No menu items!
23.4 C
Munich
Saturday, May 2, 2026

ಎಚ್.ಡಿ ಕುಮಾರಸ್ವಾಮಿಗೆ ಒಳ್ಳೆ ಲಾಟರಿ ; ಬೇಕಿದ್ರೆ ಸೇಲ್ ಡೀಡ್ ತೆಗೆದು ನೋಡಿ – ಡಿಕೆ ಶಿವಕುಮಾರ್

Must read

ರಾಜಕೀಯ ಅಂದರೆ ಕೇವಲ ಭಾಷಣ ಅಲ್ಲ. ಅದೊಂದು ಚದುರಂಗ. ನಮ್ಮ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಚದುರಂಗದ ಚಾಂಪಿಯನ್. ಖುದ್ದು ಎರಡು ವರ್ಷದ ಹಿಂದೆ ಡಿಕೆ ಶಿವಕುಮಾರ್ ಈ ಮಾತನ್ನು ತಾವೇ ಹೇಳಿದ್ದರು ಕೂಡ. ಬಿಜೆಪಿ ಎಷ್ಟೇ ತಿಪ್ಪರಲಾಗ ಹಾಕಿದರೂ
2028ರಲ್ಲಿ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿದ್ದ ಡಿಕೆಶಿ ಯಾವ ರೀತಿ ರಾಜಕಾರಣ ಮಾಡಬೇಕು, ಅವರು ಏನೇ ಚದುರಂಗ ಆಟವಾಡಿದರೂ ಹೇಗೆ ಚೆಕ್ ಮೇಟ್ ನೀಡಬೇಕು ಎಂದು ನನಗೆ ಗೊತ್ತಿದೆ ಎಂದು ಹೇಳಿದ್ದರು. ರಾಜಕಾರಣ ಫುಟ್ಬಾಲ್ ಅಲ್ಲ. ಚದುರಂಗದಾಟ. ಆ ಆಟ ನನಗೆ ಗೊತ್ತಿದೆ ಎಂದಿದ್ದರು.

ಈಗ ಇದೇ ಚದುರಂಗದಾಟದಲ್ಲಿ ದಾಳವೊಂದನ್ನು ಉದುರಿಸಿರುವ ಡಿಕೆಶಿವಕುಮಾರ್ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ವ್ಯಂಗ್ಯವಾಡಿದ್ದಾರೆ. ಕುಮಾರಸ್ವಾಮಿ ಅವರಿಗಂತೂ ಒಳ್ಳೆ ಲಾಟರಿ ಹೊಡೆದಿದೆ ಎಂದಿದ್ದಾರೆ.

ಹೌದು, ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಪುಟ ಅನುಮೋದನೆ ಸಿಗುತ್ತಿದ್ದಂತೆಯೇ ಹೆಚ್ ಡಿ ಕುಮಾರಸ್ವಾಮಿ ಅವರನ್ನು‌ ಕುಟುಕಿರುವ ಡಿಕೆಶಿವಕುಮಾರ್, ಕುಮಾರಸ್ವಾಮಿ ಅವರಿಗಂತೂ ಈಗ ಒಳ್ಳೆ ಲಾಟರಿ ಹೊಡೆದಿದೆ ಎಂದು ಹೇಳಿದ್ದಾರೆ. ವಿಧಾನಸೌಧದಲ್ಲಿ ಈ ಬಗ್ಗೆ ಮಾತಾಡಿರೋ ಡಿಕೆಶಿ, ಬಿಡದಿ ಟೌನ್‌ಶಿಪ್‌ನಿಂದ ಅತಿ ಹೆಚ್ಚು ಲಾಭ ಆಗಿರುವುದು ಬೇರೆ ಯಾರಿಗೂ ಅಲ್ಲ, ಬದಲಿಗೆ ಕುಮಾರಸ್ವಾಮಿ ಅವರಿಗೆ ಎಂದು ಹೇಳಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ , ಕುಮಾರಸ್ವಾಮಿ ಅವರು ಈ ಹಿಂದೆ ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಸಾಕಷ್ಟು ಟೀಕೆ ಮಾಡಿದ್ದರು. ಆದರೆ ಈಗ ಅದೇ ಯೋಜನೆಯಿಂದ ಅವರಿಗೆ ಹಣದ ಮಳೆ ಸುರಿಯಲಿದೆ ಎಂಬ ವಾದವನ್ನು ಮಂಡಿಸಿದ್ದಾರೆ.

ಬಿಡದಿಯಲ್ಲಿ ಅವರದ್ದೇ ಜಮೀನು ಇದೆಯಲ್ಲ? ಆವತ್ತು ಎಷ್ಟಕ್ಕೆ ಜಮೀನು ತಗೊಂಡಿದ್ದರು, ಈಗ ಅದರ ಬೆಲೆ ಎಷ್ಟಾಗಿದೆ ಅನ್ನೋದನ್ನ ಒಮ್ಮೆ ಅವರ ಸೇಲ್ ಡೀಡ್ ತೆಗೆದು ನೋಡಿದರೆ ಗೊತ್ತಾಗುತ್ತೆ ಎಂದು ಹೇಳಿದ್ದಾರೆ. ಇದು ಲಾಟರಿ ಅಲ್ಲದೇ ಇನ್ನೇನು? ಎಂದು ಪ್ರಶ್ನಿಸಿದ್ದಾರೆ.

ಇಷ್ಟೇ ಅಲ್ಲ, ಹಣ ಬೇಡ ಅಂದ್ರೆ ಬಿಟ್ಟು ಕೊಡಲಿ ನೋಡೋಣ ಅಂತಲೂ ಸವಾಲು ಹಾಕಿರುವ ಡಿಕೆ ಶಿವಕುಮಾರ್, ಇವತ್ತು ದೆಹಲಿಯಲ್ಲಿ ಕೂತು ಈ ಯೋಜನೆ ಬಗ್ಗೆ ಮಾತನಾಡುತ್ತಿರುವ ಡಿಕೆ ಶಿವಕುಮಾರ್ ನಾನೇ 8 ಸಾವಿರ ಅಡಿ ಕೊಡುತ್ತೇನೆ ಅಂತ ಕುಮಾರಸ್ವಾಮಿ ಈಗ ಹೇಳ್ತಿದ್ದಾರೆ ಆದರೆ ಅವರು ಆ ಕ್ಷೇತ್ರದ ಪ್ರತಿನಿಧಿಯಾಗಿದ್ದಾಗಲೇ ಡಿನೋಟಿಫೈ ಮಾಡಬೇಕಿತ್ತು ಎಂದು ಕೇಳಿದ್ದಾರೆ.


ಮುಂದುವರೆದು ಯಾರಿಗೋ ಅವರು ಜಿಪಿಎ ಮಾಡಿಕೊಟ್ಟಿದ್ದರು ಎಂದು ಹೇಳಿರುವ ಡಿಕೆ ಶಿವಕುಮಾರ್, ನಾನೀಗ ಭೂ ಮಾಲೀಕರಿಗೆ ಅವರ ಹಕ್ಕು ನೀಡಿ ಎಂದು ಹೇಳಿದ್ದೇನೆ ಎಂದಿದ್ದಾರೆ.ರೈತರ ಹಿತ ಕಾಪಾಡೋದು ನಮ್ಮ ಮೊದಲ ಆದ್ಯತೆ ಎಂದು ಹೇಳಿದ್ದಾರೆ.

ಇದೇ ವೇಳೆ ರೈತರ ಹೋರಾಟದ ಹಿಂದೆ ವಿರೋಧ ಪಕ್ಷಗಳ ಕೈವಾಡ ಇದೆ ಎಂಬ ಗುಮಾನಿ ವ್ಯಕ್ತಪಡಿಸಿರುವ ಡಿಕೆಶಿ, ನನ್ನ ಮೇಲೆ ವಿಶ್ವಾಸ ಇಡಿ, ನಿಮ್ಮ ಭೂಮಿಯನ್ನು ಉಳಿಸಿಕೊಡುತ್ತೇನೆ ಮತ್ತು ಅದರಿಂದ ರೈತರಿಗೆ ಗರಿಷ್ಠ ಲಾಭ ಸಿಗುವಂತೆ ನೋಡಿಕೊಳ್ಳುತ್ತೇನೆ. ವಿರೋಧ ಪಕ್ಷಗಳು ರೈತರನ್ನು ಎತ್ತಿಕಟ್ಟುತ್ತಿವೆ. ರಾಜಕೀಯದಲ್ಲಿ ಟೀಕೆ ಟಿಪ್ಪಣಿಗಳು ಸಾಮಾನ್ಯ, ನಾವು ಟೀಕೆಗಳನ್ನು ಮೀರಿ ಕೆಲಸ ಮಾಡಿದ್ದೇವೆ ಅನ್ನೋದಕ್ಕೆ ತುಂಗಭದ್ರಾ ಗೇಟ್ ಅಳವಡಿಕೆಯೇ ಸಾಕ್ಷಿ ಎಂದು ತಮ್ಮ ಸರ್ಕಾರದ ಸಾಧನೆಯ ಕಥೆ ಹೇಳಿದ್ದಾರೆ.

ಒಟ್ನಲ್ಲಿ , ಬಿಡದಿ ಟೌನ್ ಶಿಪ್ ಯೋಜನೆ ಈಗ ಡಿಕೆ ಶಿವಕುಮಾರ್ ಮತ್ತು ಎಚ್‌ಡಿಕೆ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ. ಕುಮಾರಸ್ವಾಮಿ ಅವರ ಜಮೀನಿನ ವಿಚಾರವನ್ನೇ ಅಸ್ತ್ರ ಮಾಡಿಕೊಂಡಿರೋ ಡಿಸಿಎಂ, ದುಡ್ಡು ಬೇಡ ಅಂದ್ರೆ ಬಿಟ್ಟು ಕೊಡಿ ಅಂತ ಹೇಳಿರೋದು ಈಗ ಜೆಡಿಎಸ್ ಪಾಳಯಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ‘ಲಾಟರಿ’ ಪಾಲಿಟಿಕ್ಸ್ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳುತ್ತೆ ಅನ್ನೋದೇ ಈಗ ಕುತೂಹಲ.

- Advertisement -spot_img

More articles

- Advertisement -spot_img

Latest article