ಇದು ಪೂಜಾರ ಕಣ್ಣೀರಿನ ಕಥೆ

0
53

ಚೇತೇಶ್ವರ್ ಪೂಜಾರ ಪ್ರಸ್ತುತ ಭಾರತ ಟೆಸ್ಟ್ ತಂಡದ ಪ್ರಮುಖ ಅಸ್ತ್ರ ಎಂದೇ ಹೇಳಬಹುದು. ತಂಡದ ಪ್ರಮುಖ ಆಟಗಾರರು ವಿಫಲರಾದಾಗ, ಗಾಯಕ್ಕೊಳಗಾದ ಅಥವಾ ತಂಡ ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಾಗ ಆಪತ್ಬಾಂಧವನಂತೆ ನಿಲ್ಲುವವರೇ ಚೇತೇಶ್ವರ್ ಪೂಜಾರ. ಆಸ್ಟ್ರೇಲಿಯಾ ಮತ್ತು ಭಾರತ 2020-21 ಟೆಸ್ಟ್ ಸರಣಿಯಲ್ಲಿಯೂ ಕೂಡ ಟೀಮ್ ಇಂಡಿಯಾದ ಹಲವಾರು ಆಟಗಾರರು ಗಾಯಕ್ಕೊಳಗಾಗಿದ್ದಾಗ ಅತ್ಯುತ್ತಮ ಪ್ರದರ್ಶನವನ್ನು ತೋರಿದ ತೇಜೇಶ್ವರ್ ಪೂಜಾರ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ 2-1 ಅಂತರದಿಂದ ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿತು.

 

ಹೀಗೆ ಹಲವಾರು ಟೆಸ್ಟ್ ಸರಣಿಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ಭಾರತ ತಂಡಕ್ಕೆ ಆಸರೆಯಾಗಿರುವ ಚೇತೇಶ್ವರ್ ಪೂಜಾರ ಅವರ ಕ್ರಿಕೆಟ್ ಜೀವನದ ಹಾದಿ ಸುಲಭವಾಗಿರಲಿಲ್ಲ. ಅದರಲ್ಲಿಯೂ ತಮ್ಮ ಕ್ರಿಕೆಟ್ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ಚೇತೇಶ್ವರ್ ಪೂಜಾರ ಸಾಕಷ್ಟು ನೋವು ಮತ್ತು ಕಷ್ಟವನ್ನು ಅನುಭವಿಸಿದ್ದಾರೆ. ಇದೀಗ ಅಪಾರ ಪ್ರತಿಭೆಯನ್ನು ಹೊಂದಿರುವ ಚೇತೇಶ್ವರ್ ಪೂಜಾರ ಅವರು ತಮ್ಮ ಆ ನೋವಿನ ಮತ್ತು ಕಷ್ಟದ ದಿನಗಳನ್ನು ಮೆಲುಕು ಹಾಕುತ್ತಾ ಭಾವುಕರಾಗಿದ್ದಾರೆ. ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ತಾವು ಎದುರಿಸಿದ ಮೊದಲ ಗಾಯದ ಕುರಿತು ಮತ್ತು ಅದರಿಂದ ತಾವು ಅನುಭವಿಸಿದ ಕಷ್ಟ ಹಾಗೂ ಖಿನ್ನತೆಗೊಳಗಾಗಿದ್ದರ ಬಗ್ಗೆ ಚೇತೇಶ್ವರ್ ಪೂಜಾರ ಮಾತನಾಡಿದ್ದಾರೆ.

 

 

ಹೌದು ಚೇತೇಶ್ವರ್ ಪೂಜಾರ ಅವರು ಮೊದಲನೇ ಬಾರಿ ಗಾಯಕ್ಕೊಳಗಾದಾಗ ಅದನ್ನು ತೀವ್ರ ಗಂಭೀರವಾಗಿ ಪರಿಗಣಿಸಿ ಮುಂದೆ ತನಗೆ ಕ್ರಿಕೆಟ್ ಆಡಲು ಆಗುತ್ತೋ ಇಲ್ಲವೋ ಎಂದು ಯೋಚಿಸಲು ಶುರುಮಾಡಿಬಿಟ್ಟಿದ್ದರಂತೆ. ವೈದ್ಯರು ಗಾಯದಿಂದ ಸುಧಾರಿಸಿಕೊಳ್ಳಲು 6 ತಿಂಗಳುಗಳ ಅವಧಿ ಬೇಕು ಎಂದು ಹೇಳಿದ ಮೇಲಂತೂ ಚೇತೇಶ್ವರ್ ಪೂಜಾರ ಅದನ್ನು ಮತ್ತಷ್ಟು ಗಂಭೀರವಾಗಿ ತೆಗೆದುಕೊಂಡು ಕಣ್ಣೀರು ಹಾಕಿ ಖಿನ್ನತೆಗೆ ಒಳಗಾಗಿದ್ದರಂತೆ. ಆ ಸಮಯದಲ್ಲಿ ಪೂಜಾರ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಪೂಜಾರ ಜೊತೆ ಮಾತನಾಡಿ ಅವರಲ್ಲಿ ಧೈರ್ಯವನ್ನು ತುಂಬಿದ್ದರು, ಹೀಗಾಗಿ ಪೂಜಾರ ಧೈರ್ಯದಿಂದ ಪ್ರತಿನಿತ್ಯ ಧ್ಯಾನ ಮತ್ತು ಯೋಗ ಮಾಡುವ ಮೂಲಕ ಗಾಯದ ವಿರುದ್ಧ ಹೋರಾಡಿ ಮತ್ತೆ ಕ್ರಿಕೆಟ್ ಆಡಲು ತಯಾರಾದರು. ತಮ್ಮ ಜೀವನದಲ್ಲಿ ನಡೆದ ಈ ಕಹಿ ಘಟನೆಯನ್ನು ಪೂಜಾರ ಇತ್ತೀಚೆಗಷ್ಟೇ ನಡೆದ ಸಂದರ್ಶನದಲ್ಲಿ ಹೇಳಿಕೊಂಡಿದ್ದು ಅದರಿಂದ ಹೊರಬರಲು ಕುಟುಂಬ ಸದಸ್ಯರು ಮತ್ತು ಸ್ನೇಹಿತರು ತುಂಬಿದ ಧೈರ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

 

LEAVE A REPLY

Please enter your comment!
Please enter your name here