ಗಂಗಾವತಿ ಬಿಜೆಪಿ ಮುಖಂಡ ಕೊಲೆ ಪ್ರಕರಣ: 6 ಅಪರಾಧಿಗಳಿಗೆ ಮರಣದಂಡನೆ, 6 ಮಂದಿ ಖುಲಾಸೆ
ಕೊಪ್ಪಳ: ಗಂಗಾವತಿಯ ಬಿಜೆಪಿ ಮುಖಂಡ ವೆಂಕಟೇಶ ಕುರುಬರ ಹತ್ಯೆ ಪ್ರಕರಣದಲ್ಲಿ ಆರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಗಂಗಾವತಿ ಒಂದನೇ ಹೆಚ್ಚುವರಿ ಸತ್ರ ನ್ಯಾಯಾಲಯ ಗುರುವಾರ ಮಹತ್ವದ ತೀರ್ಪು ಪ್ರಕಟಿಸಿದೆ.
ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಅವರು ಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದು, ರವಿ, ವಿಜಯ ಅಲಿಯಾಸ್ ಮೈಲಾರಿ, ಧನರಾಜ್, ಭೀಮ ಅಲಿಯಾಸ್ ಭರತ್, ಸಲೀಂ ಮಹಮ್ಮದ್ ರಫೀಕ್ ಹಾಗೂ ಗಂಗಾಧರ ಗೌಳಿ ಅವರಿಗೆ ಮರಣದಂಡನೆ ವಿಧಿಸಿದ್ದಾರೆ. ಜೊತೆಗೆ ದಂಡವನ್ನೂ ವಿಧಿಸಲಾಗಿದೆ.
ಇನ್ನೊಂದೆಡೆ, ಪ್ರಕರಣದಲ್ಲಿ ಆರೋಪಿಗಳಾಗಿದ್ದ ಕಾರ್ತಿಕ್, ದಾದಾಪೀರ್, ಮಹಮ್ಮದ್ ಅಲ್ತಾಪ್, ಮಲ್ಲಿಕಾರ್ಜುನ, ಹತೋರ್ಟಿ ಶರಣ ಹಾಗೂ ಚೈತ್ರಾ ಅವರನ್ನು ನ್ಯಾಯಾಲಯ ನಿರಪರಾಧಿಗಳೆಂದು ಘೋಷಿಸಿ ಖುಲಾಸೆಗೊಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 23ರಂದು ನ್ಯಾಯಾಲಯ ಆರು ಮಂದಿಯನ್ನು ದೋಷಿಗಳೆಂದು ಘೋಷಿಸಿ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿತ್ತು. ಇಂದು ಅಂತಿಮ ತೀರ್ಪು ಪ್ರಕಟಿಸಿ ಗಲ್ಲು ಶಿಕ್ಷೆ ವಿಧಿಸಲಾಗಿದೆ.
ಪ್ರಕರಣದ ಹಿನ್ನೆಲೆ:
2025ರ ಅಕ್ಟೋಬರ್ 7ರಂದು ಗಂಗಾವತಿ ನಗರದಲ್ಲಿ ಬಿಜೆಪಿ ಮುಖಂಡ ವೆಂಕಟೇಶ ಕುರುಬರ ಅವರನ್ನು ಹಳೆ ದ್ವೇಷದ ಹಿನ್ನೆಲೆ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಘಟನೆ ಜಿಲ್ಲೆಯಲ್ಲಿ ಭಾರೀ ಸಂಚಲನ ಮೂಡಿಸಿತ್ತು.
ಪ್ರಕರಣ ಸಂಬಂಧ ಪೊಲೀಸರು ಒಟ್ಟು 12 ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದ್ದರು. ಸುದೀರ್ಘ ತನಿಖೆಯ ಬಳಿಕ 927 ಪುಟಗಳ ದೋಷಾರೋಪಣಾ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಸಾಕ್ಷ್ಯಾಧಾರಗಳು ಮತ್ತು ವಾದ-ಪ್ರತಿವಾದಗಳನ್ನು ಪರಿಶೀಲಿಸಿದ ನ್ಯಾಯಾಲಯ, ಆರು ಆರೋಪಿಗಳನ್ನು ದೋಷಿಗಳೆಂದು ತೀರ್ಮಾನಿಸಿ ಕಠಿಣ ಶಿಕ್ಷೆ ವಿಧಿಸಿದೆ.
ಈ ತೀರ್ಪು ಗಂಗಾವತಿ ಸೇರಿದಂತೆ ಜಿಲ್ಲಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ನ್ಯಾಯಾಲಯದ ಕಠಿಣ ನಿಲುವಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.



