ಇನ್ಮುಂದೆ ಧಾರವಾಡಕ್ಕೆ ಹೋಗಬಹುದು: ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್ ಕೊಟ್ಟ ಕೋರ್ಟ್
ಬೆಂಗಳೂರು: ಶಾಸಕ ವಿನಯ್ ಕುಲಕರ್ಣಿಗೆ ಇದೀಗ ಕೋರ್ಟ್ನಿಂದ ಬಿಗ್ ರಿಲೀಫ್ ಸಿಕ್ಕಿದೆ. ಧಾರವಾಡ ಪ್ರವೇಶಕ್ಕೆ ವಿಧಿಸಲಾಗಿದ್ದ ಷರತ್ತನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರದ್ದುಪಡಿಸಿ ಆದೇಶ ಹೊರಡಿಸಿದೆ.
ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಕುಲಕರ್ಣಿ ಧಾರವಾಡಕ್ಕೆ ಪ್ರವೇಶಿಸದಂತೆ ಈ ಹಿಂದೆ ಕೋರ್ಟ್ ಷರತ್ತು ವಿಧಿಸಿತ್ತು. ಆದರೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡಕ್ಕೆ ತೆರಳಲು ಹೈಕೋರ್ಟ್ ಈಗಾಗಲೇ ಅನುಮತಿ ನೀಡಿತ್ತು.
ಇದೀಗ ಸಾಕ್ಷ್ಯ ನಾಶ ಪ್ರಕರಣದಲ್ಲಿದ್ದ ಧಾರವಾಡ ಪ್ರವೇಶ ನಿರ್ಬಂಧದ ಷರತ್ತನ್ನು ರದ್ದುಪಡಿಸುವಂತೆ ವಿನಯ್ ಕುಲಕರ್ಣಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ ಕೋರ್ಟ್, ಧಾರವಾಡಕ್ಕೆ ತೆರಳಲು ಇದ್ದ ಷರತ್ತನ್ನು ರದ್ದುಪಡಿಸಿ ಆದೇಶಿಸಿದೆ. ಹೀಗಾಗಿ ಇನ್ಮುಂದೆ ವಿನಯ್ ಕುಲಕರ್ಣಿ ಧಾರವಾಡಕ್ಕೆ ತೆರಳಬಹುದಾಗಿದೆ.
ಆದರೆ ಧಾರವಾಡಕ್ಕೆ ತೆರಳುವ ವೇಳೆ ಯಾವುದೇ ರೀತಿಯ ಮೆರವಣಿಗೆ, ಶಕ್ತಿ ಪ್ರದರ್ಶನ ಅಥವಾ ಇತರ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದು ಕೋರ್ಟ್ ಷರತ್ತು ವಿಧಿಸಿದೆ.
ಕೋರ್ಟ್ ಆದೇಶದಿಂದ ಧಾರವಾಡ ಪ್ರವೇಶಕ್ಕೆ ಎದುರಾಗಿದ್ದ ನಿರ್ಬಂಧದಿಂದ ಶಾಸಕ ವಿನಯ್ ಕುಲಕರ್ಣಿಗೆ ಇದೀಗ ರಿಲೀಫ್ ಸಿಕ್ಕಂತಾಗಿದೆ.



