ಸ್ವಾರ್ಥ ತುಂಬಿದ ಜಗತ್ತಲ್ಲಿ ನಿಸ್ವಾರ್ಥಿಗಳನ್ನು ಹುಡುಕುವುದು ಕಷ್ಟ. ಕೆಲವೊಮ್ಮೆ ಅಂಥಾ ಮಾನವೀಯ ಮೇರು ವ್ಯಕ್ತಿತ್ವಗಳು ನಮ್ಮ ನಡುವೆ ಇದ್ದರೂ ನಮಗೇ ಅವರ ಬಗ್ಗೆ ಅರಿವಿರುವುದಿಲ್ಲ. ಪಬ್ಲಿಸಿಟಿಗಾಗಿ ಕೆಲಸ ಮಾಡುವವರ ನಡುವೆ ನಿಸ್ವಾರ್ಥ ಸೇವೆ ಸಲ್ಲಿಸುವವರು ಗೌಣವಾಗಿ ಬಿಡುವುದು ವಿಪರ್ಯಾಸವೇ ಸರಿ. ಹೀಗೆ ಸ್ವಾರ್ಥವಿಲ್ಲದೆ ಸೇವಾ ಮನೋಭಾವದಿಂದ ಶ್ರಮಿಸುತ್ತಿರುವ ತೆರೆಮರೆಯ ಹೀರೋ ಗಡಿನಾಡು ಮಂಜೇಶ್ವರದ ಹರೀಶ್ ಅಲಿಯಾಸ್ ಅನಿಲ್ ಹರೀಶ್ ಕುಮಾರ್.
ಯಾರಿಗಾದರೂ ಹುಷಾರಿಲ್ಲ…ತತ್ ಕ್ಷಣ ಆಸ್ಪತ್ರೆಗೆ ಸೇರಿಸಬೇಕು, ಆ್ಯಂಬುಲೆನ್ಸ್ ಸೌಲಭ್ಯ ಕೂಡ ಇಲ್ಲ… ಏನ್ ಮಾಡೋದು ಅಂತ ಮಂಜೇಶ್ವರ ಮತ್ತು ಸುತ್ತಮುತ್ತಲಿನ ಜನ ತಲೆಕಡೆಸಿಕೊಳ್ಳಲ್ಲ! ಯಾಕಂದರೆ ಅವರಿಗೆ ಆಪತ್ಬಾಂಧವ ಹರೀಶ್ ಇದ್ದಾರೆ ಎಂಬ ಅಭಯ..ಅಚಲ ಧೈರ್ಯ.
ತನ್ನ ಕುಟುಂಬದ ಜವಬ್ದಾರಿ ಜೊತೆಜೊತೆಗೆ ಇನ್ನೊಬ್ಬರ ಕಷ್ಟಗಳ ಮಿಡಿಯುಚ ಹೃದಯವಂತ. ಯಾರು ಎಷ್ಟೊತ್ತಿಗೇ ಕರೆದರು, ಯಾವ ಆಸ್ಪತ್ರೆಗೆ ಬೇಕಾದರೂ ಕೂಡಲೇ ಹೊರಟು ಬರುತ್ತಾರೆ. ಇದೀಗ ಕೋವಿಡ್ ಸಮಯದಲ್ಲೂ ತನ್ನ ಸೇವೆ ಮುಂದುವರೆಸಿದ್ದಾರೆ. ಕಳೆದ ವರ್ಷ ಕೂಡ ಕೊರೊನಾ ವಾರಿಯರ್ ಆಗಿ ಸೇವೆ ಮಾಡಿದ್ದ ಹರೀಶ್ ಈಗಲೂ ಕಷ್ಟದಲ್ಲಿರುವವರ ನೆರವಿಗೆ ನಿಲ್ಲುತ್ತಿದ್ದಾರೆ
ಕೋವಿಡ್ ಸೋಂಕಿತರನ್ನು ಕುಟುಂಬದವರೇ ಅನಿವಾರ್ಯವಾಗಿ ದೂರ ಇಡುವ ಕೆಟ್ಟ ಸ್ಥಿತಿ ಇದೆ. ಕೆಲವರು ಕೋವಿಡ್ ವರದಿ ಬರುವ ಮುನ್ನವೇ ಲಕ್ಷಣ ಕಂಡು ಬಂದರೂ ಸಾಕು, ಸಾಮಾನ್ಯ ಜ್ವರವಿದ್ದರೂ ದೂರ ಇಟ್ಟುಬಿಡುತ್ತಾರೆ.
ಆದರೆ, ಹರೀಶ್ ಅಂತಹವರ ಸೇವೆಗೆ ಮುಂಚೂಣಿಯಲ್ಲಿ ನಿಂತು ಮಾದರಿಯಾಗಿದ್ದಾರೆ.
ಆಸ್ಪತ್ರೆಗೇ ಕರೆದುಕೊಂಡು ಹೋಗಲು ಯಾರೂ ಇಲ್ಲದಿದ್ದರೆ ಗುಣಮುಖರಾಗುವುದಾದರೂ ಹೇಗೆ, ಯಾರ ಪರಿಸ್ಥಿತಿ ನಾಳೆ ಹೇಗೋ..ಇರುವಷ್ಟುದಿನ ನಾಲ್ಕು ಮಂದಿಗೆ ಉಪಕಾರಿಗಳಾಗಿರಬೇಕು ಎಂಬ ಮನೋಭಾವದ ಹರೀಶ್…ಕೊರೊನಾ ಸೋಂಕಿತರನ್ನು , ಲಕ್ಷಣ ಇರುವವರ ನೆರವಿಗೆ ನಿಂತಿದ್ದಾರೆ. ತಾನು ಮುಂಜಾಗ್ರತಾ ಕ್ರಮ ಅನುಸರಿಕೊಂಡು ಆಸ್ಪತ್ರೆ ಕರೆದೊಯ್ಯುತ್ತಾರೆ.
ಯಾರ ಬಳಿಯೂ ಇಂತಿಷ್ಟೇ ಬಾಡಿಗೆ ಕೊಡಿ ಎಂದು ಕೇಳಲ್ಲ.ಕೊಟ್ಟಷ್ಟು ಪಡೆಯುತ್ತಾರೆ! ಕೆಲವೊಮ್ಮೆ ಒಂದು ರೂ ಪಡೆಯದೇ ಕೆಲಸ ಮಾಡುವುದೂ ಉಂಟು!
ಮಂಜೇಶ್ವರ ಹಾಗೂ ಸುತ್ತಮುತ್ತಲಿನ ಜನರಿಗೆಲ್ಲಾ ಹರೀಶ್ ಚಿರಪರಿಚಿತ…ಎಲ್ಲರಿಗೂ ಬೇಕಾಗಿರುವ , ಎಲ್ಲರ ಮನೆಮಗನಂತಿರುವ ವ್ಯಕ್ತಿ. ಎನಿವೇ ಹರೀಶ್ ಅವರಿಗೆ ಶುಭವಾಗಲಿ..ಸದಾ ಇಂತಹ ಸೇವೆ ಮಾಡುವ ಹಾಗೂ ಅವರು ಬಯಸಿದ ಯಶಸ್ಸು , ಕೀರ್ತಿ ಎಲ್ಲವನ್ನೂ ದೇವರು ಕರುಣಿಸಲಿ ಎಂಬ ಶುಭಹಾರೈಕೆ