: ಮುಂಬರುವ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ಮುಂಬೈನ ಪ್ರತಿಭಾವಂತ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ಗೆ ಹೆಚ್ಚು ಅವಕಾಶಗಳನ್ನು ನೀಡಬೇಕು ಎಂದು ಭಾರತ ತಂಡ ಮಾಜಿ ಸೆಲೆಕ್ಟರ್ ದೇವಾಂಗ್ ಗಾಂಧಿ ಬ್ಯಾಟ್ ಬೀಸಿದ್ದಾರೆ.
ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ ಫಲವಾಗಿ ಸೂರ್ಯಕುಮಾರ್ ಯಾದವ್ಗೆ ಕೊನೆಗೂ ಅವಕಾಶದ ಬಾಗಿಲು ತೆರೆದಿದ್ದು, ಪ್ರವಾಸಿ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಕ್ರಿಕೆಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮುಂಬೈ ಇಂಡಿಯನ್ಸ್ ಪರ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಭಾರಿ ಯಶಸ್ಸು ಕಂಡಿರುವ ಸೂರ್ಯಕುಮಾರ್ ಯಾದವ್ 35.40ರ ಸರಾಸರಿ ಕಾಯ್ದುಕೊಂಡು 135.76ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಹೀಗಾಗಿ ಅವರನ್ನು ಮಧ್ಯಮ ಕ್ರಮಾಂಕದಲ್ಲೇ ಆಡಿಸಬೇಕು. ಅದಕ್ಕಿಂತಲೂ ಕೆಳ ಕ್ರಮಾಂಕ ಕೊಟ್ಟರೆ ಪ್ರಯೋಜನವಿಲ್ಲ ಎಂದು ದೇವಾಂಗ್ ಗಾಂಧಿ ಅಭಿಪ್ರಾಯ ಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಭಾರತದ ಏಕದಿನ ಕ್ರಿಕೆಟ್ ತಂಡದಲ್ಲೂ ಸೂರ್ಯಕುಮಾರ್ಗೆ ಅವಕಾಶ ಸಿಗಬೇಕು ಎಂದಿದ್ದಾರೆ.
“ಸೂರ್ಯಕುಮಾರ್ ಮುಂಬೈ ಇಂಡಿಯನ್ಸ್ ಪರ ಅದ್ಭುತ ಯಶಸ್ಸು ಕಂಡಿದ್ದಾರೆ. ಮಧ್ಯಮ ಕ್ರಮಾಂಕ ಅವರಿಗೆ ಹೇಳಿ ಮಾಡಿಸಿರುವಂಥದ್ದಾಗಿದೆ. ವಿಶ್ವಕಪ್ಗೆ ಬಲಿಷ್ಠ ತಂಡ ಕಟ್ಟುವ ಉದ್ದೆಶದಿಂದ ಸೂರ್ಯಕುಮಾರ್ ಕಡೆಗೆ ಗಮನ ನೀಡಿದ್ದರೆ, ನೀವು ಅವರಿಗೆ ಸಾಧ್ಯವಾದಷ್ಟು ಹೆಚ್ಚು ಅವಕಾಶಗಳನ್ನು ನೀಡಬೇಕು. ಏಕದಿನ ಕ್ರಿಕೆಟ್ ತಂಡದಲ್ಲೂ ಅವರನ್ನು ಆಡಿಸಬೇಕು,” ಎಂದಿದ್ದಾರೆ.
“ಭಾರತ ತಂಡದ ಮಧ್ಯಮ ಕ್ರಮಾಂಕ ಭದ್ರವಾಗಿದೆ. ಹೀಗಾಗಿ ಸೂರ್ಯಕುಮಾರ್ಗೆ ಅವಕಾಶ ಸಿಗುವುದು ಅನುಮಾನವಾಗಿದೆ. ಈಗ ತಂಡ ಹೇಗಿದೆ ಹಾಗೇ ಮುಂದುವರಿಯಲಿ ಎಂಬುದು ನನ್ನ ಅಭಿಪ್ರಾಯ. ನಾಲ್ಕನೇ ಕ್ರಮಾಂಕಕ್ಕೆ ನನ್ನ ಪ್ರಕಾರ ಶ್ರೇಯಸ್ ಅಯ್ಯರ್ ಸೂಕ್ತ ಬ್ಯಾಟ್ಸ್ಮನ್ ಆಗಿದ್ದಾರೆ,” ಎಂದು ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಲಕ್ಷ್ಮಣ್ ಹೇಳಿದ್ದಾರೆ.
“ರಿಷಭ್ ಪಂತ್ ತಂಡಕ್ಕೆ ಮರಳಿ 5ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬೇಕು. 6ನೇ ಕ್ರಮಾಂದಲ್ಲಿ ಹಾರ್ದಿಕ್ ಪಾಂಡ್ಯ ಇದ್ದಾರೆ. ಹೀಗಾಗಿ ಸೂರ್ಯಕುಮಾರ್, ಇಶಾನ್ ಕಿಶನ್ ಮತ್ತು ತೆವಾಟಿಯಾಗೆ ಅವಕಾಶ ಸಿಗುವುದು ಅನುಮಾನ. ಇನ್ನು ಹೇಗಾದರೂ ಅವಕಾಶ ಸಿಕ್ಕರೆ ಅದನ್ನು ಸದ್ಭಳಕೆ ಮಾಡಿಕೊಳ್ಳಲಿದ್ದಾರೆ,” ಎಂದಿದ್ದಾರೆ.