ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ಇಡೀ ಕರ್ನಾಟಕವೇ ಕೊತಕೊತ ಕುದಿಯುತ್ತಿದೆ. ಇದರ ನಡುವೆ ಇದೀಗ ತಮಿಳುನಾಡಿಗೆ ತಕ್ಷಣವೇ ನೀರು ಹರಿಸಬೇಕು ಎಂದು ಪ್ರಾಧಿಕಾರ ನೀಡಿರುವ ಆದೇಶವನ್ನು “ಅವೈಜ್ಞಾನಿಕ” ಮತ್ತು “ಕರ್ನಾಟಕದ ಜನರಿಗೆ ಮಾಡಿರುವ ಘೋರ ಅನ್ಯಾಯ” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.
ದೆಹಲಿಯ AC ಕೊಠಡಿಯಿಂದ ಆಚೆ ಬನ್ನಿ
ಪ್ರಾಧಿಕಾರದ ಅಧಿಕಾರಿಗಳ ಧೋರಣೆಯನ್ನು ಕಟುವಾಗಿ ಟೀಕಿಸಿರುವ ಹೆಚ್ಡಿಕೆ, ದೆಹಲಿಯ ಎಸಿ ರೂಮ್ಗಳಲ್ಲಿ ಕೂತು ಕೇವಲ ಕಾಗದದ ಮೇಲಿರುವ ಅಂಕಿ-ಅಂಶಗಳನ್ನು ನೋಡಿ ನಿರ್ಧಾರ ತಗೆದುಕೊಳ್ಳುವುದು ಅತ್ಯಂತ ಸುಲಭ. ಅದರ ಬದಲು ಸಿಡಬ್ಲ್ಯುಎಂಎ (CWMA) ಸದಸ್ಯರು ತಕ್ಷಣವೇ ದೆಹಲಿಯಿಂದ ಹೊರಟು ಕರ್ನಾಟಕ ಮತ್ತು ತಮಿಳುನಾಡಿನ ಜಲಾಶಯಗಳ ಬಳಿಗೆ ಬರಬೇಕು. ಕೆಆರ್ಎಸ್, ಹಾರಂಗಿ, ಕಬಿನಿ, ಹೇಮಾವತಿ ಹಾಗೂ ಮೆಟ್ಟೂರು ಅಣೆಕಟ್ಟುಗಳಿಗೆ ಖುದ್ದಾಗಿ ಭೇಟಿ ನೀಡಿ ಇಲ್ಲಿನ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲಿ ಎಂದು ನೇರ ಸವಾಲು ಹಾಕಿದ್ದಾರೆ.
ಡೆಡ್ ಸ್ಟೋರೇಜ್ ಕಥೆ ಏನು? ಹೆಚ್ಡಿಕೆ ಲೆಕ್ಕಾಚಾರ
ಕರ್ನಾಟಕದಲ್ಲಿ ಸದ್ಯಕ್ಕೆ ಲಭ್ಯವಿರುವ ನೀರಿನ ನಿಖರ ಲೆಕ್ಕಾಚಾರವನ್ನು ಬಿಚ್ಚಿಟ್ಟ ಕುಮಾರಸ್ವಾಮಿ, ರಾಜ್ಯದ ಜಲಾಶಯಗಳಲ್ಲಿ ಈಗಿರುವುದು ಕೇವಲ 54 ರಿಂದ 55 ಟಿಎಂಸಿ ನೀರು ಮಾತ್ರ. ಇದರಲ್ಲಿ ಬರೋಬ್ಬರಿ 10 ಟಿಎಂಸಿ ನೀರು ‘ಡೆಡ್ ಸ್ಟೋರೇಜ್’. ಅಂದರೆ ಬಳಸಲು ಸಿಗುವುದು ಬರಿ 44 ಟಿಎಂಸಿ ನೀರು. ಇದರಲ್ಲಿ ಬೆಂಗಳೂರು ನಗರದ ಕುಡಿಯುವ ನೀರಿಗೇ 30 ಟಿಎಂಸಿ ಬೇಕು, ಇನ್ನು ಪರಿಸರ ಸಂರಕ್ಷಣೆ ಅಂತ 10 ಟಿಎಂಸಿ ಕಾಯ್ದಿರಿಸಬೇಕು. ಹೀಗಿರುವಾಗ ತಮಿಳುನಾಡಿಗೆ ನೀರು ಹರಿಸಲು ಎಲ್ಲಿಂದ ತರಬೇಕು? ಎಂದು ಪ್ರಶ್ನಿಸಿದ್ದಾರೆ.
ಅಂದಾಜು ಲೆಕ್ಕದ ಮೇಲೆ ಆದೇಶ ಕೊಡೋದು ಸರಿಯೇ?
ಮಳೆ ಸರಿಯಾಗಿ ಆಗದೆ ನಮ್ಮ ಜಲಾಶಯಗಳೇ ಭರ್ತಿಯಾಗಿಲ್ಲ. ಇಂತಹ ಕಷ್ಟದ ಸನ್ನಿವೇಶದಲ್ಲಿ ಮುಂದೆ ಮಳೆ ಬರಬಹುದು, ನೀರು ಹರಿಯಬಹುದು ಎಂಬ ಕೇವಲ ಅಂದಾಜು ಲೆಕ್ಕಾಚಾರದ ಮೇಲೆ ನೆರೆಯ ರಾಜ್ಯಕ್ಕೆ ನೀರು ಬಿಡಿ ಎಂದು ಆದೇಶಿಸುವುದು ಯಾವ ನ್ಯಾಯ? ಇದು ಪ್ರಾಯೋಗಿಕವೂ ಅಲ್ಲ, ವೈಜ್ಞಾನಿಕವೂ ಅಲ್ಲ ಎಂದು ಹೆಚ್ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದೆ ಹರಿಯುವ ನೀರನ್ನು ನೆಚ್ಚಿಕೊಂಡು ಈಗಿರುವ ಕುಡಿಯುವ ನೀರನ್ನು ಖಾಲಿ ಮಾಡುವುದು ಕರ್ನಾಟಕಕ್ಕೆ ಕಂಪ್ಲೀಟ್ ಮಾರಕ ಎಂದಿದ್ದಾರೆ.
ಬೆಳೆ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಕನ್ನಡಿಗ
ಒಂದೆಡೆ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೆ, ಇನ್ನೊಂದೆಡೆ ನಮ್ಮ ರಾಜ್ಯದ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಹಗಲು-ರಾತ್ರಿ ಕಷ್ಟಪಡುತ್ತಿದ್ದಾರೆ. ಇಂತಹ ಭೀಕರ ಸನ್ನಿವೇಶದಲ್ಲಿ ಪ್ರಾಧಿಕಾರ ಕಣ್ಣು ಮುಚ್ಚಿಕೊಂಡು ತಮಿಳುನಾಡಿಗೆ ನೀರು ಹರಿಸಲು ಆದೇಶಿಸುತ್ತಿರುವುದು ಕನ್ನಡಿಗರ ಗಾಯದ ಮೇಲೆ ಬರೆ ಎಳೆದಂತಾಗಿದೆ. ರೈತರ ಕಣ್ಣೀರು ದೆಹಲಿಯಲ್ಲಿ ಕೂತವರಿಗೆ ಕಾಣಿಸುತ್ತಿಲ್ಲವೇ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಪಕ್ಷ ಭೇದ ಮರೆತು ಬೀದಿಗಿಳಿಯೋಣ
ಕಾವೇರಿ ವಿಚಾರ ಬಂದಾಗ ಪ್ರತಿಯೊಬ್ಬ ಕನ್ನಡಿಗನೂ ಒಂದಾಗಬೇಕಿದೆ. ನೆಲ, ಜಲ ಮತ್ತು ರಾಜ್ಯದ ಹಿತಾಸಕ್ತಿ ಕಾಪಾಡುವ ವಿಷಯದಲ್ಲಿ ಯಾವುದೇ ರಾಜಕೀಯ ಇಲ್ಲ. ಎಲ್ಲಾ ರಾಜಕೀಯ ಪಕ್ಷಗಳು, ರೈತ ಸಂಘಟನೆಗಳು ಹಾಗೂ ಸಾರ್ವಜನಿಕರು ತಮ್ಮಲ್ಲೇ ಇರುವ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಒಗ್ಗಟ್ಟಿನಿಂದ ಕಾವೇರಿ ಕಾಯಲು ಬೀದಿಗಿಳಿದು ಪ್ರತಿಭಟಿಸಬೇಕಾಗಿದೆ ಎಂದು ಹೆಚ್ಡಿಕೆ ಕರೆ ನೀಡಿದ್ದಾರೆ.
ಹೋರಾಟ ತೀವ್ರಗೊಳ್ಳುವ ಸೂಚನೆ
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೆಚ್ಡಿಕೆ ನೀಡಿರುವ ಈ ಹೇಳಿಕೆ ಈಗ ರಾಜ್ಯಾದ್ಯಂತ ಬೃಹತ್ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರದಲ್ಲೇ ಸಚಿವರಾಗಿದ್ದುಕೊಂಡು ಪ್ರಾಧಿಕಾರದ ಏಕಪಕ್ಷೀಯ ತೀರ್ಮಾನದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿರುವುದು ಕಾವೇರಿ ಹೋರಾಟಕ್ಕೆ ಮತ್ತಷ್ಟು ಬಲ ತಂದಿದೆ. ಬರುವ ದಿನಗಳಲ್ಲಿ ಕಾವೇರಿ ವಿಚಾರವಾಗಿ ರಾಜ್ಯದಲ್ಲಿ ಬೃಹತ್ ಮಟ್ಟದ ಪ್ರತಿಭಟನೆಗಳು ರೂಪುಗೊಳ್ಳುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.



