ಅದು 1960 ಬೆಂಗಳೂರಿನಲ್ಲಿ ಒಂದು ಕುಟುಂಬವಿತ್ತು. ಅದರ ಯಜಮಾನನೆನಿಸಿಕೊಂಡ ಅಯ್ಯಪ್ಪ ಆ ಕಾಲದಲ್ಲೇ 10ನೇ ಕ್ಲಾಸ್ ಪಾಸಾಗಿದ್ದ. ಆದರೆ ಯಾರ ಕೈ ಕೆಳಗೆ ಕೆಲಸ ಮಾಡಬಾರದು ಎಂಬ ಹಠಕ್ಕೆ ಬಿದ್ದು ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಅದಕ್ಕೆ ತಕ್ಕುದೆಂಬಂತೆ ಕುಡುತದ ಚಟ ಹತ್ತಿತ್ತು. ಅದರ ಪರಿಣಾಮವಾಗಿ ಮನೆಯ ಎಲ್ಲಾ ಪಾತ್ರೆ ಪಗಡೆಗಳು ಮಾರಿದ್ದ. ಆದರೂ ಸಂಸಾರ ನಡೆಯಬೇಕಿತ್ತಲ್ಲ. ಅನಿವಾರ್ಯವಾಗಿ ಅಯ್ಯಪ್ಪನ ಪತ್ನಿ ಸುಮಾಳೇ ಕೆಲಸಕ್ಕೆ ಹೋಗುತ್ತಿದ್ದಳು. ಆಕೆಯಿಂದ ಬಂದ ಆದಾಯವೇ ಅವರ ಕುಟುಂಬಕ್ಕೆ ಆಧಾರ.
ದಿನ ಕಳೆದಂತೆ ಅಯ್ಯಪ್ಪನಿಗೆ ಇದ್ದ ಒಬ್ಬ ಮಗ ಗೋವಿಂದ 7ನೇ ವರ್ಷಕ್ಕೆ ಬಂದಿದ್ದ. ಆದರೆ ಅವನನ್ನು ಕೆಲಸಕ್ಕೆ ಕಳಿಸಬೇಕು ಎಂಬುದು ಆತನ ಅಭಿಲಾಷೆಯಾಗಿತ್ತು. ಆದರೆ ತಾಯಿ ಮಾತ್ರ ತನ್ನ ಮಗ ಓದಬೇಕು, ಸಮಾಜದಲ್ಲಿ ದೊಡ್ಡ ಹೆಸರು ಮಾಡಬೇಕು ಎಂಬ ಆಸೆಯ ಗೋಪುರ ಕಟ್ಟಿಕೊಂಡಿದ್ದಳು. ಆದರೆ ಶಾಲೆಗೆ ಹೋಗಿ ಅಡ್ಮಿಶನ್ ಮಾಡಿಸಬೇಕೆಂದರೆ ಗೋವಿಂದ್ ಗೆ ಒಂದು ವರ್ಷ ಹೆಚ್ಚೇ ವಯಸ್ಸಾಗಿದೆ ಆದ್ರಿಂದ ಅವನನ್ನು ಸೇರಿಸಿಕೊಳ್ಳಲ್ಲ ಎಂದಿದ್ದ ಮುಖ್ಯೋಪಾಧ್ಯಾಯ. ಆದರೆ ಆ ಕಾಲದಲ್ಲೇ ಸುಮಾ 20 ರೂಪಾಯಿ ಲಂಚ ಕೊಟ್ಟು ತನ್ನ ಮಗನಿಗೆ ಶಾಲೆಗೆ ಹಾಕಿದ್ದಳು. ಆದರೆ ಮನೆಯ ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸಿತ್ತು. ಗೋವಿಂದ್ ನ ತಂದೆ ಎನಿಸಿಕೊಂಡವ ಯಾರೋ ಒಬ್ಬ ಹೆಣ್ಣಿನ ಜೊತೆ ಆ ಕಾಲದಲ್ಲೇ ಸುಮಾರು 40.000 ರೂಪಾಯಿ ಕಿಸೆಗೆ ಹಾಕಿಕೊಂಡು ಓಡಿಹೋಗಿದ್ದ. ಅದೇ ಹೊತ್ತಿಗೆ ತನ್ನ ಪತ್ನಿಗೆ ಮತ್ತೊಂದು ಮಗು ಕರುಣಿಸಿದ್ದ.
ಅಲ್ಲಿಗೆ ಸುಮಾಳ ಕಥೆ ದೊಡ್ಡ ವ್ಯಥೆಯಾಗಿತ್ತು. ಅತ್ತ ಕಡೆ ಸುಮಾ ಕೆಲಸಕ್ಕೆ ಹೋದರೆ ಮಗುವನ್ನು ನೋಡಿಕೊಳ್ಳುವವರ್ಯಾರೂ ಇರುವುದಿಲ್ಲ. ಇತ್ತ ಕಡೆ ಗೋವಿಂದ್ ಗೆ ಶಾಲೆ ಬಿಡಿಸಲು ಮನಸ್ಸೂ ಬರಲಿಲ್ಲ. ಆದರೂ ಅನಿವಾರ್ಯವಾಗಿ ಆತನನ್ನು ಶಾಲೆಯಿಂದ ಬಿಡಿಸಿದಳು.
ಸುಮಾರು 2 ವರ್ಷದ ಬಳಿಕ ಗೋವಿಂದ್ ಗೆ ಮತ್ತೇ ಶಾಲೆಗೆ ಹೋಗುವ ಆಸೆ ಚಿಗುರಿತ್ತು. ಅವನ ತಮ್ಮನನ್ನು ಪಕ್ಕದ ಮನೆಯಲ್ಲಿ ಹೇಳಿ ಬಿಟ್ಟು ಹೋಗುವ ನಿರ್ಧಾರಕ್ಕೆ ಆತ ಬಂದಿದ್ದ. ಆದರೆ ಶಾಲೆಗೆ ಸೇರಬೇಕೆಂದರೆ ಮುಖ್ಯೋಪಾಧ್ಯಾಯ ಮತ್ತೇ 20 ರೂಪಾಯಿ ಲಂಚಕ್ಕೆ ಕೈಯ್ಯೊಡ್ಡಿದ್ದ. ಅಲ್ಲದೇ ನೇರವಾಗಿ ನಾಲ್ಕನೇ ಕ್ಲಾಸ್ ಗೆ ಸೇರಿಸಿಕೊಳ್ಳುತ್ತೇನೆ. ಆದರೆ, ಗೋವಿಂದ್ ಗೆ 3ನೇ ಕ್ಲಾಸ್ ನ ಎಲ್ಲಾ ವಿಷಯಗಳು ತಿಳಿದಿರಬೇಕು ಎಂಬ ಷರತ್ತೂ ಹಾಕಿದ್ದ. ಆದ್ದರಿಂದ ಸಂಜೆ ವೇಳೆ 3ನೇ ಕ್ಲಾಸ್ ನ ಟ್ಯೂಷನ್ ಗೆ ಹೋಗುವಂತೆ ಸೂಚನೆಯನ್ನೂ ನೀಡಿದರು. ಅದನ್ನು ಮೀರಲು ಸಾಧ್ಯವೇ..? ಮತ್ತೇ 3 ರೂಪಾಯಿ ಫೀಸ್ ಕಟ್ಟಿ ಟ್ಯೂಷನ್ ಸೇರಿದ.
ನೋಡನೋಡುತ್ತಿದ್ದಂತೆ ಗೋವಿಂದ್ ಭರ್ಜರಿಯಾಗಿ ಓದಿದ. ಹತ್ತನೇ ಕ್ಲಾಸ್ ಕೂಡಾ ಪಾಸಾದ. ಅದೂ ಕೂಡಾ ಕ್ಲಾಸ್ ಗೆ ಮೊದಲಿಗನಾಗಿ. ಅಷ್ಟು ಹೊತ್ತಿಗಾಗಲೇ ಯಾವುದೋ ಹೆಣ್ಣಿನ ಜೊತೆ ಓಡಿ ಹೋಗಿದ್ದ ಅಪ್ಪ, ಖಾಲಿ ಕೈನೊಂದಿಗೆ ಮರಳಿ ಬಂದಿದ್ದ. ಬಂದವನೇ ಹಾಸಿಗೆ ಹಿಡಿದು ಮಲಗಿದ್ದ. ಮೇಲಾಗಿ ನಡೆಯಲೂ ಸಾಧ್ಯವಿಲ್ಲದಂತಾಗಿದ್ದ. ಅದೇ ಹೊತ್ತಿಗೆ ಗೋವಿಂದ್ ನನ್ನು ಕಂಡು ಅನು ಎಂಬ ಒಂದು ಹುಡುಗಿಗೆ ಲವ್ ಆಗಿತ್ತು. ಇವನಿಗೂ ಸಮ್ಮತಿ ಇತ್ತು. ಆದರೆ ಹುಡುಗಿ ಕಡೆಯವರಿಗೆ ವಿಷಯ ತಿಳಿದು ಅವಳಿಗೆ ಎಂಗೇಜ್ ಮೆಂಟ್ ಮಾಡಿಸಿದ್ದರು. ಆದರೆ ಪ್ರೀತಿ ಬಿಡಬೇಕಲ್ಲ. ಅನು ನೇರವಾಗಿ ಗೋವಿಂದ್ ಮನೆಗೆ ಬಂದು ಕುಳಿತಿದ್ದಳು. ಆಗಲೇ ಗೋವಿಂದ್ ನ ತಂದೆ ದೊಡ್ಡ ಮನಸ್ಸು ಮಾಡಿದ್ದ. ತಾನು ಕೂಡಿಟ್ಟಿದ್ದ ಸುಮಾರು 500(ಆಗಿನ ಕಾಲದಲ್ಲಿ) ರೂಪಾಯಿ ಕೊಟ್ಟು ಗೆಳೆಯರ ಸಹಾಯ ಪಡೆದು ಓಡಿ ಹೋಗು ಎಂದುಬಿಟ್ಟಿದ್ದ. ಬಹುಶಃ ಆತ ಸಾಯುವ ಮುನ್ನ ಹಾಗೂ ತನ್ನ ಮಗನನ್ನು ಕೊನೆಯ ಬಾರಿ ನೋಡುವ ಮುನ್ನ ಮಾಡಿದ ಒಂದೇ ಒಂದು ಒಳ್ಳೆಯ ಕೆಲಸ..!
ಗೋವಿಂದ್, ಅನು ಜೊತೆಗೆನೋ ಓಡಿಹೋದ. ಹಾಗೆ ಹೋದವ ತನ್ನ ಮಾವನ ಸಹಾಯ ಪಡೆದು ನೇರವಾಗಿ ಅಂದಿನ ಶಾಸಕರೊಬ್ಬರ ಬಳಿ ಹೋದ. ಅವರಿಗೆ ಅದೇನು ಅನ್ನಿಸಿತೋ ಗೊತ್ತಿಲ್ಲ. ತನ್ನ ಮನೆಯ ದೇವರ ಕೋಣೆಯ ಮುಂದೆ ನಿಲ್ಲಿಸಿ ಮದುವೆ ಮಾಡಿಸಿದರು. ಮರಳಿ ಮನೆಗೆ ಬಂದು ಎರಡೂ ಮನೆಯವರನ್ನು ಒಪ್ಪಿಸಿದರು. ಆದರೆ ಹುಡುಗಿಯ ಮನೆಯವರು ತಮ್ಮ ಮಗಳು ಎಲ್ಲಾದರೂ ಬದುಕಲಿ ನಾವು ಅವಳನ್ನು ನೋಡಲು ಬರುವುದಿಲ್ಲ ಎಂದಿದ್ದರು. ಅಷ್ಟು ಸಾಕಾಗಿತ್ತು. ಆ ಯುವ ಪ್ರೇಮಿಗಳಿಗೆ.
ಅನು ಬಂದಿದ್ದೇ ಬಂತು. ಗೋವಿಂದ್ ಕೆಲಸಕ್ಕೆ ಹೊಗಲಾರಂಭಿಸಿದ. ಬೆಳಗ್ಗೆ 6ಕ್ಕೆ ಹೋದವ, ರಾತ್ರಿಯೇ ಬರುತ್ತಿದ್ದ. ನೋಡ ನೋಡುತ್ತಿದ್ದಂತೆ ಅವರ ಕುಟುಂಬ ದೊಡ್ಡ ಮಟ್ಟಕ್ಕೆ ಬೆಳೆಯಿತು. ತಮ್ಮ ಅಗತ್ಯಕ್ಕೆ ತಕ್ಕಷ್ಟು ಆಸ್ತಿಯನ್ನು ಸಂಪಾದಿಸಿತು. ಇಷ್ಟಕ್ಕೂ ಈ ಕಥೆ ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಮುಂದುವರೆಯುತ್ತಲೇ ಇದೆ. ಗೋವಿಂದ್ ನ ಕುಟುಂಬ ಇಂದು ಸಮಾಜದಲ್ಲಿ ದೊಡ್ಡ ಹೆಸರು ಮಾಡಿದೆ. ಆತ ಇಂದು ತಿಂಗಳಿಗೆ ಸುಮಾರು 53000 ಸಂಬಳ ಎಣಿಸುತ್ತಾನೆ. ಆತನ ತಮ್ಮನೂ ಕೂಡಾ ಚೆನ್ನಾಗಿ ಜೀವನ ನಡೆಸುತ್ತಿದ್ದು, ಅಣ್ಣನಂತೆಯೇ ಬೆಳೆದಿದ್ದಾನೆ. ಇಷ್ಟಕ್ಕೂ ಈ ಕಥೆಯ ಹೀರೊ ಯಾರು..? ಗೋವಿಂದ್ ನಾ..? ಆತನ ತಾಯಿಯಾ..? ಅಥವಾ ತಂದೆಯಾ..?
- ರಾಜಶೇಖರ ಜೆ
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : [email protected]