ರಾಜ್ಯದ ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ ಬಿದ್ದಿದೆ. ಕೆಲವೇ ತಿಂಗಳ ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತೊಮ್ಮೆ ಭಾರಿ ಪ್ರಮಾಣದಲ್ಲಿ ಟೋಲ್ ದರಗಳನ್ನು ಹೆಚ್ಚಳ ಮಾಡಿ ಸವಾರರಿಗೆ ಬಿಗ್ ಶಾಕ್ ನೀಡಿದೆ. ಜುಲೈ 21ರ ಮಧ್ಯರಾತ್ರಿಯಿಂದಲೇ ಈ ಪರಿಷ್ಕೃತ ದರಗಳು ಜಾರಿಗೆ ಬಂದಿದ್ದು, ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಸೇರಿದಂತೆ ರಾಜ್ಯದ ಹಲವು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ಸಂಚಾರ ಈಗ ಮತ್ತಷ್ಟು ದುಬಾರಿಯಾಗಿದೆ. ವರ್ಷಕ್ಕೆರಡು ಬಾರಿ ಟೋಲ್ ದರ ಹೆಚ್ಚಿಸ್ತಿರೋ ಪ್ರಾಧಿಕಾರದ ಕ್ರಮಕ್ಕೆ ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ: ಕೇವಲ 3 ತಿಂಗಳಲ್ಲಿ 2ನೇ ಬಾರಿಗೆ ದರ ಏರಿಕೆ
2023ರಲ್ಲಿ ಆರಂಭವಾದ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಟೋಲ್ ದರಗಳು ಇದುವರೆಗೂ ಒಟ್ಟಾರೆಯಾಗಿ ಬರೋಬ್ಬರಿ ಶೇ. 37ರಷ್ಟು ಏರಿಕೆಯಾಗಿವೆ. ಇದೀಗ ಕೇವಲ 3 ತಿಂಗಳ ಅಂತರದಲ್ಲಿ ಎರಡನೇ ಬಾರಿಗೆ ದರ ಹೆಚ್ಚಿಸಲಾಗಿದೆ. ಎನ್ಎಚ್-275ರ ಕಣಿಮಿಣಿಕೆ ಮತ್ತು ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ಕಾರು, ಜೀಪ್ ಹಾಗೂ ಲಘು ವಾಹನಗಳ ಏಕಮುಖ ಪ್ರಯಾಣದ ಶುಲ್ಕ 185 ರೂಪಾಯಿಗೆ (ಹಿಂದೆ 180 ರೂ.) ಏರಿಕೆಯಾಗಿದೆ. ಇನ್ನು ಗಣಂಗೂರು ಪ್ಲಾಜಾ ಶುಲ್ಕ ಸೇರಿ ಬೆಂಗಳೂರು ಮತ್ತು ಮೈಸೂರು ನಡುವೆ ಒಮ್ಮೆ ಹೋಗಿ ಬಂದರೆ ಕಾರು ಸವಾರರಿಗೆ ಸರಿಸುಮಾರು 500 ರೂಪಾಯಿ ಬರೆ ಬೀಳಲಿದೆ.
ವಾಣಿಜ್ಯ ವಾಹನಗಳಿಗೂ ಶಾಕ್: ಬಸ್-ಲಾರಿ ಶುಲ್ಕ ಭಾರಿ ಏರಿಕೆ
ಖಾಸಗಿ ಕಾರು ಸವಾರರಿಗೆ ಮಾತ್ರವಲ್ಲ, ಸರಕು ಸಾಗಣೆ ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳಿಗೂ ಈ ದರ ಏರಿಕೆ ಬಿಸಿ ತಟ್ಟಿದೆ. ಲಘು ವಾಣಿಜ್ಯ ವಾಹನಗಳು ಹಾಗೂ ಮಿನಿ ಬಸ್ಗಳಿಗೆ ಕಣಿಮಿಣಿಕೆ ಪ್ಲಾಜಾದಲ್ಲಿ ಏಕಮುಖ ಪ್ರಯಾಣಕ್ಕೆ 295 ರೂ. ಹಾಗೂ ದ್ವಿಮುಖ ಪ್ರಯಾಣಕ್ಕೆ 445 ರೂ. ನಿಗದಿಪಡಿಸಲಾಗಿದೆ. ಇನ್ನು ಬಸ್ ಮತ್ತು ಟ್ರಕ್ಗಳಿಗೆ ಒಮ್ಮೆ ಚಲಿಸಲು 620 ರೂ. ಹಾಗೂ ಹೋಗಿ ಬರಲು 930 ರೂ. ನೀಡಬೇಕು. ಭಾರೀ ಪ್ರಮಾಣದ ಸರಕು ವಾಹನಗಳಿಗೆ ಗರಿಷ್ಠ 1,180 ರೂಪಾಯಿಗಳವರೆಗೆ ಟೋಲ್ ಶುಲ್ಕ ನಿಗದಿಪಡಿಸಲಾಗಿದೆ.
ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಸಂಚಾರವೂ ಕಾಸ್ಟ್ಲಿ
ಬೆಂಗಳೂರು ನಗರದ ಟ್ರಾಫಿಕ್ ತಪ್ಪಿಸಲು ನಿರ್ಮಿಸಲಾಗಿರುವ ದಾಬಸ್ಪೇಟೆ-ದೊಡ್ಡಬಳ್ಳಾಪುರ ನಡುವಿನ 80 ಕಿಮೀ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಸಂಚಾರವೂ ಈಗ ಪ್ರೀಮಿಯಂ ಆಗಿದೆ. ಹುಲಿಕುಂಟೆ ಟೋಲ್ ಪ್ಲಾಜಾದಲ್ಲಿ ಲಘು ವಾಹನಗಳಿಗೆ ಒಮ್ಮೆ ಚಲಿಸಲು 110 ರೂ. ಮತ್ತು ಒಂದೇ ದಿನದಲ್ಲಿ ಹಿಂತಿರುಗಲು 165 ರೂ. ನಿಗದಿಪಡಿಸಲಾಗಿದೆ. ನಲ್ಲೂರು ಪ್ಲಾಜಾದಲ್ಲಿ ಒಮ್ಮೆ ಪ್ರಯಾಣಿಸಲು 85 ರೂ. ತೆರಬೇಕಾಗುತ್ತದೆ. ಸಗಟು ಬೆಲೆ ಸೂಚ್ಯಂಕ (WPI) ಆಧಾರದಲ್ಲಿ ಏಪ್ರಿಲ್ನಲ್ಲಿ ದರ ಹೆಚ್ಚಿಸಿದ್ದ ಪ್ರಾಧಿಕಾರ, ಈಗ ಮತ್ತೆ ಶೇಕಡಾವಾರು ದರ ಹೆಚ್ಚಿಸಿದೆ.
ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ಮತ್ತು ನೆಲಮಂಗಲ ಮಾರ್ಗದಲ್ಲೂ ಶಾಕ್
ರಾಷ್ಟ್ರೀಯ ಎಕ್ಸ್ಪ್ರೆಸ್ವೇ-7 (NE-7) ವಿಭಾಗದ ಹೊಸಕೋಟೆಯಿಂದ ಬೇತಮಂಗಲವರೆಗಿನ 70.7 ಕಿಮೀ ಮಾರ್ಗದಲ್ಲೂ ನೂತನ ದರ ಜಾರಿಯಾಗಿದೆ. ಹೆಡಗಿನಬೆಲೆ, ಅಗ್ರಹಾರ, ಕೃಷ್ಣರಾಜಪುರ ಮತ್ತು ಸುಂದರಪಾಳ್ಯ ಪ್ಲಾಜಾಗಳಲ್ಲಿ ಪ್ರಯಾಣಿಸುವ ದೂರಕ್ಕೆ ತಕ್ಕಂತೆ 30 ರೂ.ನಿಂದ 150 ರೂ.ವರೆಗೂ ಪ್ರತ್ಯೇಕ ಶುಲ್ಕ ನಿಗದಿಪಡಿಸಲಾಗಿದೆ. ಮತ್ತೊಂದೆಡೆ ಅತ್ಯಂತ ಪ್ರಮುಖ ಸಂಪರ್ಕ ಕೊಂಡಿಯಾಗಿರುವ NH-48ರ ಬೆಂಗಳೂರು-ನೆಲಮಂಗಲ 19.5 ಕಿಮೀ ಮಾರ್ಗದಲ್ಲೂ ಕಾರುಗಳಿಗೆ ಒಮ್ಮೆಗೆ 105 ರೂ. ಮತ್ತು ದ್ವಿಮುಖ ಸಂಚಾರಕ್ಕೆ 155 ರೂ. ಶುಲ್ಕ ನಿಗದಿ ಮಾಡಲಾಗಿದೆ.
ಹೈದರಾಬಾದ್, ಕನಕಪುರ & ಮುಲ್ಬಾಗಲ್ ಹೆದ್ದಾರಿಗಳಲ್ಲೂ ದರ ಬಿಸಿ
ಇಷ್ಟಕ್ಕೇ ಮುಗಿಯಲಿಲ್ಲ, ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯ ಬಾಗೇಪಲ್ಲಿ ಪ್ಲಾಜಾದಲ್ಲಿ ಕಾರುಗಳ ಒನ್ವೇ ಪ್ರಯಾಣದ ಶುಲ್ಕ 125 ರೂ. ಹಾಗೂ ಹೋಗಿ ಬರಲು 185 ರೂ. ಆಗಿದೆ. ಜೊತೆಗೆ ಬೆಂಗಳೂರು-ಕನಕಪುರ-ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಮಾರ್ಗದ ಅಟ್ಟಿಗೂಳಿಪುರ, ಸತ್ಯಗಾಲ ಹಾಗೂ ಸೋಮನಹಳ್ಳಿ ಟೋಲ್ ಪ್ಲಾಜಾಗಳಲ್ಲೂ ನೂತನ ದರ ಜಾರಿಯಾಗಿದೆ. ಮುಲ್ಬಾಗಲ್-ಆಂಧ್ರ ಗಡಿಭಾಗದ NH-75ರಲ್ಲೂ ಸಂಚಾರ ವೆಚ್ಚ ಏರಿಕೆಯಾಗಿದ್ದು, ಇಡೀ ರಾಜ್ಯದ ಪ್ರಮುಖ ಹೆದ್ದಾರಿ ಜಾಲವೇ ದುಬಾರಿಯಾಗಿದೆ.
ಉತ್ತರ ಕರ್ನಾಟಕದಲ್ಲೂ ತಪ್ಪದ ಟೋಲ್ ಬಿಸಿ: ಸವಾರರ ಆಕ್ರೋಶ
ಕೇವಲ ರಾಜಧಾನಿ ಬೆಂಗಳೂರು ಸುತ್ತಮುತ್ತ ಅಷ್ಟೇ ಅಲ್ಲದೆ, ಉತ್ತರ ಕರ್ನಾಟಕದ ಪ್ರಮುಖ ಮಾರ್ಗಗಳಲ್ಲೂ ಟೋಲ್ ದರ ಪರಿಷ್ಕರಣೆಯಾಗಿದೆ. ಕಲಬುರಗಿಯ ಹರವಾಳ, ವಿಜಯಪುರ-ಸಂಕೇಶ್ವರ ವಿಭಾಗದ ರಾಂಪುರ ಹಾಗೂ ಬೀದರ್-ಹುಮ್ನಾಬಾದ್ ವಿಭಾಗದ ಖಾದೇರ್ನಗರ ಮತ್ತು ಕಣ್ಣೋಲಿ ಟೋಲ್ ಪ್ಲಾಜಾಗಳಲ್ಲೂ ಹೊಸ ದರಗಳು ಜಾರಿಗೆ ಬಂದಿವೆ. ರಸ್ತೆಗಳ ನಿರ್ವಹಣೆ ಮತ್ತು ಹೈಬ್ರಿಡ್ ಅನ್ಯುಟಿ ಮಾದರಿಯ ಯೋಜನಾ ವೆಚ್ಚ ಮರುಪಡೆಯಲು ಈ ಪರಿಷ್ಕರಣೆ ಅಗತ್ಯ ಎಂದು NHAI ಸಮರ್ಥಿಸಿಕೊಂಡಿದ್ದರೂ, ಪದೇ ಪದೇ ದರ ಏರಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಕಣ್ಣೀರು-ಆಕ್ರೋಶ ವ್ಯಕ್ತವಾಗುತ್ತಿದೆ.



