿಯಿಂದ ಪ್ರತಿಯೊಂದು ಪೆಂಡಾಲ್ ಒಳಗೆ ಹಾಗೂ ಹೊರಗೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯವಾಗಿದೆ.
ಜೊತೆಗೆ, ಆಯೋಜಕರೇ ತಮ್ಮ ಪೆಂಡಾಲ್ ಬಳಿ ಸರದಿ ಪ್ರಕಾರ 24 ಗಂಟೆಯೂ ಗಸ್ತು ತಿರುಗಿದರೆ ಒಳ್ಳೆಯದು. ಇದರಿಂದ ಅಹಿತಕರ ಘಟನೆಗಳು ನಡೆಯದಂತೆ ತಡೆಯಬಹುದು’ ಎಂದೂ ಹೇಳಿದರು. ರಸ್ತೆಯ ನಡುವೆ ಪೆಂಡಾಲ್ ನಿರ್ಮಿಸಬಾರದು. ಅಗ್ನಿಶಾಮಕ ವಾಹನ, ಆಂಬುಲೆನ್ಸ್ ಹಾಗೂ ಸಾರ್ವಜನಿಕರ ವಾಹನಗಳ ಓಡಾಟಕ್ಕೆ ಜಾಗವಿರುವಂತೆ ನೋಡಿಕೊಳ್ಳಬೇಕು. ತಮ್ಮ ವ್ಯಾಪ್ತಿಯ ಠಾಣೆ ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಭದ್ರತೆಗೆ ಅವರ ಸಹಾಯ ಪಡೆಯಬೇಕು. ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ನಿಗಾ ವಹಿಸಬೇಕು’ ಎಂದು ಪ್ರತಾಪ್ ರೆಡ್ಡಿ ತಿಳಿಸಿದರು.